ಕೂಕಂಡಿದ್ದಂಥ ಮಂದಿಯು ಯದ್ದು ನಿಂತಗಂಡಿದ್ದು ತಡ ಆಗಲಿಲ್ಲ.. ಮುಂದುಕ ಯಿದ್ದಂಥ ಮಂದಿಯು ಹಿಂದ ಹಿಂದಕ ಜರುಗಿದ್ದಾಗಲೀ, ಹಿಂದಕ ಯಿದ್ದಂಥ ಮಂದಿಯು ಮುಂದ ಮುಂದಕ ಜರುಗಿದ್ದಾಗಲೀ ತಡಾ ಆಗಲಿಲ್ಲ.. ಅವ್ವನ ದಗ್ರುಸ್ಟಿಗೆ ನಾ ಬೀಳಬೇಕು, ತಾ ಬೀಳಬೇಕು ಯಂದು ಮಂದಿ ಯಂಬೋ ಮಂದಿಯು ತಮ ತಮ್ಮ ಕಣ್ಣುಗಳ ಗುಡ್ಡೆಗಳನ್ನು ಕಿತುಕಿತ್ತು ತಾಯಿ ಮುಂದಕ ಗುಡ್ಡೆ ಹಾಕಿದರು.. ತಾಯಿಯ ಮಾತುಗಳನ್ನು ನಾ ಕೇಳಬೇಕು, ತಾ ಕೇಳಬೇಕು ಯಂದು ಮಂದಿ ಯಂಭೋ ಮಂದಿಯು ತಮ ತಮ್ಮ ಕಿವಿಗಳನ್ನು ಕಿತ್ತುಹಾಕಿದರು ತಾಯಿ ಮುಂದಕ... ತಾಯಿಗೆ ತಮ ತಮ್ಮ ಕಂಟಕ ಸಂಕಟಗಳನು ನಾ ಹೇಳಿಕೊಳ್ಳಬೇಕು, ತಾ ಹೇಳಿಕೊಳ್ಳಬೇಕು ಯಂದು ಮಂದಿ ಯಂಭೋ ಮಂದಿಯು ತಮ ತಮ್ಮ ನಾಲಗೆಗಳನ್ನು ಕಿತ್ತು ಗುಡ್ಡೆ ಹಾಕಿದರು ತಾಯಿ ಮುಂದಕ.. ಯಿಂಥಪ್ಪ ಹತ್ತಾರು ಪಂಚೇಂದ್ರಿಯಗಳ ಗುಡ್ಡೆಗಳನ್ನು ಅಲಂಕಾರ ಮಾಡಿಕೊಂಡ ವಸ್ತಿಯು ಲಟಲಟ ಸಂಬಂಧ ಮಾಡುತ ಯದ್ದು ಕೂಕಂಡಿತೆಂಬಲ್ಲಿಗೆ ಸಿವ ಸಿವಾs ಹ್ಹಾ ಯಂದಾಕಳಿಸಿತೆಂಬಲ್ಲಿಗೆ ಸಿವ ಸಿವಾs ಸುತ್ತಮುತ್ತ ನೋಡಿತೆಂಬಲ್ಲಿಗೆ ಸಿವ ಸಿವಾs ಮವುನವನ್ನು ಕಿವಿಯಾರು ಆಲಿಸಿತೆಂಬಲ್ಲಿಗೆ ಸಿವಾ ಸಿವಾss
ಜಯನ್ನಾಮ ಪಾರೋತಿ ಪತಿ ಹರ ಹರ ಮಾದೇವಾs
ಯಾಕ್ಕುಲ್ದೇ ಜೋಗss ವುಧೋ ವುಧೋss
ಮಾವುಸ ಬಲುತು ಹಿಂದಕ್ಕ ಯರಡೂ ಕಯ್ಯೂರಿ, ಕುಂಡಿವÆರಿ ಕೂಕಂಡಿದ್ದ ವಸ್ತಿಯ ಯಾವತ್ತೂ ಪಂಚೇಂದ್ರಿಯಂಗಳು ಸೊಸ್ಥಾನ ಸೇರಿರೋದನ್ನು ಅವಯ್ಯನು ತನ್ನ ಸಿರೋಭಾಗವನ್ನು ವಸ್ತಿಯ ಚರಣ್ಣಕ್ಕಂಟಿಸಿ ಅದೇ ಯಿನ್ನು ಮಾತು ಕಲಿತ ಕಂದಮ್ಮನಂತೆ ತೊದಲುತ್ತಾನೆ.. ಬಿಕುಬಿಕ್ಕಿ ಅಳುತ್ತಾನೆ, ತನ್ನ ಕಣ್ಣೀರಿನಿಂದ ಸದರಿ ನೆಲದ ವಳಗೆಲ್ಲ ಸುಖಸಂಪತ್ತು ತುಂಬುತ್ತಾನೆ.. ಆ ಪುರುವಿಕನ ಮಾತಿನೊಳಗ ಸರುಮೊಂದು ಅಡಗಿತ್ತು, ಕಣ್ಣೊಳಗ ಸುರುಮೊಂದು ಅಡಗಿತ್ತು, ಆಕೆ ಅತ್ತಕಡೆ ಆಟು ಮಾಡುತ್ತಿರಬೇಕಾದರ ಯಿತ್ತಕಡೇಕ ಅಂದರ...
ಮುರುಡಿಗ್ರಾಮದ ನಯ್ರತ್ಯ ದಿಕ್ಕಿನ ಹೆಬ್ಬಂಡೆ ಮ್ಯಾಲ ದ್ವಾಪರ ಕಾಲದಿಂದಲೂ ಯಿದ್ದಂಥ ಗಾದರಿಪಾಲಯ್ಯನ ಸಾಪಕ್ಕೆ ತುತ್ತಾಗಿ ಸಿಲಸಿಲಾ