೬೫೧
ಅರಮನೆ
ಹೆಂಡದ ಅಮಲಿನೊಳಗ ತಮ್ಮನ್ನು ತಾವು ಕಳಕೊಂಡಿದ್ದೆವಲ್ಲಾ, ಲವುಕಿಕದೊಳಗಿದ್ದ ಅಲವುಕಿಕತನವ ಗುರುತು ಹಿಡಿಯದಂತಾಗಿದ್ದೆವಲ್ಲಾ.. ಯಂದು ಮುಂತಾಗಿ ಕುಂತಳ ಸೀಮೆಯಾದ್ಯಂತ ಇದ್ದಂಥ ಸಾಧು ಸಂತ ಅವಧೂತ ಮಂದಿ ಯೇನಿತ್ತು, ಅದು ತಮ ತಮ್ಮ ಕಣ್ಣ ಅಟವಾಳಿಗೆಯೊಳಗ ಕುಂತಳ ಸೀಮೆಯ ನಕಾಶೆಯನ್ನು ಹರಡಿಕೊಂಡಿದ್ದು ತಡಾ ಆಗಲಿಲ್ಲವಂತೆ... ಫಲಾನ ಇಂಥ ಕಡೇಲುಂಟು ಕುದುರೆಡವು ಯಂದು ಪತ್ತೆ ಮಾಡಿದ್ದು ತಡಾ ಆಗಲಿಲ್ಲವಂತೆ.. ಅವರೆಲ್ಲ ಹೆಂಗೆಂಗ ಹೊಂಟರಂದಕ ಹಂಗಂಗs ಹೊಂಟರಂತೆ.....
ತೆಕ್ಕಲಕೋಟೆಯೊಳಗೆ ನೆಲಗೊಂಡಿದ್ದ ಕಾಡುಸಿದ್ಧಪ್ಪ ತಾತನು ತಾನು ಕಣ್ಣು ಬಿಟ್ಟೊಡನೆ ಗೋಚರ ಮಾಡಿದಂತಾ ಮೋಟು ಗೋಡೆಯನ್ನು ಕುರುತು “ಯಲಾಯ್ ಮೋಟುಗೋಡೆಪ್ಪಾ...ನೀನು ನನಗ ವಾಹನ ಆಗುವಿಯೇನಪ್ಪಾ”ಯಂದು ಕೇಳಿದೊಡನೆ ಆ ಮೋಟುಗೋಡೆಯು “ಯಜ್ಜಾ ನೀನು ಬಗಸೋದು ಹೆಚ್ಚಾ...ನಾನಾಗೋದು ಹೆಚ್ಚಾ” ಅಂತಂತೆ ಸಿವನೇ... ಹಿಂಗs ಗೂಳ್ಯದಿಂದ ಗಾದಿಲಿಂಗಪ್ಪ ತಾತನು ಕರಿಗಂಬಳಿ ಮ್ಯಾಲ....ಆದವಾನಿ ವಳಿತದಿಂದ ತಟ್ಟಿಲಚುಮವ್ವ ಪತ್ರೋಳಿಮ್ಯಾಲ, ಹೊಳಗುಂದಿಯಿಂದ ಸಾಯಿಬಣ್ಣ ತಾತನು ಹಿಂಜಿದ ಅರಳೆ ಮ್ಯಾಲ, ದಮ್ಮೂರಿನಿಂದ ಯಂಕಪ್ಪಾ ವಧೂತನು ತಂಬೂರಿ ಮ್ಯಾಲ, ಕುರುಗೋಡಿನಿಂದ ಕುರುಪ್ಪಜ್ಜನು ಕಲ್ಲುಗುಂಡಿನ ಮ್ಯಾಲ, ಸುಟ್ಟಮ್ಮನಳ್ಳಿ ಯಿಂದ ಮಸಣಾರೂಢತಾತನು ಸಮಾಧಿಯೊಂದರ ಮ್ಯಾಲ, ದ್ಯಾವಲಾಪುರದ ಲಿಂಗಪ್ಪಜ್ಜ ಕುರಿಕ್ಕಿ ಮ್ಯಾಲ.. ಹಿಂಗss ವಬ್ಬೊಬ್ಬ ತಾತನೂ ವಂದೊಂದು ವಾಹನ ಮಾಡಿಕೊಂಡು ಕುದುರೆಡವ ಕಡೇಕ..
- * * *
ತನ್ನೊಳಗೆ ಬೆಳೆಯುತ್ತಲೇ ಯಿದ್ದ ಸ್ರೀರಂಗಪಟ್ಟಣವನ್ನು ವಮ್ಮಿಂದೊಮ್ಮಿಗೆ ವುತಾರ ಮಾಡುವು ದೆಂದರೆ ಹುಡುಗಾಟದ ಮಾತೇನು? ತಾನು ಕಾವೇರಿ ನೀರನ ಕುಡಿದದ್ದೇ ಪರಪಾಟಾಗಿತ್ತು... ಅದರ ಅಣು ಅಣು ಜಲಧಾರೆಯಾಗಿ ತನ್ನ ದೇಹದಾದ್ಯಂತ ದುಮ್ಮಿಕ್ಕುತ್ತಲಿತ್ತು. ಯುದ್ಧದ ಗಾಯಗಳು ತನ್ನ ಸರೀರದೊಳಗೆಲ್ಲ ಆವರಿಸಿರುವಂತೆ ಭಾಸವಾಗತೊಡಗಿತು. ಸೈನ್ಯದ ತುಕಡಿಯೊಂದಿಗೆ ತನ್ನನ್ನು ಸೇರಿಕೊಂಡಿದ್ದ ಕರ್ನಲ್ ಬಯಲ್ಲನ್ನಾಗಲೀ.. ಆಯರ ಕೂಟನ್ನಾಗಲೀ.. ಯಿಡೀ ಯುದ್ದ ಪ್ರಸಂಗವನ್ನು ತನ್ನೊಂದು ಕಿರುಬೆರಳಿನಿಂದಾಡಿಸಿದ ಕಾರ್ನವಾಲೀಸನ್ನಾಗಲೀ.. ತಾನು ಮರೆಯಲಕಾಗುತ್ತಿಲ್ಲ..