ಪುಜೆ ಪುನಸ್ಕಾರ ಗ್ರಹಸಾಂತಿ ಮಾಡಿಸಿದನಾದರೂ ಆ ಸಬುಧದಾಡಂಬರವು ಅಂಬರದೊಳಗ ನಿಲ್ಲಲಿಲ್ಲ. ಆಗ ವಂದಿವಸ ಆ ನಾಕೂರುಗಳ ಮಂದಿಯು ವಂದು ಕಡೆ ಸಭೆ ಸೇರಿತು. ಪ್ರಳಯ ಸಂಭವಿಸುವ ಮೊದಲೇ ತಾವು ತಮ್ಮ ಹೆಂಡರು ಮಕ್ಕಳನು ಕಟ್ಟಿಕೊಂಡು ದೂರಕ ಗುಳೇ ಹೊಂಡುವುದೇ ಲೇಸೆಂದು ಅಭಿಪ್ರಾಯ ಯ್ಯಕ್ತಪಡಿಸಿತು. ಸಭೆ ಯಿನ್ನೇನು ಬರಕಾಸ್ತು ಆಗ ಬೇಕೆಂಬುವಷ್ಟರಲ್ಲಿ ಆತನು ಸುಡುಗಾಡಿಂದ ಬಂದು ‘ಯೀ ನಾಕು ವೂರುಗಳು ತನಗೆ ಸರಣಾದ ಪಕ್ಷದಲ್ಲಿ ನಾನಾ ಬ್ಯಾತಾಳದ ಅಟ್ಟಹಾಸವನ್ನು ಮಣಗಿಸುವುದಾಗಿ ಹೇಳಿದನು. “ಆಟು ಮಾಡಿ ಪುಣ್ಯ ಕಟ್ಟಿಕೊಳ್ಳಪ್ಪಾ”ಯಂದು ಗವುಡ ಸೇರಿದಂತೆ ಸಮಸ್ತರು ಸರಣಾದರು.. ಅಲ್ಲಿಂದಾತನು ಸೀದ ಸುಡುಗಾಡಿಗೆ ಹೋದವನೆ ಗೂಬೆಯ ಕೊಳ್ಳಲಿದ್ದ ಗಂಟೆಯನ್ನು ಬಿಚ್ಚಿಬಿಟ್ಟನು ಅಷ್ಟೆ.. ತನ್ಮೂಲಕ ಆ ಸಬುಧದ ವುಪಟಳವು ನಿವಾರಣೆಗೊಂಡಿತು. ನಾಕುವೂರುಗಳು ಸಮಾಧಾನದ ವುಸುರು ಬಿಟ್ಟವು.. ಮಂದಿ ಯಂಬುವ ಮಂದಿ ಯಿರುವೆಯೋಪಾದಿಯಲ್ಲಿ ಸುಡುಗಾಡಿಗೆ ಹರಿಯಲಾರಂಬಿsಸಿತು. ನೀನೇ ನಮಗ ದೇವರಿದ್ದಂಗಪ್ಪಾಯಂದು ಹಣ್ಣುಹಂಪಳ ಕಾಣಿಕೆ ಯಿಟ್ಟು ಅಡ್ಡು ಬೀಳ ತೊಡಗಿತು.
ಯೀ ಪ್ರಕಾರವಾಗಿ ಆ ನಾಕೂ ವÆರುಗಳನ್ನು ತನ್ನೊಶಮಾಡಿಕೊಂಡವನಾದ ಅವಯ್ಯನು ಆ ಸುಡುಗಾಡೊಳಗೆ ಆಸ್ರಮ ಕಟ್ಟಿಕೊಂಡು ತಳವೂರಿ ಸುಡುಗಾಡೆಪ್ಪಾವಧೂತ ಯಂಬ ಹೆಸರಿನಲ್ಲಿ ಸುವಿಖ್ಯಾತನಾಗಿ ಅಯಿಭೋಗ ಅನುಭವಿಕೆ ಮಾಡಲಾರಂಭಿಸಿದನು. ಹೀಗಿರುತ್ತರಲಾಗಿ...
ಆಕಾಸ ರಾಮಣ್ಣನ ಸರೀರ ಯಂಬ ಗರಡಿಯೊಳಗೆ ಪಳಗಿದ್ದ ಕಳುವು ಸಂಬಂಧೀ ಭಾವನೆಗಳು ಆಲೋಚನೆಗಳು ಗಟ್ಟಿಮನಸ್ಸು ಮಾಡಿ ಆತನ ಸರೀರವನ್ನು ಪ್ರವೇಸ ಮಾಡಿ ಬಿಟ್ಟವು ಸಿವನೇ...
ಅದರ ಪರಿಣಾಮವಾಗಿ ಅಂಬ್ರುತ ಗಳಿಗೇಲಿ ಯಚ್ಚರಗೊಂಡಂಥವನಾದ ಸುಡುಗಾಡೆಪ್ಪಾವಧೂತನು ತಾನು ಅವರ ಮನೆಯನ್ನು ಹಂಗ ಕಳುವು ಮಾಡಬಾರದ್ಯಾಕ.. ಯಿವರ ಮನೆಯನ್ನು ಹಿಂಗ ಕಳುವು ಮಾಡಬಾರದ್ಯಾಕ.. ಯಂದು ಲೆಕ್ಕ ಹಾಕಲಾರಂಭಿಸಿದನು ಸಿವನೇs...
ತಾಯಿ ಸಾಂಬವೀ ಬಯಲು ಬಯಲಿಗೆ ತುರುಕಿ
ವುಟ್ಟೀಗಿ ವುಡಸಿದಿಯಲ್ಲೇ ಬನ್ನೀಯ ಮರದಾಕಿ