ಯೇನಾದರು ಹೇಳಲು ಯಿಚ್ಫಿಸುವಿರಾ?’’ ಯಂದು ಕೇಳಿದರು.. ಅದಕ್ಕೆ ಯೇನು ತಾನೆ ಹೇಳಿಯಾನು ರೆಡ್ಡಿ.. ಕೃತಜ್ಞತಾಪುರ್ವಕವಾಗಿ ತನ್ನ ಪರ ವಾದ ಮಂಡಿಸಿದ ಶಾಸ್ತ್ರಿಗಳ ಕಡೆ ನೋಡಿದ.. ಅವರ ಕಣ್ಣೊಳಗಿನ ಯರಡು ಹನಿಗಳಲ್ಲಿ ತನ್ನ ಪ್ರತಿಬಿಂಬ ಯಿರುವುದು ನೆಮ್ಮದಿಯ ಸಂಗತಿ.. ತನ್ನೆರಡೂ ಕಣ್ಣುಗಳನ್ನು ಕಯ್ಯಿಗಳೆಂದು ಭಾವಿಸಿ ಜೋಡಿಸಿ ತೆರೆದ.. ತರುವಾಯ ಸರಕಾರದ ಪರ ವಕೀಲ ನೀಲಕಂಠರಾಯರ ಕಡೆ ನೋಡಿದ.. ಆತನ ತಂದೆ ತಾಯಿಗಳು ತನಗೆ ಗೊತ್ತಿಲ್ಲದಿಲ್ಲ.. ಅವನ ಮೋದಿನ ಖರ್ಚಿನೊಳಗ ತನ್ನ ಯಿಸ್ಸೆವುಂಟು. ‘‘ನೀಲಕಂಠರಾಯ ನೀನು ಚಿರಾಯುವಾಗು’’ಯಂದು ಮನದೊಳಗ ಹಾರಯಿಸಿದನು....
ತಾನಿನ್ನೇನು ಹೇಳುವುದಿದೆ? ವಕೀಲರಿಬ್ಬರು ಹೇಳುವುದನ್ನು ಹೇಳಿ ಮುಗಿಸಿರುವಾಗ.. ನ್ಯಾಯಾಧೀಶನ ಯದೆಯೊಳಗ ಯಿರುವ ತೀರ್ಪು ತನಗೆ ಗೊತ್ತುಂಟು ಯಂದು ಹೇಳಲೇ? ಕ್ಷಮಿಸಿರೆಂದು ಹೇಳಿ ಬದುಕಿದ್ದು ಸಾಯಲೇ? ಭೀಮಲಿಂಗೇಸ್ವರ ಸ್ವಾಮಿಯ ರಥದ ಮಿಣಿಗೆ ಕಯ್ನ ಹಚ್ಚಲಕ ಅವಕಾಶ ಬೇಡಲೇ? ಥಾಮಸು ಮನ್ರೋ ಬ್ರಾತ್ರುತ್ವ ಯಂಬ ಪಯಿತ್ರಸಬುಧಕ್ಕೆ ಯರಡು ಬಗೆದನೆಂದು ಹೇಳಲೇ?
ಮವುನವಾಗಿ ಹ್ಯಾಮರತ್ತ ದಿಟ್ಟಿಸಿದ. ಹೇಳುವುದೇನೂ ಯಿಲ್ಲವೆಂದು ತಲೆಯನ್ನು ಅಲ್ಲಾಡಿಸಿದ. ಆಯ್ದ ಪ್ರೇಕ್ಷಕರ ಪಯ್ಕಿ ತಾನೋರ್ವನಾಗಿದ್ದ ಮುನಸೋಬಯ್ಯ ಯದ್ದು ನಾಗಿರೆಡ್ಡಿ ನಿರಾಪರಾದಿsಯಂದೂ, ಭೇಷರತ್ತಿನ ಮ್ಯಾಲ ಬಿಡುಗಡೆ ಮಾಡಬೇಕೆಂದೂ ಮನವಿ ಸಲ್ಲಿಸಿದ, ನ್ಯಾಯಾಲಯದ ಹುನ್ನಾರು ತನಗೆ ತಿಳಿದಿದ್ದರೂನೂವೆ....
ಕಟ್ಟಿದ ಕಂಠವನ್ನು ಸಡಿಲ ಮಾಡಿ ಹ್ಯಾಂ ರೆಡ್ಡಿಗೆ ಮರಣದಂಡನೆಯನ್ನು ಯಿಧಿಸಿದರು. ಅದೂ ಭೀಮಲಿಂಗೇಸ್ವರ ಸ್ವಾಮಿಯ ರಥೋತ್ಸವದಂದೇ ಶಿಕ್ಷೆಯನ್ನು ಜಾರಿಗೊಳಿಸಬೇಕೆಂದು ಹೇಳಿ ಅಲ್ಲಿಂದ ನಿರ್ಗಮನ ಮಾಡಿದರು ಸಿವಸಿವss
ಯಿದು ಅನ್ಯಾಯವೆಂದು ಕೂಗಿದ ಮುನುಸೋಬಯ್ಯ, ಮತ್ತವನ ಸಂಗಡಿಗರನ್ನು ಸಿಪಾಯಿಗಳು ಬಲವಂತವಾಗಿ ಯಳದೊಯ್ದು ಹೊರಗೆ ದೂಡಿದರು...
ಮುಂದೇನಾಯಿತಪ್ಪಾ ಅಂದರ.. ಅದೇ ಆಯಿತೆಂಬಲ್ಲಿಗೆ ಸಿವಸಂಕರ