ಪುಟ:Abhaya.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಭಯ

೧೮೩

ನಿಲ್ದಾಣದ ರಸ್ತೆಯಲ್ಲೇ ಇದ್ದ ಉಡುಪಿ ಬ್ರಾಹ್ಮಣರ ಹೊಟೆಲಿನಲ್ಲಿ ಒಂದಿಷ್ಟು ತಿಂಡಿತಿಂದು, ಅರ್ಧ ಹಾದಿ ನಡೆದು, ಅರ್ಧ ಹಾದಿ ಜಟಕಾ ಗೊತ್ತು ಮಾಡಿ, ಅಭಯಧಾಮ ತಲಸಿದ್ದರು

....ಮಾತನಾಡುತ್ತಾ ಹೊತ್ತು ಕಳೆದಿತ್ತು. ಅದನ್ನು ಗಮನಿಸುತ್ತಾ ತುಂಗಮ್ಮಕೆ ತಂದೆ ಹೇಳಿದರು:

" ನನ್ನದೊಂದು ಸಣ್ಣ ಕೋರಿಕೆ ಇದೆ. ನಡೆಸಿಕೊಡ್ತೀರಾ?"

" ಏನು, ಹೇಳಿ"

"ಮಗಳ್ನ ಕರಕೊಂಡು ಒಂದಿಷ್ಟು ಪೇಟೆಕಡೆ ಹೋಗಿಬರ್‍ಲಾ?"

ಆ ಪ್ರಶ್ನೆ ರೂಪುಗೊಳ್ಳುತಿದ್ದಂತೆಯೇ ಒಪ್ಪಿಗೆಯ ಉತ್ತರವನ್ನೀಯುವ ತೀವ್ರ ನಿರ್ಧಾರವನ್ನು ಸರಸಮ್ಮ ಮಾಡಿದರು.

" ಹಾಗೆಯೇ ಆಗ್ಲಿ. ಊಟ ದದ ಹೊತ್ತಿಗೆ ತಂದು ಬಿಡ್ತೀರಾ? ನಿಮ್ಮನ್ನಂತೂ ಕರಿಯೋ ಸ್ಥಿತೀಲಿ ನಾವಿಲ್ಲ!"

" ನೀವು ಒಪ್ಪೋದಾದರೆ ತಂದೆ ಮಕ್ಕಳೆಲ್ಲಾ ಜತೆಯಾಗಿಯೇ ಇವತ್ತು ಹೋಟೆಲಿನಲ್ಲಿ ಊಟಿಮಾಡ್ತೀವಿ.

ಆಗಲಿ ಅದಕ್ಕೇನಂತೆ?"

__ಎಂದರು ಸರಸಮ್ಮ ನಗುತ್ತ. ಅರೆಕ್ಷಣ, ಹೊರಹೋಗುವ ತುಂಗಮ್ಮ ಮತ್ತೆ ಬರುವಳೋ ಇಲ್ಲವೊ ಎಂಬ ಶಂಕೆ ಅವರನ್ನು ಬಾಧಿಸಿತು, ಆದರೆ, ನೋವಿನಿಂದ ಜರ್ಜರಿತವಾಗಿದ್ದರೂ ಪ್ರಾಮಾಣಿಕತೆಯನ್ನೆ ಪ್ರತಿ ಪಾದಿಸುತಿದ್ದ ನಿವೃತ್ತ ಉಪಾಧ್ಯಾಯರ ಮುಖವನ್ನು ಕಂಡಾಗ, 'ಛೆ-ಎಂಥ ಯೋಚ್ನೆ' - ಎಂದು ಅವರಿಗೆ ಲಜ್ಜೆಯಾಯಿತು.

ಆ ದಿನ ತುಂಗಮ್ಮ ತನ್ನದೇ ಸೀರೆಯುಟ್ಟುಕೊಂಡಿದ್ದಳು.

" ತಂದೆ ಜತೇಲೆ ಹೋಗ್ಬಿಟ್ಟು ಬರ್‍ತೀಯೇನಮ್ಮ?"

__ಎಂದು ಸರಸಮ್ಮ ಕೇಳಿದಾಗ ಸಂತೋಷದಿಂದ ಕತ್ತು ಕೊಂಕಿಸಿದ ತುಂಗಮ್ಮ, ಮುಖ ತೊಳೆದುಕೊಂಡು ಬಂದು ಸಿದ್ಧಳಾಗಲು ಬಹಳ ಹೊತ್ತು ಹಿಡಿಯಲಿಲ್ಲ. ಜಲಜ ಆಕೆಗೆ ಹೆರಳು ಹಾಕಿದಳು.

ಕೈಸನ್ನೆ ಮಾಡಿ ದೊಡ್ಡಮ್ಮನನ್ನು ಹೊರಗೆ ಕರೆದಳು ಜಲಜ.

" ಏನಮ್ಮ?"