ಪುಟ:AAHVANA.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

ಆ ಕಾರಣದಿಂದ, ಎರಡು ವರ್ಷಗಳಿಗೆ ಹಿಂದಿನ ಪರಿಸ್ಥಿತಿಯನ್ನು ಅನುಲಕ್ಷಿಸಿ ಬರೆಯಲಾದ ಈ "ಆಹ್ವಾನ" ನಾಟಕ ಮಾಲಿಕೆ, ಆಗ ಎಷ್ಟು ಸಮಂಜಸವಾಗಿತ್ತೊ ಈಗಲೂ ಅಷ್ಟೇ ಸಮಂಜಸವಾಗಿದೆ. ರಾಷ್ಟ್ರೀಯ ಅನೈಕ್ಯ ಕೊನೆಗಾಣುವವರೆಗೂ ಈ ಕೃತಿಗೆ ಅಳಿವಿಲ್ಲ__ಎಂಬುದು ಈ ಲೇಖಕನ ದೃಢ ವಿಶ್ವಾಸವಾಗಿದೆ.

ಆಗಾಗ್ಗೆ ಓದುವುದಕ್ಕೂ ನಿದ್ಯಾರ್ಥಿಮೇಳಗಳಲ್ಲಿ, ವಾರ್ಷಿಕೋತ್ಸವಗಳಲ್ಲಿ, ಸಭೆ ಸಮಾರಂಭಗಳಲ್ಲಿ ಕಲಾವಿಲಾಸಿಗಳು ಅಭಿನಯಿಸುವುದಕ್ಕೂ, ಈ ನಾಟಕ ಮಾಲಿಕೆ ಉಪಯುಕ್ತವೆನಿಸುವುದೆಂದು ನಾನು ನಂಬಿದ್ದೇನೆ. ಇದರ ವಸ್ತು ಭಾರತ__ಎಂದು ಮುನ್ನುಡಿಯ ಆರಂಭದಲ್ಲಿ ಹೇಳಿದೆ. ಇದನ್ನೋದಿದ ಬಳಿಕ, ಅಥವಾ ರಂಗಭೂಮಿಯ ಮೇಲೆ ಇದರ ಪ್ರಯೋಗಗಳನ್ನು ನೋಡಿದ ಬಳಿಕ, ಭಾರತವನ್ನು ಕುರಿತ ನಮ್ಮ ಜನರ ತಿಳಿವಳಿಕೆ ತುಸು ಹೆಚ್ಚುವುದು ಇಲ್ಲವೆ ನಿಚ್ಚಳವಾಗುವುದು ಎಂದು ನಾನು ಭಾವಿಸಿದ್ದೇನೆ.

೧೫ ಆಗಸ್ಟ್ ೧೯೬೩,

__ನಿರಂಜನ

ಜಯನಗರ
ಬೆಂಗಳೂರು_೧೧