೭೧೦
ಅರಮನೆ
ಮುದೇರು ತಮ್ಮ ಮಕ್ಕಳನ್ನು ತರುಬಿ ‘ಅಯ್ಯಾ ಮಕ್ಕಳಾ ನೀವು ನಿಮ್ಮ ಪಿತ್ರುರುಣ ತೀರಿಸಬೇಕಾದರ ನಾವು ಸತ್ತ ಮ್ಯಾಲ ನಮ್ಮ ಕಳೇಬರಗಳನ್ನು ಕುದುರೆಡವಿಗೆ ವಯ್ದು ಮಣ್ಣು ಮಾಡಬೇಕು. ಯೀ ತಮ್ಮ ಅಂತಿಮಾಪೇಕ್ಷೆಯನ್ನು ನೀವು ನೆರವೇರಸದಿದ್ದ ಪಕ್ಷದಲ್ಲಿ ತಾವು ದೆವ್ವ, ಪೀಡೆ, ಪಿಚಾಚಿಗಳಾಗುತೇವಿ ಯಂದು ನುಡಿಯತೊಡಗಿ ಯೇಸು ಕಾಲವಾಯಿತೊ? ತಮ್ಮ ಮಕ್ಕಳು ತಮ್ಮ ಅಂತಿಮಾಪೇಕ್ಷೇನ ಯೀಡೇರಿಸಲಾರದೆ ಹೋದರೇನು ಗತಿ? ಯಂಬ ಅನುಮಾನದಿಂದ ಕುಂತಳ ಸೀಮೆಯ ಯೇಸೋ ಮಂದಿ ಮುದೇರು ತಮಗೆ ತಾವ ಮಣ್ಣಾಗಬೇಕೆಂಬ ಯಿಚ್ಫೆ ಹೊಂದಿದ ವರಾಗಿ ಕಳ್ಳಗಂಟು ಮಾಡುತಲಿದ್ದರವರೆಷ್ಟೋ ಮಂದಿ? ಪಟ್ಟಿಯುತ್ತುತಲಿದ್ದವರು ಯೇಸೋ ಮಂದಿ? ತಮ್ಮ ಗತಕಾಲದ ಪಾಪ ಕೃತ್ಯಗಳನ್ನು ವಂದೊಂದಾಗಿ ನೆನಪು ಮಾಡಿಕೊಳುತ ಯಿಲಯಿಲಾಂತ ವದ್ದಾಡುತಲಿದ್ದವರು ಯೇಸೋ ಮಂದಿ? ಹೆಂಗೋ ತಮ್ಮ ಪಾಪ ಮಾಫ್ ಆಗುವುದೆಂದಮ್ಯಾಲ ತಾವ್ಯಾಕ.. ಯಂದನಕಂತ ಹೊಸ ಹೊಸ ಪಾಪ ಕ್ರುತ್ಯಗಳಿಗೆ ತೊಡಗಿದ್ದವರು ಯೇಸೊ ಮಂದಿ? ಯಿವರ ಜಲುಮ ಯಾಕ ಗಟ್ಟಿಯಾಗಿರಬೇಕು.. ನಾಳೆ ಬರೋ ಸಾವು ಯಿಂದೇ ಬರಲಿ.. ವುಪಾಸ ವನುವಾಸ ಅನುಭೋಸಿ ಅಲ್ಲೆ ಸಾಯಲಕೆಂದು ಕುದುರೆಡವು ಕಡೇಕ ಹೊಂಟಿದ್ದವರು ಯೇಸೋ ಮಂದಿ? ಸಿವನೇ.. ಯೀ ಯಾದಿಯೊಳಗೆ ಬರೀ ನಮ್ಮ ನಿಮ್ಮಂಥ ಸಾಮಾನ್ಯ ಮಂದಿಯಷ್ಟೇ ಯಿರಲಿಲ್ಲ. ತುಪಾಕನಳ್ಳಿಯ ಬೊಮ್ಮಂತ ರಾಜ, ಮದೇನಳ್ಳಿಯ ಮಾದಪ್ಪನಾಯುಡು, ಚಿಲಕಮರ್ತಿಯ ಸೀಗಂಧಾರನಾಯಕ, ಸೀಪ್ರದ ಸಿವಪ್ಪನಾಯಕ, ವಡಾರಹಳ್ಳಿಯ ಜಟ್ಟಿಂಗೆಪ್ಪ ವಡೆಯರೇ ಮೊದಲಾದ ರಾಜಮಾರಾಜರು ಯೇಕ ಪ್ರಕಾರವಾಗಿಯಿದ್ದರು. ಅವರ ಪಯ್ಕಿ ಜಮೀನ್ದಾರರು, ಜೋತಿಷಿಗಳೂ, ಕೋಮಟಿಗರೂ, ಅಲುಪಸೊಲುಪ ಬ್ರಾಹ್ಮಣ ಕೋಮಿನವರೂ ಯಿಲ್ಲದಿರಲಿಲ್ಲ ಸಿವನೇ.. ಯಿಂಥ ಜಾಯಮಾನದವರಿಂದಾಗಿ ಕುದುರೆಡವುಯೆಂಬ ಪಟ್ಟಣವು ಕರುಮಧರುಮ ತಮ್ಮ ಪಟ್ಟಣನ್ನಾಗಲೀ ತಿಟ್ಟಿಕೊಂಡರೇನು ಗತಿ? ಸಾವವರು ತಮ್ಮ ಪಾಪದ ಮೂಟೆಯನ್ನು ಕಣ್ಣಿಗೆಟುಕಿದವರ ತಲೆಗೆ ಕಟ್ಟಿದರೇನು ಗತಿ? ಪ್ರಾಣೋತ್ಕೃಮಣ ಸಿದ್ಧಿಯೋಗದಲ್ಲಿರುವವರು ಪ್ರಾಣ ವದಲಿ ಕಳೇಬರದ ದಿವ್ಯ ಸ್ಥಿತಿ ಪಡಕೊಂಡವರು ದೇವರಿಗೆ ಸಮಾನಯಂಬುದು ಯೇದಗಳ ಸಾರವು ಯಂದು ಮುಂತಾಗಿ ಅಲವುಕಿಕ ಧಾಟೀಲಿ ಯೋಚನೆ ಮಾಡುತ ಸದರಿಪಟ್ಟಣದ ಪ್ರಜೆಗಳು ತಮ್ಮ