೧೮೯ ಅಭಯ
"ಜಲಜ, ಲಲಿತಾ, ಸಾವಿತ್ರಿ, ಸುಂದ್ರಾ-ಕಲ್ಯಾಣೀಗೇಂತ ತಗೊಂಡ್ಬಂದೆ."
ಅದಕ್ಕೆ ವಿವರಣೆ ಎಂಬಂತೆ ಸರಸಮ್ಮನೇ ಗಟ್ಟಿಯಾಗಿ ಅಂದರು:
"ಸುಂದ್ರಾ ಕುರುಡಿ; ಕಲ್ಯಾಣಿಗೆ ಮಾತು ಬರೊಲ್ಲ; ಉಳಿದ ಮೂವರೂನೂ ತುಂಗನ ಆರೈಕೆ ಮಾಡ್ದೋರು"
"ಗೊತ್ತು, ತುಂಗ ಹೇಳಿದ್ಲು ಹಾಗೇಂತ..."
--ಎಂದು ತಂದೆ ಹಾಗೆ ಕೊಂಡು ಕೊಳ್ಳಲು ಅದೇ ಕಾರಣವೆಂಬಂತೆ ಹೆಳಿದರು.
"ಹೀಗೆ ಕೆಲವರಿಗೇ ಆರಿಸಿ ಉಡುಗೊರೆ ಕೊಟ್ರಿ ಬೇರೆ ಹುಡುಗೀರಿಗೆ ಒಂದು ಥರಾ ಆಗುತ್ತೆ"
"ಹೌದು. ನನಗೂ ಹಾಗೆ ಅನಿಸ್ತು"
ಸರಸಮ್ಮ ಮತ್ತೂ ಒಂದು ಕ್ಷಣ ಯೋಚಿಸಿದರು:..ಕುರುಡಿಗೂ ಮೂಗಿಗೂ ಕೊಟ್ಟರೆ ಯಾರೂ ಬೇಡವೆನ್ನುವ ಹಾಗಿರಲಿಲ್ಲ. ತುಂಗಮ್ಮ ಕಾಹಿಲೆ ಬಿದ್ದಾಗ ಆರೈಕೆ ಮಾಡಿದವರೆಂಬ ಕಾರಣದಿಂದ ಉಳಿದ ಮೂವ ರಿಗೂ ಕೊಡುವುದು ತಪ್ಪಾಗುತ್ತಿರಲಿಲ್ಲ.
ಆಕ್ಷೇಪಣೆಗಳನ್ನೆಲ್ಲ ಬದಿಗೆ ಸರಿಸಿ ಸರಸಮ್ಮ ತೀರ್ಪುಕೊಟ್ಟರು:
"ಆಗಲಿ ಕೊಡೋಣ"
ಹೊರಗೆ ಸಂಗೀತದ ತರಗತಿ ಮುಗಿದಿತ್ತು. ಸಂಗೀತದ ಅಧ್ಯಾಪಿಕೆ ಸದ್ದಿಲ್ಲದೆಯೆ ಹೊರಟು ಹೋಗಿದ್ದರು.
ಆ ಉಡುಗೊರೆಗಳನ್ನೆಲ್ಲ ನೋಡುತ್ತಾ ಸರಸಮ್ಮನಿಗೆ ಧಟ್ಟನೆ ಒಂದು ವಿಷಯ ಹೊಳೆಯಿತು...ತುಂಗಮ್ಮ ಮನಸ್ಸು ಬದಲಾಯಿಸಲಿಲ್ಲ ಅಲ್ಲವೆ? ಹೊರಟು ಹೋಗುವುದಕ್ಕೆ ಇದು ಪೂರ್ವ ಸಿದ್ಧತೆಯೋ ಏನೋ?
ಸಂದೇಹಗಳ ನಡುವಿನಿಂದಲೆ ಅವರಿಂದೊಂದು ಪ್ರಶ್ನೆ ಬಂತು:
"ಏನು ತೀರ್ಮಾನ ಮಾಡಿದಿರಿ?"
"ಇವತ್ತು ರಾತ್ರೆಯೇ ಹೋಗೋದೂಂತ."
"ಓ!"