ಪುಟ:Abhaya.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೪

ಅಭಯ

ಕಲ್ಪನೆ ಬರಿಯ ಭ್ರಮೆಯಾಗಿತ್ತು. ಆ ಕಲ್ಪನೆಯ ಮಧುರತೆಯೇ ಅವರ
ಪಾಲಿಗೆ ಉಳಿದಿದ್ದ ನೆನಪು. ಅದಕ್ಕೆ ಸಾಕ್ಷ್ಯವಾಗಿ, ಆ ದಿನ ಉಟ್ಟಿದ್ದುದೇ
ಅವರ ಮೆಚ್ಚುಗೆಯ ಸೀರೆಯಾಗಿತ್ತು. ಅಂದಿನಿಂದ ಆಗಾಗ್ಗೆ ಅಂತಹ
ಸೀರೆಯೊಂದನ್ನು ಅವರು ಕೊಳ್ಳುತ್ತ ಬಂದಿದ್ದರು.
ತುಂಗಮ್ಮ ಅಭಯಧಾಮಕ್ಕೆ ಬಂದ ಮೂರನೆಯ ದಿನವೆ, ಬದಲಿ
ಉಟ್ಟುಕೊಳ್ಳಲೆಂದು ಆಕೆಗೊಂದು ಸೀರೆಯನ್ನು ಸರಸಮ್ಮ ಕೊಡಬೇಕಾ
ಯಿತು. ಆಗ, ಹೆಚ್ಚುಕಡಿಮೆ ಹೊಸದೇ ಆಗಿದ್ದ ತಮ್ಮ ಮೆಚ್ಚುಗೆಯ
ಸೀರೆಯನ್ನೇ ಅವರು ಕೊಟ್ಟರು.
ಆದರೆ ಆ ಸೀರೆಗೆ ಸರಸಮ್ಮನ ಬಾಳ್ವೆಯಲ್ಲಿದ್ದ ವಿಶಿಷ್ಟಸ್ಥಾನದ ವಿಷಯ
ಹುಡುಗಿಯರಿಗೆ ತಿಳಿದಿರಲಿಲ್ಲ - ಜಲಜೆಗೂ ಕೂಡಾ. ಅದು, ಸರಸಮ್ಮ
ಭದ್ರವಾಗಿ ತಮ್ಮೊಳಗೇ ಕಾಯ್ದಿಟ್ಟುಕೊಂಡಿದ್ದ ಪವಿತ್ರ ರಹಸ್ಯವಾಗಿತ್ತು.
ಅದೊಂದನ್ನೂ ತಿಳಿಯದೆಯೇ ತುಂಗಮ್ಮ ಆ ಸೀರೆಯನ್ನುಟ್ಟಿದ್ದ ತುಂಗಮ್ಮ
ನನ್ನು ನೋಡಿದಾಗ ಮಾತ್ರ ಸರಸಮ್ಮನಿಗೆ ತಮ್ಮದೇ ಬದುಕಿನ ಕಳೆದು
ಹೋದ ಅಧ್ಯಾಯವೊಂದು ನೆನಪಿಗೆ ಬರುತಿತ್ತು.
ಆಗ ಅವರು ಮನಸಿನಲ್ಲೆ ಅಂದುಕೊಳ್ಳುತಿದ್ದರು:
ತುಂಗಮ್ಮನ ಬಾಳು ಹಸನಾಗಬೇಕು. ಆಕೆ ಸುಖ ಕಾಣಬೇಕು.
ಆಕೆಯ ಬದುಕಿನ ಗಿಡ ಬೆಳೆದು ಹೆಮ್ಮರವಾಗಬೇಕಲ್ಲದೆ, ಈಗಲೆ ಬಾಡಿ
ಒಣಗಿ ಹೋಗಬಾರದು....
"ಯಾಕೆ ದೊಡ್ಡಮ್ಮ, ಹಾಗೆ ನೋಡ್ತಿದೀರಿ ನನ್ನ ?"
ಯೋಚನೆಗಳ ನಾವೆ ಕುಲುಕಿದಂತಾಗಿ ಸರಸಮ್ಮ ಎಚ್ಚರಗೊಂಡರು.
"ಅಯ್ಯೊ, ಯಾಕೂ ಇಲ್ಲ. ನೋಡ್ಬಾರೇನೆ ನಿನ್ನ ?"
"ದೃಷ್ಟಿತಾಕುತ್ತೆ" ಎನ್ನುವ ಉತ್ತರ ತುಂಗಮ್ಮನ ನಾಲಿಗೆಯ ತುದಿಗೆ
ಬಂತು. ಆದರೆ ಹಾಗೆ ಹೇಳುವ ಧೈರ್ಯಸಾಲದೆ ಅದನ್ನು ಆಕೆ ತಡೆ
ಹಿಡಿದಳು. ಅದರ ಬದಲು ಆಕೆಯ ತುಟಿಗಳಮೇಲೆ ನಗು ರೂಪು
ಗೊಂಡಿತು.
ಆಗ ಒಮ್ಮೆಲೆ, ತಮಗೇ ಅನಿರೀಕ್ಷಿತವೆಂದು ತೋರಿದ ರೀತಿಯಲ್ಲಿ,
ಸರಸಮ್ಮ ಕೇಳಿದರು: