455
ಬಿತ್ತಿದವರೆಷ್ಟೋ? ನಡೋ ದಾರೀಲೆ ಕುಂಪಣಿ ಸಯ್ನಿಕರ ಮ್ಯಾಲ ಮುಗಿಬಿದ್ದು ಮೋಡಿಸಬೇಕೆಂದವರೆಷ್ಟೋ? ಅವ್ವಾ.. ಅವ್ವಾ... ಯಂದನಕಂತ ಅರಮನೆ ಕಡೇಕ..
ಮಯ್ಯಿ ತೊಳೆದ ಮುತ್ತಿನಂಗ ಥಳ ಥಳ ಹೊಳೆಯುತ್ತಿದ್ದ ಅರಮನೆಯ ಸುತಮುತ್ತ ಯಲ್ಲಿ ನೋಡಿದರೂ ಜನಮೋ.. ಜನ.. ಮುಂದೊಂದು ಹೆಜ್ಜೆಯಿಟ್ಟಲ್ಲಿ ಯೇನಾಯ್ತದೋ ಯಂಬ ಅಳುಕು.. ತಾವು ನಿಂತಿರುವಂಥ ನೆಲವೇ ಅವ್ವನ ಸನ್ನಿದಿs ಯಂದು ಭಾವಿಸಿ ಮುಕ್ಕುತಲಿದ್ದರು.. ನೆಲದ ಹುಡಿಯನ್ನೆ ಅಂಗಾರ ಯಂದು ಭಾವಿಸಿ ತಮ ತಮ್ಮ ಹಣೆಗೆ ತಿಲಕ ಯಿಕ್ಕಂತಿದ್ದರು.. ತುಟಿಮೋಳು ಮಾಡದೆ ತಮ ತಮ್ಮ ಯದೆಯಾಗಿನ ಗಿದ್ದುನ ಯಸನವನ್ನು ತೋಡುಕಂತಿದ್ದರು.. ತಮ ತಮ್ಮ ಕಣ್ಣು ಮುಚ್ಚಿ ಅವ್ವನ ಲೀಲಾಯಿನೋದದ ದರುಸನ ಪಡಕಂತಿದ್ದರು.. ತಮ ತಮ್ಮ ಕಿವಿಯೊಳಗೆ ಅವ್ವನ ಹೆಜ್ಜೆಯ ನಾದ ಕೇಳಿಸಿಕಂತಿದ್ದರು....
ಮೋಬಯ್ಯ ತನ ಮುಂದ ಯೀಟಗಲ.. ಆಟುದ್ದದ ತಳಿಗೆಯನ್ನು ಯಿರಿಸಿಕೊಂಡಿದ್ದ, ಅದು ಅಪ್ಪಟ ಚಿನ್ನದ್ದಾಗಿತ್ತು. ಸಂತಾನಾಪೇಕ್ಷೆವುಳ್ಳವನಾಗಿದ್ದ ಚೀಕಲಪರವಿಯ ಬೆಟ್ಟಪ್ಪೊಡೆಯನು ಭಕುತಿಪುರುವಕವಾಗಿ ಅದನು ಅರುಪಣ ಮಾಡಿ ವಂದೆರಡು ದಿವಸವಾಗಿತ್ತು. ಅದರೊಳಗ ವಂದು ಚೆಟ್ಟಿ ಚಿಗುರೆಲೆ, ಬೆಣ್ಣೆಯಂಥ ಸುಣ್ಣ ತುಂಬಿದ್ದ ಬೆಳ್ಳಿ ಬಟ್ಟಲು, ಯಾಲಕ್ಕಿ, ಲವಂಗ, ಪತ್ರೆ, ಪಚ್ಚೆಕರುಪುರ ಗೋಟಡಕೆ, ವಂದು ಸಿವುಡು ಗರಿಗರಿ ತಂಬಾಕು ಮತ್ತಿತರ ತಾಂಬೂಲ ಸಾಮಾಗ್ರಿಗಳನು ಯಿರಿಸಲಾಗಿತ್ತು. ಹಾಯವ್ವ, ಅಂಜಿಕೆವ್ವ, ಗಾದಿರೆವ್ವ ಮೊದಲಾದವರು ಅವಯ್ಯನ ಸಂಚಿ ವೂಳಿಗಕ್ಕೆ ತಮಗ ತಾವs ನಿಯುಕ್ತಗೊಂಡಿದ್ದರು. ತನಗ ಸದ್ಬುದ್ದಿ ದಯಪಾಲಿಸೆಂದು ಹುರುಳಳ್ಳಿಯ ಕೋರಿ ಚನ್ನನ ಗವುಡ ಹೋದ ವಾರ ಭಕುತಿಪುರುವಕವಾಗಿ ಅರುಪಣ ಮಾಡಿದ್ದ ಪಂಚಲೋಹದ ಪಿಕದಾನಿಯನ್ನು ಕಾಡುಗೊಲ್ಲರೀರಜ್ಜನು ಅವಯ್ಯನ ಬಲ ಬದಿಯಲ್ಲೂ, ವಂದೆರಡು ತಲೆಮಾರು ಕಾಲದಿಂದ ಹೊಗೆಯಾಡುತ್ತಿರುವ ದಾಯಾದಿ ಕಲಹಕ್ಕೆ ವಂದು ಗತಿ ಕಾಣಿಸೆಂದು ಕೋರಿ ಮಾಕಮಡಿಗನ ಹೊಟ್ಟೆ ಕೊರಲಯ್ಯನು ನಾಕಯ್ದು ದಿವಸಗಳ ಹಿಂದೆಯೇ ಭಕುತಿಪುರುವಕವಾಗಿ ಕೊಡ ಮಾಡಿದ್ದ ಚಾಮರ ಗಳಿಂದ ಗಾಳಿ ಬೀಸುತಲಿದ್ದ ಗೂಡ್ಲಪಾಲಯ್ಯನು ಅವಯ್ಯನ ಯಡ ಬದಿಯಲ್ಲಿದ್ದನು. ಗೊರ್ಲಿಪಾಲಕ್ಕ, ಮ್ಯಾಸರ ಮಲ್ಲವ್ವ, ಪುರಗುಂಡಿ ಕನ್ನವ್ವ ಮೊದಲಾದ ಕಂಚಿನ ಕಂಠದ ಗಾಯಕಿಯರು ಸನ್ನಿದಿs ಯದುರಾ ಬದುರಾ ಕೂಕಂಡು ಸಾಂಬವಿ ಕುಡುರೆಡವು ಪಟ್ಟಣವನ್ನು