ವಿಷಯಕ್ಕೆ ಹೋಗು

ಪುಟ:Aramane.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೂಗುತಲಿತ್ತು.. ತಾಯ್ತನದ ಹಂಬಲದ ಯಮ್ಮೆ ಮಣಕಗಳು ತಮ ತಮ್ಮ ಬಂಧನ ಹರಕೊಂಡು ಜಿಕ್ಕೋತ ಜಿಕ್ಕೋತ ಅದರ ಸನೀಕ ಬರುತ್ತಿದ್ದವು. ಬರಲಿಲ್ಲಾಂದರ ಅದೇ ಹಾದಿಯಿಲ್ಲದ ಕಡೇಕ ಹಾದಿ ಮಾಡಿಕೊಂಡು ಅವುಗಳಿದ್ದಲ್ಲಿಗೆ ತಾನೋಡುತಲಿತ್ತು. ಆಗ ಅದರ ಪಾದಾಘಾತಕ್ಕೆ ಹಾಳಾಗುತ್ತಿದ್ದುದು ವಂದಾs ಯರಡಾss.. ವಂದು ಜೋಳದ ಹೊಲ ವುಳುದೀತಾ? ವಂದು ಮಲ್ಲಿಗೆ ಅಂಟಿನ ತೋಟ ವುಳುದೀತಾ.. ವಂದು ಹಿತ್ತಲು ವುಳುದೀತಾ? ಯದುರಿಗೆ ಬಂದೋರ ಸೊಂಟವುಳುದೀತಾ? ಹಾನಿಗೀಡಾದ ವಬ್ಬರಲ್ಲಾ ವಬ್ಬರು “ಅವ್ವಾ.. ತಾಯೀ.. ನೀನು ಸಾಕ್ಕೊಂಡಿರೋದು ಕ್ವಾಣನೋ ಅತುವಾ ಬಿರುಗಾಳಿಯೋ..” ಯಂದು ಅಳುತ ಅಬ್ಬರಿಸುತ ಬಂದು ಅದರ ಸಾಕು ತಾಯಿಯಾದ ಜಗಲೂರೆವ್ವಗೆ ದೂರು ನೀಡುತಲಿದ್ದುದು ಮಾಮೂಲು ಸಂಗತಿಯಾಗಿತ್ತು. ಮೇಲು ಮಾತಿಗೆ ನೀವೇ ಅದಕ ವದ್ದು ಬುದ್ದಿ ಕಲುಸಿರಿ.. ದೊಡ್ಡಿಗೆ ಕೂಡಿ ಹಾಕಿರಿ” ಯಂದನ್ನುತ್ತಿದ್ದಳು. ಪಟ್ಟಣದ ಯಾರೊಬ್ಬರಿಗೂ ಅಂಥ ಧಯರ್ಯಾಗಲೀ, ತಾಕತ್ತಾಗಲೀ ಯಿಲ್ಲವೇಯಿಲ್ಲಯಂಬುದು ತನಗೆ ಗೊತ್ತಿಲ್ಲದಿರಲಿಲ್ಲ. ಬಸುರು ಬೇಕು, ಆದರ ಹೆಸರು ಬ್ಯಾಡಾಂದರ ಹೆಂಗ? ವಂದಾನೊಂದು ಕಾಲದಲ್ಲಿ ಮಿಂಚೇರಿ ಪಟ್ಟಣವನ್ನಾಳಿದ ಸೂರನಾಯಕನೇ ಕೋಣದ ರೂಪದಲ್ಲಿರುವನೆಂದೇ ತಾನು ಭಾವಿಸಿದ್ದಳು. ತನ್ನ ಗಾಂಧಾರಿ ಗರುಭದೊಳಗೆ ಜನಿಸಬೇಕಿದ್ದ ನೂರೊಂದು ಮಂದಿ ಕವುರವರೇ ಕೋಣದ ರೂಪದಲ್ಲಿರುವರೆಂದು ತಾನು ಭಾವಿಸಿದ್ದಳು. ಜೀವಾತುಮ, ಪರಮಾತುಮರ ಸಂಬಂಧ ಯಾವ ರೀತಿಯದೋ ಅಂಥಾದ್ದೇ ಸಂಬಂಧ ತಮ್ಮಿಬ್ಬರದೆಂದು ತಾನು ಭಾವಿಸಿದ್ದಳು. ಆದ್ದರಿಂದ ಯಾರು ಯೇನೇ ಹೇಳಲಿ, ತಾನು ಮಾತ್ರಸೂರನ ಮ್ಯಾಲ ಬ್ಯಾಸರ ಮಾಡಿಕೊಳ್ಳುತ್ತಿರಲಿಲ್ಲ.. ಮಗಾ ಯಂಬ ಸಬುದದ ಹೊರತು ಯಿನ್ನೊಂದು ಮಾತು ಆಕೆಯ ಬಾಯಿ ಯಿಂದ ವುದುರುತ್ತಿರಲಿಲ್ಲ.. ಯಿದ್ಯಾವ ಸೀಮೆ ತಾಯಿ? ಯಿದ್ಯಾವ ಸೀಮೆ ಮಗ? ವಬ್ಬರಿಂದಿನ್ನೊಬ್ಬರನ್ನು ಅಗಲಿಸಿ ಪರಸ್ಪರ ಜೀವ ನಷ್ಟಾ ಮಾಡಬೇಕೆಂಬ ಯತ್ನ ಪ್ರಯತ್ನಗಳು ಪಟ್ಟಣದೊಳಗ ಕಾಲ ಧರುಮಕ್ಕನುಸಾರವಾಗಿ ನಡೆಯದೇ ಯಿರಲಿಲ್ಲ. ಆದರವು ಹಾಂಗ ನಡದು ಹೀಂಗ ಠುಸ್ಸಂದವು.. ವಟ್ಟಿನಲ್ಲಿ ಜಗಲೂರವ್ವ ‘ಸೂರಾ ಸೂರಾ ಅಂದಕಂತಲೇ ಯಚ್ಚರಾಗುತ್ತಿದ್ದಳು.. ಸೂರಾs ಸೂರಾss ಅಂದಕಂತಲೇ ಮಕ್ಕಂತಿದ್ದಳು.. ಹಾಗಿತ್ತು ಅವರಿಬ್ಬರ ಸಂಬಂಧವು ಸಿವಸಂಕರ ಮಾದೇವಾss....