ವಿಷಯಕ್ಕೆ ಹೋಗು

ಪುಟ:Aramane.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧರುಮ ಪೀಠದ ಮ್ಯಾಲ ಧುರುಮರಾಯನನ್ನೂ ಆರೂಢರನ್ನಾಗಿ ಮಾಡಲಾಗಿತ್ತು. ಸುಳ್ಳಿಗೊಂದು ಬೆಲೆ, ಕಳುವಿಗೊಂದು ಬೆಲೆ, ಕಣ್ಣೀರಿಗೊಂದು ಬೆಲೆ ಲಭ್ಯವಾಗಿದ್ದವು. ನೀನು ಮಾ ಸುಳ್ಳುಗಾರನಾಗಪ್ಪ.. ನೀನು ಚೋರಾಗ್ರೇಸರನಾಗಪ್ಪ.. ನೀನು ನಾಕಾರು ಮಂದಿಯನ್ನು ಗೋಳೊಯ್ದುಕೊಂಡಾದರೂ ಬದುಕುವಂಥವನಾಗಬೇಕಪ್ಪ ಯಂದು ಹಿರೀಕರು ಕಿರೀಕರಿಗೆ ಆಸೀರುವಾದ ಮಾಡುವ ದ್ರುಸ್ಯಗಳು ಹೇರಳವಾಗಿದ್ದವು ಸಿವ ಸಂಕರ ಮಾದೇವಾss

ಯಿತ್ತ ಕೂಡ್ಲಿಗಿ ಪಟ್ಟಣದೊಳಗ ಸಂತರಸ್ತರಿಗೆ ನೂರೆಂಟು ಕಿರುಕುಳ ನೀಡುವ ಮೂಲಕ ಅವರನ್ನು ವಕ್ಕಲೆಬ್ಬಿಸುವ ಕಾಯಕದಲ್ಲಿ ಪ್ರಜೆಗಳು ತಮಗೆ ತಾವೇ ನಿರತರಾಗಿದ್ದರು. ಸದರಿ ಪಟ್ಟಣದ ಬಂಗಲೆಯೊಳಗೆ ಕುದುರೆಡವನ್ನು ಕನವರಿಸುವ ಜೆನ್ನಿಫರಮ್ಮ ಬಿಳಿವುಡುಗೆ ತೊಡುಗೆ ತೊಟ್ಟು ಥೇಟ್ ಸನ್ಯಾಸಿಣಿಯಂಥಾಗಿಬಿಟ್ಟಿದ್ದಳು. ತಾನು ರಚನೆ ಮಾಡಬೇಕೆಂದಿರುವ ಕಲಾಕ್ರುತಿ ವಳಗೆ ಜಗಲೂರೆವ್ವ, ರಾಜಮಾತೆ ಭಯ್ರಮಾಂಬೆಯರೀರ್ವರ ಯಕ್ತಿತ್ವಗಳನ್ನು ಮಿಸ್ರಣ ಮಾಡುವ ಕುರಿತು ಯೋಚಿಸುತಲಿದ್ದಳು. ‘ಅವ್ವಾ ಯದೆ ಹಾಲು ನೀಡವ್ವಾ’ ಯಂದು ಕೂಸುಗಳು ತನ್ನನ್ನು ಅಂಗಲಾಚುತ್ತಿರುವಂತೆ ಭ್ರಮೆಗೀಡಾಗಿ ನಿದ್ರಾದೆಸೆಯಲ್ಲಿ ನಡೆದಾಡುವುದನ್ನು ಮಾಡುತಲಿದ್ದಳು. ತನ್ನ ಪತ್ನಿಯು ಯಾಕೆ ಹಿಂಗ ವರ್ತನ ಮಾಡುತವಳೆ ಯಂದು ಯಡ್ಡವರ್ಡನು ಕೇಳುತಲಿದ್ದುದಕ್ಕೆ ಬಯಬಲ್ಲಿನ ಯಿದ್ವಾಂಸರಾದ ಫಾದರಿಗಳು “ಆಕೆಯೊಳಗೆ ಮಾಮಾತೆ ಮೇರಿಯಮ್ಮಳ ಪಯಿತ್ರಾತುಮವು ಹೊಡಮುರುದು ಯೇಳಲಕ ಹತ್ತಯ್ತೆ.. ಆಕೆ ಸಂತ ಪದವಿಗೇರುವ ದಿನ ದೂರಯಿಲ್ಲ” ಯಂದು ಅಭಿಪ್ರಾಯವ ಯಕ್ತಪಡಿಸುತಲಿದ್ದರು.. ಸಂಭೋಗ ಕಾರ್ಯದಿಂದೊಂಚಿತನೂ, ಯೇಕ ಪತ್ನೀರೊತಸ್ಥನೂ ಆಗಿದ್ದಂಥ ಯಡ್ಡವರ್ಡನು ಪರಪಾಟಿನಿಂದಾಗಿ ಯಲ್ಲೋ ದಸಗತ್ತು ಹಾಕುವುದನ್ನು ಬಿಟ್ಟು ಯಾವುದಕ್ಕೋ ದಸಗತ್ತು ಹಾಕಿ ಸರಕಾರದ ವಾಗ್ದಂಡನೆಗೆ ಗುರಿಯಾಗುತಲಿದ್ದನು. ಹತಭಾಗ್ಯ ಕುಟುಂಬವನ್ನು ಕಟ್ಟಿಕೊಂಡು ಯಿಂಗಲೆಂಡಿನ ಕಡೇಕ ತೊಲಗಿ ಬಿಡಬಾರದೇಕೆಂದೂ ತಾನೂ ವಮ್ಮೊಮ್ಮೆ ಯೋಚನೆ ಮಾಡುತಲಿದ್ದನು. ತನ್ನ ಕುಟುಂಬದ ನಡಗೆಗೆ ತೊಡರುಗಾಲು ಹಾಕುತ್ತಿರುವ ಕುದುರೆಡವನ್ನು ವುತ್ತರದೇಸದ ಕಡೇಕ ಸ್ಥಳಾಂತರ ಮಾಡುವ ತಾಕತ್ತು ತನಗಿದ್ದಿದ್ದಲ್ಲಿ...