ಆ ಸಂದರ್ಭದಲ್ಲಿ ಸರಸಮ್ಮ ಮಾತನಾಡಿದರು. ಅದು ಮಾಮೂಲಿನ ಭಾಷಣವಾಗಿರಲಿಲ್ಲ. ಸಂಕಟಪದುತಿದ್ದ ಹೃದಯದಿಂದ ಮಾತುಗಳು ಬಲು ಪ್ರಯಾಸದಿಂದಲೆ ಹೊರಬಂದವು.
"ಹುಡುಗೀರಾ...ಏನು ಹೇಳಬೇಕೋ ನನಗೆ ತಿಳೀದು....ಕನಕಲಕ್ಷಮ್ಮ ಹೀಗೆ ಮಾಡ್ತಾಳೆ ಅಂತ ಯಾರಿಗೆ ಗೊತ್ತಿತ್ತು? ಅಂತೂ ನಾವು ತಲೆ ಎತ್ತೋದು ಕಷ್ಟವಾಯಿತು, ಒಳ್ಳೆಯವರಾಗಿ ಗಂಡನ ಜತೆಯಲ್ಲಿ ಸಂಸಾರ ಮಾಡ್ಬೇಕೂಂತ ನಿಮಗೆ ಯಾರಿಗೂ ಆಸೆ ಇಲ್ವೆ? ಇನ್ನು, ವರ ಹುಡುಕೋದು ಎಷ್ಟು ಕಷ್ಟವಾಗ್ತದೆ ಗೊತ್ತಾ?...."
ತುಂಗಮ್ಮನನ್ನು ಕುರಿತು ಅಭಿನಂದಿಸಿ ಮಾತನಾಡಬೇಕಾಗಿದ್ದವರು, ಕನಕಲಕ್ಷಮ್ಮನ ವರ್ತನೆಯಿಂದ ಅಭಯಧಾಮಕ್ಕೆ ತಟ್ಟಿದ ಕಲಂಕದ ವಿಷಯವಾಗಿಯೇ ಮಾತನಾಡಿದರು ಮಾತನಾಡುತ್ತಾ ಒಮ್ಮೆಲೆ ಅದು ಅವರಿಗೆ ಅರಿವಾಯಿತೇನೋ!
"ಅಂದಹಾಗೆ, ನಾನು ಈ ಹಬ್ಬದೂಟದ ವಿಷಯ ಹೇಳಬೇಕು. ಏನೋ ಹೇಳಬೇಕಾಗಿದ್ದವಳು ಅದನ್ನು ಮರೆತು ಬೇರೇನೋ ಹೇಳ್ತಾ ಇದ್ದೇನೆ. ನಮ್ಮ ತುಂಗಮ್ಮ--"
ಅದು ತುಂಗಮ್ಮನ ಗುಣಗಾನ. ಮಾತನಾಡುತಿದ್ದಂತೆ, ಹುಡುಗಿಯರೆದುರು ಒಬ್ಬಳನ್ನೇ ಹೀಗೆ ಹೊಗಳುವುದು ಸರಿಯಲ್ಲವೆಂದು ಸರಸಮ್ಮನಿಗೆ ತೋರಿತು.
"ತುಂಗಮ್ಮನನ್ನು ನಾನು ಹೊಗಳುವಾಗ ನಿಮ್ಮೆಲ್ಲರನ್ನೂ ಹೊಗಳುತಿದ್ದೇನೆ ಎಂದು ನೀವು ಭಾವಿಸಬೇಕು. ಮನುಷ್ಯರು ಯಾರೂ ಇದ್ದ ಹಾಗೆ ಇರುವುದಿಲ್ಲ ಬದಲಾಗುತ್ತಾಲೇ ಇರುತ್ತಾರೆ. ಈ ಬದಲಾವಣೆ ಎರಡು ವಿಧ. ಕೆಲವರು ಬದಲಾಗುತ್ತಾ ಮತ್ತೂ ಒಳ್ಳೆಯವರಾಗುತ್ತಾರೆ. ಕೆಲವರು ಮತ್ತೂ ಕೆಟ್ಟವರಾಗುತ್ತಾರೆ. ನಾವು ಮೊದಲನೆಯವರಹಾಗೆ ದಿನಕಳೆಯುತ್ತ ಹೆಚ್ಚು ಹೆಚ್ಚು ಒಳ್ಳೆಯವರಾಗ ಬೇಕು. ಅಲ್ಲವಾ?...."
ಹೌದು--ಎಂದು ಯಾರೂ ಉತ್ತರಿಸಲಿಲ್ಲ. ಆದರೆ ಆ ಮೌನಕ್ಕಿದ್ದುದು ಅದೇ ಅರ್ಥ.
ಔತಣ ಹಾಗೆ ಕಳೆಯಿತು. ತುಂಗಮ್ಮ ಎಲ್ಲಿರಿಗಿಂತ ಹೆಚ್ಚು