ವಿಷಯಕ್ಕೆ ಹೋಗು

ಪುಟ:Abhaya.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಭಯ
೨೬೩

“ಸಾಕು ಸುಮ್ನಿರಿ !”

ಲಲಿತೆಯ ಗದರಿಕೆಯಧ್ವನಿ ಕೇಳಿ ಆ ಮಹಾಬಲ ಗೊಳೋ ಎಂದು ಅತ್ತ, ನಡುವೆ ಒಮ್ಮೆಲೆ ಅಳು ನಿಲ್ಲಿಸಿ ಕೇಳಿದ :


“ಹಾಗಾದರೆ ಇಲ್ಲಿಗೆ ಬರ್‍ಲಿಲ್ಲ ಅನ್ನಿ"

"ಇಲ್ಲ ಇಲ್ಲಿಗ್ಬರ್‍ಲಿಲ್ಲ"

“ಇನ್ನೇನಪ್ಪಾ ಗತಿ ನಂಗೆ ”

ಮತ್ತೆ ಏಕಪ್ರಕಾರವಾದ ಅಳು

“ಹೆಂಗಸರ ಹಾಗೆ ಅಳ್ತೀರಲ್ರೀ--"

ತನ್ನ ಜಾತಿಯನ್ನು ಹಾಗೆ ಮೂದಲಿಸುವ ಮನಸಿಲ್ಲದಿದ್ದರೂ ಲಲಿತ ಬಳಕೆಯಲ್ಲಿದ್ದ ಆ ಮಾತನ್ನು ಅ೦ದಳು. ಆದರೆ ಆ ಮಹಾಬಲ ಹಾಗೆಲ್ಲ ಅನ್ನಿಸಿಕೊಂಡು ನಾಚುವ ಆಸಾಮಿಯಾಗಿರಲಿಲ್ಲ.

“ನೀವು ಕನಕಂಗೆ ಹೊಡೆದು ಗಿಡದು ಏನಾದರೂ ಮಾಡಿದ್ರಾ ?”

“ಇಲ್ಲಪ್ಪಾ ಇಲ್ಲ. ದೇವರಹಾಗೆ ನೋಡ್ಕೊತಿದ್ದೆ.”

ಅವನು ಸುಳ್ಳು ಹೇಳುತ್ತಿರಲಿಲ್ಲ.ಮಾತಿನ ಸತ್ಯತೆಯನ್ನು ಆ ಮುಖವೇ ಸಾರುತಿತ್ತು. ತುಂಗಮ್ಮನಿಗೆ ಇದರಿಂದ ದುಃಖವಾಯಿತು. ಲಲಿತೆಗೂ ಕೂಡಾ. ಕನಕಲಕ್ಷಮ್ಮು ಓಡಿಯೇ ಹೋಗಿದ್ದಳು. ಅದರಲ್ಲಿ ಸಂದೇಹವಿರಲಿಲ್ಲ ತುಂಗಮ್ಮ ಅಲ್ಲಿ ನೆರೆದಿದ್ದ ಒಬ್ಬೊಬ್ಬ ಹುಡುಗಿಯ ಮುಖವನ್ನೂ ನೋಡಿದಳು. ಎಂದೆಂಥ ಭಾವನೆಗಳಿದ್ದುವು ಅಲ್ಲಿ ! ಮಹಾಬಲ ನಿಗಾಗಿ ಮರುಕವೆ ? ತಿರಸ್ಕಾರವೆ? ಅಥವಾ....ಅಥವಾ.... ತಾವೂ ಮದುವೆಯ ನೆಪದಲ್ಲಿ ಹೊರ ಹೋಗಿದ್ದರೆ ಓಡಿಹೋಗಬಹುದಾಗಿತ್ತು ಎಂಬ ಭಾವನೆಯೆ ?

ಅಳುತಳುತ ಮಹಾಬಲ ನಡೆದುದನ್ನು ಹೇಳಿದ. ಹೇಳಲು ಹೆಚ್ಚೇನೂ ಇರಲಿಲ್ಲ. ಹೀಗಾಗಿ ಆತ ಅದನ್ನೆ ಮತ್ತೆ ಮತ್ತೆ ಪಾಠ ಒಪ್ಪಿಸಿದ.

“ನಿನ್ನೆ ಬೆಳಗಿನ ಜಾವದಲ್ಲೇ ನಾನು ಮನೆ ಬಿಟ್ಟೆ ಸಾಹೇಬರ ಜತೇಲಿ ಸರ್ಕೀಟು ಹೋಗ್ಬೇಕಾಯ್ತು. ಇವತ್ತು ಮಧ್ಯಾಹ್ನ ವಾಪ್ಸು ಬಂದೆ. ಮನೆಗೆ ಬೀಗ ಇಕ್ಕಿತ್ತು. ಅಂಗಡಿ ಬೀದಿಗೆ ಹೋಗಿದಾಳೇನೋ೦ತ ಹಾದಿ