ಮನದಲ್ಲೇ ಅಂದುಕೊಳುತ.. ಆಡಿಕೊಳುತ ರಾಜಮಾತೆ ತನ್ನ ಕಾಲಿಗೆ ಗೆದ್ದಲು ಹಿಡಿಯೋ ಮಟ ನಿಂತಲ್ಲೇ ನಿಂತಿದ್ದಳು. ತನ್ನ ಪ್ರಜೆಗಳನ್ನುದ್ದೇಶಿಸಿ ನಾಕು ಮಾತಾಡಲಕಂತ.. ಬುದ್ದಿವಾದ ಹೇಳಲಕಂತ.. ಜರುಗುತಿರೋ ಅನಾವುತಕ್ಕೂ, ಅರಮನೆಗೂ ಯಾದೇ ಸಂಬಂಧ ಯಿಲ್ಲಂತ ಹೇಳಲಕಂತ.. ನೀವೇನು ಜಬರುದಸ್ತು ಮಾಡೋದಿದ್ದರ ಮೋಬಯ್ಯಗೆ ಮಾಡಿಕೊಳ್ಳಿರಿ.. ಅವನ ಸರೀರದ ಗೂಡೊಳಗೆ ಸೇರಿಕೊಂಡಿರುವ ಳೆನ್ನಲಾದ ಸಾಂಬವೀನ ಕೇಳಿಕೊಳ್ಳಿರಿ ಎಂದು ಖಡಾಖಡಿ ಹೇಳಲಕಂತ.. ಯೀ ಮುಪ್ಪಾನು ಮುದೇಕಿಯಾದ ತನ್ನನೇನು ಮಾಡ್ಯಾಳು ಸಾಂಬವೀ ಯಂದು ಖುಲ್ಲಮ ಖುಲ್ಲ ಸಾದರಪಡಿಸಲಕಂತ.. ಅಯ್ಯೋ ತಾನು ಸತ್ತಮ್ಯಾಲ ತನ್ನ ಕಳೇಬರವನ್ನು ತಾನು ವುಯಿಲಿನಲ್ಲಿ ಬರೆಯಿಸಬೇಕೆಂದಿರುವ ಜೆಗೇಮೊಳಗೆ ಸಮಾಧಿ ಮಾಡುವರೋ ಯಿಲ್ಲಮೋ? ಯಂಬ ಸಂದೇಹ ತಾನೇ ತಾನಾಗಿ ಮೂಡದೆಯಿರಲಿಲ್ಲ.. ಸಮಾದಿsಯ ವಾಸ್ತು ಮೂಡಿಸಿಕೊಳುತ.. ವಾಸ್ತುವಿನ ಶಿಲುಪವ ಕಲುಪಿಸಿಕೊಳುತ.. ಸಿಲುಪ ಕೆತ್ತುವ ಸಿಲುಪಿಯ ಕಲುಪಿಸಿಕೊಳುತ, ಸಿಲುಪಿಯ ಸಂಭಾವನೆ ಕಲುಪಿಸಿಕೊಳುತ.. ವಗಯ್ರೆವಗಯ್ರೆಕಲುಪಿಸಿಕೊಳುತಾ.. ಕಲುಪಿಸಿಕೊಳುತಾ ರಾಜಮಾತೆಯು ವರ್ತಮಾನದ ಕಡೇಕ ಬೆನ್ನು ಮಾಡಿದರೂ ಪ್ರಜೆಗಳು ಮಾತ್ರಪ್ರಜೆಗಳ ಬದುಕಿನಲ್ಲಿ ಕಯ್ನ ಹಾಕಿದ್ದರು.
ಅರಮನೆಯೇ ಅರಮನೆಯೊಳಗೆ ಸಜೀವ ಸಮಾದಿsಯಾಗಿರುವಾಗ, ನಿಗೂಢ ಆಕ್ರಂದನಗಳಿಂದದೂ ತುಂಬಿಕೊಂಡಿರುವಾಗ, ತನ್ನನ್ನು ಸಂತಯಿಸುವವರಿಗಾಗಿ ಕಂಗಾಲಾಗಿರುವಾಗ, ತನ್ನದು ತನಗೇ ಮಸ್ತು ಆಗಿರುವಾಗ ಅದನು ನಿರುಕಿಸುತ್ತ ಕುಂಡುರುವುದರಲ್ಲಿ ಯೇನರ್ಥವುಂಟು? ಮನುಷ್ಯ ಅಂದಮ್ಯಾಲ ವಬ್ಬರಿಗಿನ್ನೊಬ್ಬರು ಆಗಬೇಕು, ಕಣ್ಣೀರೊರೆಸಿ ಕಯ್ಯಿಕೊಟ್ಟಿರುವ ದೇವರ ಕ್ರಮವನ್ನು ಸಾರ್ಥಕವಾಗಿಸಬೇಕು.. ಪರೋಪಕಾರಾರ್ಥಮಿದಂ ಸರೀರಮು ಯಂದು ಧರೆಗೆ ದೊಡ್ಡವರು ಹೇಳಿರುವರು.. ಹಿಂಗ ಮುಂತಾಗಿ ಅವರಿಗಿವರು ಹೇಳಿಕೊಳುತ, ಯಿವರಿಗವರು ಹೇಳಿಕೊಳುತ, ತಮಗೆ ತಾವೆ ಹೇಳಿಕೊಳುತ ವಬ್ಬರೊಳಗಿನ್ನೊಬ್ಬರು ಚಕಚಕಾಂತ ವಡಮೂಡಲಕ ಆರಂಭಿಸಿದ್ದರು.
ಆಜುಬಾಜೂಕಿದ್ದ ಗ್ರಾಮಗಳಿಂದ ಹಸಿ ಹಸಿ ಬಾಣಂತಿಯರು, ಕೂಸುಳ್ಳ ತಾಯಂದಿರು ಸದರಿಪಟ್ಟಣದ ಚಿಟ್ಚಿಟಾರನೆ ಚೀರಿಕೊಳುತಲಿದ್ದ, ಕೆಳಗಣ್ಣು, ಮ್ಯಾಲಗಣ್ಣು ಮಾಡುತಲಿದ್ದ ಕೂಸು ಕಂದಮ್ಮಗಳಿಗೆ ಯದೆ ವುಂಬುಸಲಕಂತ ನಾ ಮುಂದು, ತಾ ಮುಂದು ಅಂತ ಮೋಡೋಡಿ ಬರುತಲಿದ್ದರು.