ನಿಲುಗಲ್ಲುಗಳುಳ್ಳ ಕೋಳಿಗುಡ್ಡವು, ಬೂದಿಗುಡ್ಡದ ಮಯ್ಯಿ ತುಂಬೆಲ್ಲಾ ಯಿರುವ ನಿಲುಗಲ್ಲುಗಳು ವಟ್ಟು ಸಾವುರದಾ ಅಯ್ನೂರಾವಂದು. ಅವುಗಳು ಯಾವುವೆಂದರೆ ಸುಗ್ಗುಣಾಸುರ, ಮಗ್ಗುಲಾಸುರ, ನೆಗ್ಗಲಾಸುರ, ತಗ್ಗಲಾಸುರ, ಯೇಕಾಂತಾಸುರ, ಬೊಮ್ಮಲಾಸುರ, ಕಾಟಾಸುರ, ಜಕ್ಕಂತಾಸುರ ಯಿವೇ ಮೊದಲಾದವು.
ಯಿವು ಬರೀ ಕಲ್ಲು ಗುಂಡುಗಳಲ್ಲ. ವಂದೊಂದಕ್ಕೆ ಪಂಚ ಯಿಂದ್ರಿಯಗಳುಂಟು. ಕಯ್ಯಿ ಕಾಲುಗಳುಂಟು. ಮತ್ತೇನೆಲ್ಲಾ ವುಂಟು. ಗುಡ್ಡ ಗುಡ್ಡದ ನಡುವೆ ಯಗಸ್ತನ ವುಂಟು, ಬೀಗಸ್ತನ ವುಂಟು. ಆ ಗುಡ್ಡದ ಕಲ್ಲುಗಳು ಯೀ ಗುಡ್ಡಕೆ, ಯೀ ಗುಡ್ಡದ ಕಲ್ಲುಗಳು ಆ ಗುಡ್ಡಕ ಬರೋದು ಹೋಗೋದು ಮಾಡುತಾ ಯಿರುತವೆ. ಮಾತಾಡಿಕಂತ ಯಿರುತವೆ, ಜಗಳಾಡುಕಂತವೆ, ಕಿತ್ತಾಡಕಂತವೆ, ಪರಸ್ಪರ ಮದುವೆ ಮುಂಜಿ ಸೋಬನ ಪ್ರಸ್ತ ಮಾಡಕಂತಿರುತವೆ, ಹೆಣ್ಣು ಕಲ್ಲುಗಳು ಬೊಸುರಾಗ ತಿರುತವೆ, ಯಿನ್ನೊಂದು ಕಲ್ಲಿಗೆ ಜಲುಮ ನೀಡುತಿರುತವೆ.
ಸದರಿ ಪಟ್ಟಣದೊಳಗ ಯಮಧರುಮ ಬರೋ ಧಯರ್ಯ ಮಾಡೋದು ಕಡಿಮೆ. ಅದಕ ಮುಪ್ಪಾನು ಮುದೇರು ಮನೆಗೊಬ್ಬರಂತಿದಾರ, ತಮಗ ಸಾವು ಬರವಲ್ಲದು ಬರವಲ್ಲದು ಅಂತನ ಕಂತಿರುತಾರ, ತಮ ತಮ್ಮ ಪುಣ್ಯ ಬಲವಶಾತ್ ಸತ್ತೋರು ತಾಮಾವಂದು ಕೋಡು ಗಲ್ಲಾಗಿ ಯಾದಾರ ಗುಡ್ಡದೊಳಗ ಸ್ಥಾನ ಪಡಕಂತಾರೆ, ಯಿನ್ನೊಂದು ಸಂಗತಿ ಅಂದರೆ ಸದರಿ ಪಟ್ಟಣದ ಹೆಂಗಸರು ತಮ ಬಸುರೊಳಗ ಮೂಡೋದು ನಿಲುಗಲ್ಲು ಯಂದು ನಂಬುತಾರೆ, ಹುಟ್ಟುವ ಕೂಸಿಗೆ ನಿಡುಗಲ್ಲುಗಳ ಪಯ್ಕಿ ಹೆಸರೊಂದನ್ನು ಹುಡುಕಿ ತೆಗೆಸಿ ಯಿಡುತಾರೆ, ಗುಡ್ಡದ ಕಲ್ಲುಗಳು ಪಟ್ಟಣದ ಮ್ಯಾಲ, ಪಟ್ಟಣದ ಮಂದಿ ಗುಡ್ಡದ ಕಲ್ಲುಗಳ ಮ್ಯಾಲ ಸದಾ ನಿಗಾ ಯಿಟ್ಟಿರುತಾರ..
ಸದರಿ ಪಟ್ಟಣ ಭೂಮಿ ಮ್ಯಾಲ ಯಾವಾಗ ಮೂಡಿತು, ಯಾವತ್ತು ತನಗ ಕುದುರೆಡವು ಯಂಬ ನಾಮ ಪಡಕಂತು ಯಂಬುದಕ ವಂದು ಕಥೆವುಂಟು.
ಅದು ಯಾವುದೆಂದರೆ.......
ಕುದುರೆಡವು ಪಟ್ಟಣದ ಮೂಡಲಗಡೇಲಿರುವ ಗುಡೇಕೋಟೆಯಂಬ ದುರ್ಗವನ್ನು ವಳಿತು ಮಾಡಿಕೊಂಡು ಆಳುತ್ತಿದ್ದಂಥಾ ರಣ ಕದಿರೇ ನಾಯಕನಿಗೆ ವಂದು ಕಾಲದಲ್ಲಿ ಯದುರೆಂಬುದು ಯಿರಲಿಲ್ಲ. ತನಗೆ ತಾನೇ