ಪುಟ:Banashankari.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

* ೬ ಹೊತ್ತು ಕಳೆಯಿತು ಬಲು ನಿಧಾನವಾಗಿ. ಹೊಲಗಳ ನಡುವೆ ದೂರವಿದ್ದ ಮನೆಗಳಿಂದಲೂ ಆಗೊಮ್ಮೆ ಈಗೊಮ್ಮೆ ಪಟಾಕಿಗಳ ಸದ್ದು ಕೇಳಿಬರುತಿತ್ತು, ನಾಣಿ ಮತ್ತು ರಂಗ ಬಾಗಿಲ ಹೊರಗೆ ನಿಂತು, "ಅದು ಕಿಟ್ಟೀ ಮನೇದು, ಅದು ಮಾದನ ಮನೇದು" ಎಂದು ಲೆಕ್ಕ ಹಾಕುತ್ತಿದ್ದರು. ಹಳ್ಳಿಯ ಅಂಚಿನಲ್ಲಿ ಎತ್ತರದಲ್ಲಿ ಬೆಟ್ಟದ ತಪ್ಪಲಲ್ಲಿದ್ದ ಹೊಲೆಯರ ಕೇರಿಯಿಂದ ಢಮರು ಢಮಾ–ಡಿಕ್ಕಿ ಢಮಾ –ಡಿಕ್ಕಿ ಎಂದು ಪಲ್ಲವಿ ನುತಿಸುತ್ತಿತ್ತು.ಸಮೀಪದಲ್ಲೇ ಯಾರೋ ಶಿವನ ಮಹಿಮೆಯನ್ನು ಕುರಿತು ಹಾಡುತ್ತಿದ್ದರು. ಕತ್ತಲೆಯನ್ನು ಭೇದಿಸುತ್ತ, ಭತ್ತದ ಮಾವು ಹಲಸುಗಳ ರೆಂಬೆಕೊಂಬೆಗಳ ನಡುವೆ ತಾರಿಕೊಂಡು, ಇಂಪಾದ ಮೋಹಕವಾದ ಆ ಸ್ವರ ಗೊತ್ತು ಗುರಿ ಇಲ್ಲದೆ ಸಂಚಾರಮಾಡುತ್ತಿತು. ಮಳೆ ನಿಂತ ಅನಂತರದ ಚಳಿಗಾಳಿ ಬಾಗಿಲು ಗವಾಕ್ಷಿಗಳ ಮೂಲಕ ಮನೆಯ ಒಳನುಗ್ಗಿ ಬರಿದು ಮೈಗಳಿಗೆ ಕಚಕುಳಿ ಇಟ್ಟಿತು : ಸೊಡರಗಳು ಅತ್ತಿತ್ತ ನರ್ತಿಸುವಂತೆ ಮಾಡಿತು. " ಹುಡುಗರಿಬ್ಬರೂ ತಾಯಿಗೆ ಸುತ್ತು ಸುತು ಬರುತ್ತ, "ಅಮ್ಮ, ಅಣ್ಣ ಬರಲಿಲ್ವಲ್ಲೇ--- ಹಸಿವಾಗುತ್ತಲ್ಲೇ--" ಎಂದರು. " ಹುಡುಗರಿಗೆ ಬಡಿಸು ಲಕ್ಷ್ಮಿ, ಬೆಳಗಿನಿಂದ ಕುಣೀತಾ ಇದ್ದಾರೆ. ನಿದ್ದೆ ಹೋಗಲಿ" ಎಂದರು ಮಾವ. " ಹೂಂ, ನಾಳೆ ಬೆಳಿಗ್ಗೆ ಸ್ನಾನಕ್ಕೆ ಬೇರೆ ಬೇಗನೆ ಎಬ್ಬಿಸ್ಬೇಕು," ಎನ್ನುತ್ತ ಅತ್ತೆ ಹುಡುಗರನ್ನು ಒಳಕ್ಕೆ ಒಯ್ದರು. ಅಮ್ಮಿಯೂ ಒಳಹೋಗಿ ಬಡಿಸಲು ನೆರವಾದಳು. ಇಷ್ಟು ಹೊತ್ತಿಗಾಗಲೇ ಅವರು ಬರಬೇಕಾಗಿತು. ಬಂದಿದ್ದರೆ, ಮಡಿಸ್ನಾನ ಮುಗಿಸಿ ಸಂಧ್ಯಾವಂದನೆ ಮಾಡಿ, ಅವರೂ ಊಟಕ್ಕೆ ಕೂಡುತ್ತಿದ್ದರು. ಮಾವ ಕೂಡಾ. ಆಗ ಎಲ್ಲರಿಗೂ ಅತ್ತೆ ಮತು ತಾನು ಬಡಿಸುತ್ತಿದ್ದೆವು... ಹಾಗೆ ಯೋಚಿಸುತ್ತ ಯೋಚಿಸುತ್ತ ಅಮ್ಮಿ ಹುಡುಗರಿಗೆ ಒಂದು ಹೋಳಿಗೆ ಹೆಚ್ಚು ಬಡಿಸಿದಳು. ಇಲ್ಲವೆ ಒಂದು ಕಡಿಮೆ.ಪರಿಣಾಮವಾಗಿ ಜಗಳ,ಗದ್ದಲ, ನಗೆಮಾತು. ಎಳೆಯರು ಉಂಡು ಮಲಗಿದ ಮೇಲೂ ಅತ್ರೆ ಮಾವ ಸೊಸೆ ಕಾದು ನಿಂತರು. ಅಮ್ಮಿ ಮನೆಯೊಳಗೂ ಹೊರಗೂ ಸೊಡರುಗಳನ್ನು ಒಂದೊಂದಾಗಿ ಸರಿಪಡಿಸಿದಳು. ಕಣಕ್ಷಣವೂ ಅವಳ ದೃಷ್ಟಿ ದೂರ ಹರಿಯುತ್ತಿತ್ತು, ಆ ಕತ್ತಲಲ್ಲಿ ಚಲಿಸುವ ಕಂದೀಲನ್ನು ಅವಳು ಹುಡುಕಿದಳು. ಹಳ್ಳಿಗೆ ಬರುವ ಹಾದಿಯಿಂದ ಮಾತುಕತೆಯ ಧ್ವನಿಯೇನಾದರೂ ಕೇಳಿ ಬರುತ್ತದೆಯೇನೋ ಎಂದು ಕಿವಿ ನಿಗುರಿಸಿದಳು. "ಅಮ್ಮೀ ಒಳಕ್ಕೆ ಬಾಮಾ. ಆ ಚಳೀಲಿ ಯಾಕೆ ಅಲ್ಲಿ ನಿಂತಿದ್ದೀಯಾ? ಬಾ ಒಳಕ್ಕೆ" ಎಂದರು ಮಾವ ಮೃದುವಾಗಿ. –ಅಥವಾ ಈ ದಿನ ಬರುವುದೇ ಇಲ್ಲವೇನೋ-ನಾಳೆ ಬರುವರೇನೋ.. ಅಮ್ಮಿಯ ಕಣ್ಣಂಚಿನಲ್ಲಿ ನೀರು ತುಳುಕಾಡಿತು. ಒಲ್ಲದ ಕಾಲುಗಳನ್ನು ಎಳೆದುಕೊಂಡು ಅವಳು ಒಳಹೋದಳು. ಹೊತ್ತು ಕಳೆಯಿತು, ಮತ್ತಷ್ಟು ನಿಧಾನವಾಗಿ.