ಅಚ್ಚವ್ವನ ಮೊಲೆಯಂಬ ದಿಬ್ಬದ ಮ್ಯಾಲ ತೊಟ್ಟಿನಂಗೆ ಕೂಕಂಡಿದ್ದ ಗಾಳಯ್ಯನು ರೆಪ್ಪೆ ಕಿರಿದು ಮಾಡಿ ನೋಡುತ್ತಿರುವಾಗ ಮೂಡಲಪಾಳಯದಲ್ಲಿ ಸಾಸುವೆ ಗಾತುರದ ಪಕ್ಷಿಯೊಂದು ಬರುಬರುತಾ ದೊಡ್ಡದಾಗುತಾ ಬಂತು. ಅದು ಯಾದೆಂಬುದು ಆ ಕೂಡಲೆ ಮನವರಿಕೆ ಆಗಲಿಲ್ಲ.. ಸೂರ್ಯಾಮನ ಕಿರಣಗಳು ಚೂರಿಯಂತೆ ಕಣ್ಣಿಗೆ ಯಿರಿಯುತಲಿದ್ದುದೇ ಅದಕ್ಕೆ ಕಾರಣ.. ಬೀಳಾ ಪಾಳಾ ಯಂದು ಕೂಗಿ ಕರೆದು ಬೊಟ್ಟು ಮಾಡಿ ತೋರಿಸಿದ. ಹೊ ಹೋಯ್.. ಪಾರಿವಾಳ.. ಹಾ.. ಹಾಯ್ ಪಾರಿವಾಳ.. ಸೊರಗ ಲೋಕದಿಂದ ವಡಮೂಡಿ ವುದುರಿದಂಗಯ್ತೆ.. ಯೇಸು ದಿನಾದುಮೋ ಅದರ ಮಾವುಸವ ನೆಂಜಿಕೊಳ್ಳದೆ.. ಯಾರೇ ಹೊಡೆಯಲಿ.. ತಾವು ಮುವ್ವರು ತಲಾಕೊಂಚೊಂಚೂರು ಪಾಲನು ಹಂಚಿಕೋಬೇಕು.. ಯಾವ ಕಾರಣಕ್ಕೂ ಸಿಕ್ಕವರಿಗೆ ಸಿವಲಿಂಗ ಅನಲೇ ಕೂಡದು.. ತಮಗ ತಾವೇ ಪಂಚಾತಿ ಮಾಡಿ ವಂದು ನಿರ್ಣಯಕ್ಕ ಬಂದರು..
ಅರೆಗಳಿಗೆ ತರುವಾಯ ವಂದು ಪವಾಡ ಜರುಗಿತು.. ಅದೆಂದರ.. ಬಿಲ್ಲನು ಯತ್ತಲಕ ಆಸುಪದ ಕೊಡದೆ.. ಬಾಣ ಹೂಡಿ ಬಿಡಲಕ ಆಸುಪದ ಕೊಡದೆ.. ಕೇವಲ ಗಾಳಯ್ಯನು ಕವುಸಿಕ ಮುನಿಯೋಪಾದಿಯಲ್ಲಿ ದುರುಗುಟ್ಟಿ ನೋಡಿದೇಟಿಗೆ ಅದು ಮುಗುಲ ಕಡೇಲಿಂದ ಸುಯ್ಯಂತ ಸುರುಗಿ ಅವರ ಸಮಚ್ಫಮ ವುಪಸ್ಥಿತವಾಯಿತು. ಅದರ ನೋಟಮೋ.. ಅದರ ಗುಕು ಗುಕು ಸೊರಮೋ! ದೇವದಾನವರ ಪಯ್ಕಿ ಯಾರೋ ವಬ್ಬರು ಯಿದರ ರೂಪದಲ್ಲಿ ಬಂದಿರಭೌದೆಂದು ಹೆದರಿ ಅವರು ಹಿಂದಕ ಜರುಗಲು ಅದು ಮುಂದ ಮುಂದಕ ಬಂತು. ತಮಗ ಯೇನೋ ಹೇಳುವ ಪ್ರಯತ್ನ ಮಾಡುತಲಿದ್ದಂಗಯ್ತೆ ಯಿದು ಯಂದು ತೀಕ್ಷ್ಣವಾಗಿ ನೋಡುತ್ತಾರೆ.. ಅದರ ಕಾಲಬುಡದಲ್ಲೊಂದು ಜಾಬು ಯಿತ್ತು. ಅದರೊಟ್ಟಿಗೆ ಅದು ವಾಲೇಕಾರ ಪಾಮುಲಯ್ಯನ ಸೊತ್ತೆಂದು ಮನವರಿಕೆ ಆತು. ಯಿದು ಯೇಸು ಯೋಜನ ದೂರದಿಂದ ಹಾರಕೋತ ಬಂದಿರುವುದೇನೋ.. ರೆಕ್ಕೆಗಳಿಗೆ ದಣುವು ಆಗಿರಬೌದು. ತಮ್ಮನ್ನು ಅಹಿಂಸಾವಾದಿಗಳೆಂದು ಭಾವಿಸಿ ಯಿಳದಂಗಯ್ತೆ. ಅದು ತಮ್ಮ ಮ್ಯಾಲ ಯಿಟ್ಟಿರುವ ನಂಬುಕೆಯನ್ನು ತಾವು ವುಳುಸಿಕೊಳ್ಳಬೇಕಿರುವುದು.. ಜಾಗ್ರುತಗೊಂಡ ಅವರು....
ಪಾಮುಲಯ್ಯ ಪಾರಿವಾಳವನ್ನು ಕಯ್ಯಿಗೆ ಪಡಿತಾ ತ್ರಿವಳಿ ಸಹೋದರರಿಗೆ ನಗದು ನೀಡಿ ಸನ್ಮಾನಿಸಿದ್ದು ತಡ ಆಗಲಿಲ್ಲ. ಜಾಬಿನೊಳಗಿದ್ದ ಸಂಕೇತಗಳನ್ನು