ಅಂಬುತಾಳ.. ಮಾಬಲಿ ಪಟ್ಟ ಯೇರುವ ಯೋಗ ಅದಕಿಲ್ಲ, ಅಂದಮ್ಯಾಲ ಯಾಕ ಅದನು ಮನಸ್ಸಿಗೆ ಹಚಕೊಂಡು ಕೊರಗೋದು.. ಹೋಗಲಿ ಬಿಡರಿ, ಅದು ಯಲ್ಲಾದರು ಸುಖವಾಗಿರಲಿ, ಅದನ ನೆಚ್ಚಿಕೊಂಡು ಯೇಸು ದಿನಾಂತ ತಾಯಿ ಹೊರಗ ಯಿರೋದು.. ನಿಮಗ ಸೊಸಂತರ ಕೊಟ್ಟೀನಿ.. ನೀವೆs ಯಿದಕೊಂದು ಯೇರುಪಾಡು ಮಾಡಿರಯ್ಯಾ” ಯಂದಾಡಲು....
ಅದಕೆಂದೇ ವಂದು ಲಚ್ಚಣ ಕಡಿಮೆಯಿದ್ದರೂ ಚಿಂತೆಯಿಲ್ಲ.. ಯಾದಾರ ವಂದು ಕೋಣವನ್ನೇ ಹುಡುಕಿ ತರಬೇಕು.. ಯಿದರ ಜವಾಬುದಾರಿಯನ್ನು ಸದರಿ ಪಟ್ಟಣದ ತಾಯಿಯ ವಕ್ಕಲು ಮಕ್ಕಳೇ ಹೊರಬೇಕು ಯಂಬ ಠರಾವನ್ನು ವಡ್ಡೋಲಗವು ಮಂಜೂರು ಮಾಡಿದೊಡನೆ ಹೊಲೆಮಾದಿಗ ಮಂದಿಯು “ಹಂಗೇ ಆಗಲಿ ದವುಳೇರಾs” ಯಂದು ವಪ್ಪಿಗೆ ಸೂಚಿಸಿತು.
ದಿಕ್ಕು ದಿಕ್ಕಿಗೆ ತಲಾ ಹತ್ತಿಪ್ಪತ್ತು ಮಂದಿಯಂತೆ ಚೆಲ್ಲಾಪಿಲ್ಲಿ ಆಯಿತು. ಅವರು ಹೋಗಿದ್ದು ವಂದು ಕಡೇಕಾ? ವಂದು ಕಥಿಯಾ? ವಂದೊಂದು ವೂರಿಗೆ ಹೋಗಿ ವಂದೊಂದು ಮನೆಯದುರು ನಿಂತು ತಮ್ಮ ಜೋಳಿಗೆಗೆ ವಂದು ಕೋಣವನ್ನು ಬಿಕ್ಷಾ ಹಾಕಿ ಮೋಕ್ಷ ಪಡೆದುಕೊಳ್ಳಿರಿ ಯಂದು ಅಂಗಲಾಚಲಾರಂಬಿsಸಿತು. ನವಣೆ ಬಗಸಿದರೆ ನೀಡಬವುದು.. ಜೋಳ ಬಗಸಿದರ ನೀಡಬವುದು. ಆದರೆ ತಮ್ಮ ದನದ ಕೊಟ್ಟಿಗೇಲಿ ಯಿಲ್ಲದುದನು ಯಲ್ಲಿಂದ ತರೋದು? ‘ಯಿಲ್ಲಕನರಯ್ಯ ಯಿಲ್ಲ’ ಯಂಬ ವುತ್ತರವು ಪ್ರತಿಯೊಂದು ಮನೆಯಿಂದಲೂ ಬಂತು. ಆ ಪ್ರಾಂತದಲ್ಲಿ ಕೋಣ ಹುಟ್ಟಿರುವುದುಂಟು, ಬೆಳೆದಿರುವುದೂ ವುಂಟು, ಅಲ್ಲಲ್ಲಿ ನಡೆದ ಕಾಳಗಗಳಿಗೆ ತಾವು ಅವುಗಳನ್ನು ಜುಲುಮಿಯಿಂದ ಸರಬರಾಜು ಮಾಡಿರುವುದೂವುಂಟು. ಹಿಂಗಾಗಿ ಗ್ರಾಮಗಳು ಬೀಜದ ಕೋಣಗಳ ಬರವನ್ನು ಯದುರಿಸುತಲಿದ್ದವು. ಪ್ರತಿಯೊಂದು ಯಮ್ಮೆ, ಮಣಕವೂಬೆದೆಗೆ ಬಂದು ವಂದೇ ಸಮಕ ಅರಚುತಲಿದ್ದವು...
ಜಾಲಿ ಮರಗಳಿಂದಲೂ.. ಕಕ್ಕಸು ಪೆಳೆಗಳಿಂದಲೂ.. ಕಾರೆ, ಕವಳೆ, ಬೋರೆ, ಬಾರೆಯೇ ಮೊದಲಾದ ಪೊದೆಗಳಿಂದಲೂ, ಅಲ್ಲೊಂದು ಯಿಲ್ಲೊಂದರಂತೆ ಚಿಗಿತುಕೊಂಡಿದ್ದ ಹುಲ್ಲುಗರುಕೆಗಳಿಂದಲೂ ಸೋಭಾಯಮಾನವಾಗಿದ್ದ ಕಾಸರಕ ಯಂಬುವ ಗ್ರಾಮದೊಳಗ ಅಳ್ಳಾಡಪ್ಪ ಯಂಬ ಹೆಸರಿನಾತನು ತನ್ನ ಯೇಕಮಾತ್ರಪುತ್ರಿಕಂಕಾಳವ್ವಗೆ ಬರಬಾರದ ರೋಗ ಬಂದಿರುವ ಕಾರಣಕ್ಕೆ ಮುಗುಲು ಕಡೇಕ ಮುಖಮಾಡಿ ವಂದರ