೫೩೬
ಅರಮನೆ
ಹಾಳುಗೆಡವಿದ್ದ ಚಂಡನ ತರಡು ಬೀಜಗಳನ್ನು ಕುಯ್ ಕುಂಯ್ಯೋ ಯಂದು ಹಳಿಯುತ್ತ, ಕಾಡು ಮೇಡು ಅಲೆದೂ ಅಲೆದೂ ವೂರುಕೇರಿಗಳನ್ನು ದಾಟೀ ದಾಟೀ ಸದರಿ ಪಟ್ಟಣವಾದ ಕುದುರೆಡವನ್ನು ಅಂಕಲಯ್ಯ ಬಾಗಿಲಿಂದ ಪ್ರವೇಶ ಮಾಡಿ, ಪಿರಂಗಿ ಮೋಣಿ ಗುಂಟ ನಡಕೋತ ಬಂದು ಆಂಜನೇಯಸ್ವಾಮಿಯ ಗುಡಿಯನ್ನು ಪೊಕ್ಕು ಸಿಮ್ಮಾವಲೋಕನ ಮಾಡಲು, ಅಲ್ಲಿ ಹರಳೆಣ್ಣೆ ಸೊಡರು ಬೆಳಕಲ್ಲಿ ತಾಳೆಗರಿ ಕಟ್ಟನ್ನು ನೋಡಿ ಯಾದೋ ಬುತ್ತಿ ಗಂಟೆಂದು ಭಾವಿಸಿ ಹೋಗಿ ಬಾಯಿ ಹಚ್ಚಿತ್ತು. ಮಾಕವಿಯ ಬೆವರು ಮಿಸ್ರಿತ ಸಹಸ್ರಸಹಸ್ರಅಕ್ಕರಗಳು ಅಂತೂ ತಮ್ಮನ್ನ ಆಸ್ವಾದಿಸಬಲ್ಲ ವಬ್ಬ ಸವ್ರುದಯಿ ದೊರಕಿದನಲ್ಲಾ ಯಂಬ ಸಂತೋಷದಿಂದ ನನ್ನ ತಿನ್ನು, ನನ್ನ ತಿನ್ನು ಯಂದು ಹಾತೊರೆದು ತಮ್ಮ ರುಚಿಯನ್ನು ಹೆಚ್ಚಿಸಿಕೊಂಡವು.. ವಂದೊಂದು ಸಬುಧವು ತಾಮೊಂದೊಂದು ಖಾದ್ಯ ಯಂಬಂತೆ ಭ್ರಮಾ ಮಾಡಿದವು.. ಮೊದೊಂದು ರುತ್ತವು ತಾಮೊಂದೊಂದು ಕಜ್ಜಾಯ ಯಂಬಂತೆ ಭ್ರಮಾ ಮಾಡಿದವು.. ವಟ್ಟಾರೆ ಆ ಅಪುರ್ಣ ಕಾವ್ಯದ ಗಂಟು ತಾನೊಂದು ಫಳಾರದ ಅಂಗಡಿಯಂತೆ ಭ್ರಮಾ ಹುಟ್ಟಿಸಿತು.. ಯೇಸೋ ದಿವಸಗಳಿಂದ ಯಿಲಿಚಮ್ಮ, ಅಳಿಲಮ್ಮಗಳನ್ನೇ ತಿಂದು ಕಾಲನೂಕಿದ್ದ ಆ ಅಯಿಷರಾಮಿ ಸುನಕವು ‘‘ಯಿದಾವ ಭೋಜನಂಬು’’ ಯಂಬ ವುದ್ಗಾರದೊಂದಿಗೆ ಅದನು ಕಟಕಟ ನಮಲುತ್ತಿರುವಾಗ್ಗೆ....
ಮಾಕವಿ ಅಯ್ಯಾಳೇಸ್ವರನು ಗರುಭಗುಡಿಯೊಳಗೆ ತನ್ನ ಕುಲದೇವರಾದ ಆಂಜನೇಯ ಸ್ವಾಮಿ ಯದುರು ಪದುಮಾಸನ ಹಾಕಿ ಕೂಡುಕೊಂಡಿದ್ದನು. ಅವನ ಕಣ್ಣಪಟಲದ ಮ್ಯಾಲ ಹವಾಮಹಲೆಂಬ ಸೂತಕದರಮನೆಯ ತರಾವರಿ ದ್ರುಸ್ಯಾವಳಿಗಳು ಚಲಿಸ್ಯಾಡ ತೊಡಗಿದ್ದವು. ಸಕಲಾಭರಣಾಲಂಕ್ರುತ ಕಳೇಬರವು ತರಾವರಿ ರೂಪಧಾರಣ ಮಾಡುತ ಸಾಗಿದ್ದಿತು. ಯೀ ಯಿಳಿ ವಯಸ್ಸಿನಲ್ಲಿ ಯಿಷ್ಟು ಸುಂದರವಾಗಿರುವ ರಾಜಮಾತೆಯು ಯೇರು ಜವ್ವನದ ವಯಸ್ಸಿನಲ್ಲಿ ಯಷ್ಟೊಂದು ಸುಂದರಿಯಾಗಿದ್ದಿರಬೌದು? ಹ್ಹಾ.. ಹ್ಹಾ... ನೀಳನಾಸಿಕಮೋ, ಆ ನಿಲುಮೋ? ಆ ಭವತ್ ಕೇಸ ಪಾಸ ಪ್ರಪಂಚಮೋ?... ಅರೇ ತಾನು ಯೋಚಿಸುವುದೇನು? ಮಾಕವಿಯೆನಿಸಿರುವ ತಾನು ಯಿಲೋಮ ರೀತಿಯಲ್ಲಿ ಆಲೋಚಿಸುವುದು ಅಸಹ್ಯ. ಚೆದುರಿ ಚೆಲ್ಲಾಪಿಲ್ಲಿಯಾಗಲು ಹಾತೊರೆಯುತಲಿದ್ದ ಮನಸ್ಸನ್ನು ಯಳೆದು ತಂದು ಹದ್ದುಬಸ್ತಿನಲ್ಲಿಡುವ ಪ್ರಯತ್ನ ಮಾಡುತಲಿದ್ದನು. ತನ್ನ ಮನಸ್ಸಿನಲ್ಲಿ ಮುಡುಮುಡನೆ ಮೂಡುತಲಿದ್ದ ದಿವ್ಯ ಕಳೇಬರವನ್ನು