ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎರಡು ಮಾತು

ನನ್ನ ಸಹಧರ್ಮಿಣಿಯ ಕಥಾ ಸಂಗ್ರಹವೊಂದನ್ನು ಜಯಕರ್ನಾಟಕ ಗ್ರಂಥಮಾಲೆಯ ಕುಸುಮವಾಗಿ ಪ್ರಕಟಿಸುವ ಸಂತೋಷಜನಕವಾದ ಸಂದರ್ಭವು ಇದೀಗ ಒದಗಿದೆ. ಅದು ತೀರ ಅಕಲ್ಪಿತವಾಗಿ ಬಂದಿತು. ಆಕೆ ನನಗೆ ಹಿಂದಕ್ಕೆ ಬರೆದ ಕೆಲವು ಪತ್ರಗಳಲ್ಲಿಯ ಕಥನಸರಣಿಯು ನನ್ನಲ್ಲಿ ಕೌತುಕವನ್ನುಂಟು ಮಾಡಿತು, ಆಗ “ ಪ್ರಚ್ಛನ್ನ ಕವಯಿತ್ರಿ ' ಯೆಂದು ವಿನೋದದಿಂದ ಆಕೆಯನ್ನು ಕರೆದಿದ್ದೆನು, ಅದು ನಾಲ್ಕಾರು ವರ್ಷಗಳ ಹಿಂದಿನ ಮಾತು. ಇಲ್ಲಿಯ ಕತೆಗಳನ್ನು ಹೇಳುವ ಬಗೆ, ಅವುಗಳಲ್ಲಿ ಮಿಡಿಯುವ ಜೀವ-ಇವು ಕತೆಗಾರ್ತಿಯು ಅಪಕ್ವ ದೆಸೆಯನ್ನು ದಾಟಿದುದನ್ನು ತೋರಿಸುತ್ತಿವೆಯೆಂದು ನನ್ನ ಭಾವನೆ, ಹೆಚ್ಚು ಬರೆಯುವುದು ಸಮಂಜಸವಾಗಲಿಕ್ಕಿಲ್ಲವಾದುದರಿಂದ ಓದುಗರಿಗೆ ಈ ಮಾತಿನ ನಿಷ್ಕರ್ಷೆಯನ್ನು ಒಪ್ಪಿಸುವೆನು.

ಆದರೂ, ಶ್ರೀ ಆನಂದಕಂದರು ಹೇಳಿರುವಂತೆ... ಉತ್ತರ ಕರ್ನಾಟಕದ ಸಾಹಿತ್ಯಕ್ಷೇತ್ರದಲ್ಲಿ ಪ್ರಥಮ ಪದಾರ್ಪಣ - ಮಾಡುತ್ತಲಿರುವ ಈ ಪ್ರಥಮ ಸ್ತ್ರೀಲೇಖಕರಿಗೆ ಸುಸ್ವಾಗತವನ್ನೀಯುವುದು ನನ್ನ ಕರ್ತವ್ಯ.

ಶ್ರೀ, ಜೈನೇಂದ್ರಕುಮಾರರ ಕಥಾಸಂಗ್ರಹವನ್ನು ಕನ್ನಡಿಸಿ ಕೊಡುವುದಾಗಿ ಮಾಡಿದ ಮೊದಲನೆಯ ನಿರ್ಣಯವು ತಪ್ಪಿ, ಏನೂ ನಿರೀಕ್ಷೆಯಿಲ್ಲದೆ ಈ ಕಥಾಲಹರಿಯನ್ನು ಗ್ರಂಥಮಾಲೆಯ ವಾಚಕರಿಗೆ ಸಲ್ಲಿಸಿದುದಾಯಿತು. ಇದರಲ್ಲಿಯ ' ನನ್ನನ್ನು ನೋಡಲಿಕ್ಕೆ ಬಂದಾಗ, ಎಂಬ ಕತೆಯು ಜಯಕರ್ನಾಟಕದ ೧೯೩೪ರ ಮಾರ್ಚ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿತ್ತು. 'ನಡೆದು ಬಂದ ಲಕ್ಷ್ಮಿ' ಹೋದ ವರ್ಷದ 'ನೀಳ್ಗತೆಗಳು' ಎಂಬ ಜ. ಕ. ಗ್ರಂಥಮಾಲೆಯ ಪ್ರಕಟನೆಯಲ್ಲಿ ಒಂದು ಕತೆಯಾಗಿದ್ದಿತು.

ಬೆಳಗಾವಿ ರಾಮಚಂದ್ರರಾಯರು
ಧಾರವಾಡ ತಾ, ೨೨-೧೨-೩೬