ಪುಟ:Banashankari.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಬನಶಂಕರಿ ಅಮ್ಮಿಯ ಮಾವ ಒಂದು ಪುಸ್ತಕ ತೆರೆದು ಎರಡು ಪುಟ ಓದಿದರು. ಯಾವುದೋ ದಸ್ತಾವೇಜು ತೆರೆದು ನಾಲ್ಕಾರು ಪುಟ ಮಗುಚಿ ಹಾಕಿದರು. ಅದೂ ಬೇಸರವಾಯಿತು. ಕನ್ನಡಕವನ್ನು ಮೂಗಿನ ಮೇಲಿಂದ ಇಳಿಸಿ ಮಡಚಿಟ್ಟು, ಅತ್ತಿತ್ತ ಶತಪಥ ತುಳಿದರು.

  ಅಮ್ಮಿ ದೇವರ ಮನೆಗೆ ಹೋದಳು. ಅಲಂಕೃತ ಮಂಟಪದೊಳಗೆ ಮನೆದೇವರ ವಿಗ್ರಹ ನಿಶ್ಚಲವಾಗಿ ಕುಳಿತಿತ್ತು, ಅಲ್ಲೆ ಬಾಗಿಲಿಗೆ ಅತು, ಕಾಲು ಕೆರೆಯುತ್ತ ಅಮ್ಮಿ ನಿಂತಳು. ಅವ್ಯಕ್ತ ಪ್ರಾರ್ಥನೆಯ ನುಡಿಗಳೆಂಬಂತೆ ತುಟಿಗಳು ಚಲಿಸುತ್ತಿದ್ದವು.

ಹಿ೦ಬದಿಯಿಂದ ನಡೆದು ಬಂದು ಅತ್ತೆ ಹೇಳಿದರು :

" ನೀನು ಊಟಮಾಡಿ ಮಲಕೋ ಅಮ್ಮಿ." 

–ಎಲ್ಲಾದರೂ ಉಂಟೆ? ಎಂತಹ ಮಾತು ?

" ನಾ ಒಲ್ಲೆ ಅತ್ತೆ, ನಂಗೆ ಹಸಿವಿಲ್ಲ." ಕಾಡು ಹಾದಿ...ಕತ್ತಲು...ಅಮ್ಮಿಯ ಗಂಡನನ್ನು ಬಸಿರಲ್ಲಿ ಹೊತು ಹೆತ್ತಿದ್ದ ಆ ತಾಯಿಗೆ ಯಾಕೋ ಒಂದು ರೀತಿಯ ಅಳುಕು. ಶೀತಲ ಗಾಳಿ ನರನಾಡಿಗಳನ್ನು ತಿವಿಯುವ ಹಾಗೆ, ಆಅಳಕು ಹ್ಋದಯವನ್ನು ಹಿಂಡುತ್ತಿತ್ತು. ತೂಕಡಿಸುತ್ತಾ ಎಳೆಯ ಮಕ್ಕಳಿಬ್ಬರನ್ನೂ  ಮಲಗಿಸಿದ್ದಾಯಿತು...ಆ ಬಳಿಕ ಯೋಚನೆಗಳನ್ನು ಓಡಿಸಲೆಂದು ದೇವರ ನಾಮ.." ಕಂಡು ಕಂಡು ನೀ ಎನ್ನ ಕೈ ಬಿಡುವರೇ...'

ಮಾವ ಅಂಗಳಕ್ಕೆ ಹೋಗಿ ನಿಂತರು, ಬಹಳ ಹೊತ್ತು. ತನಗರಿಯದಂತೆಯೇ ಅಮ್ಮಿ ಅತ್ತೆಯ ಹತ್ತಿರ ಬಂದಿದ್ದಳು. ಅತ್ರೆಯ ಮಡಿಲಲ್ಲಿ ಮುಖವಿರಿಸಿ ಎಲ್ಲವನ್ನೂ ಮರೆಯ ಬಯಸಿದಳು ಅಮ್ಮಿ. ಹಿತಕರವಾಗಿ ಮುಂಗುರುಳು ನೇವರಿಸುತ್ತಿದ್ದ ಅತ್ತೆಯ ಬೆರಳುಗಳು...ಆ ಪಲ್ಲವಿ...' ಕಂಡು ಕಂಡು ನೀ ಎನ್ನ... ಎಲ್ಲ ವನ್ನೂ ಮರೆಯುವ ಸಾಧ್ಯತೆ--ತಿಳಿದೂ ತಿಳಿಯದಂತೆ ಬಲೆ ಬೀಸಿದ ಕಳ್ಳ ನಿದ್ದೆ.... ಇರುವಿಕೆಯನ್ನು ಮರೆತ ಆ ಅವಸ್ಥೆಯೊಳಗೆ ಅಮ್ಮಿ ಅದೆಷ್ಟು ಹೊತ್ತು ಇದ್ದಳೊ!

 ಯಾವುದೋ ಪಿಸುಮಾತು ಕೇಳಿಸಿತು ಅಮ್ಮಿಗೆ ಇದು ಸ್ವಪ್ನವಿರಬೇಕು–ಎಂದುಕೊಂಡಳು ಆಕೆ.  ಅವರು ಬಂದ ಹಾಗೆ.....ಬಂದು ತನಗಾಗಿ ಅತ್ತಿತ್ತ ದ್ಋಷ್ಟಿ ಹಾಯಿಸುತ್ತಿದ್ದ ಹಾಗೆ...ಅಮ್ಮಿ ನಿಧಾನವಾಗಿ ಕಣ್ಣು ತೆರೆದಳು. ಅತ್ತೆ ಮಾವ ಜತೆಯಾಗಿಯೇ ಬಾಗಿಲ ಬಳಿ ನಿಂತಿದ್ದರು. ಬೇರೆ ಯಾರೂ ಇರಲಿಲ್ಲ, ಸಾಲು ದೀಪಗಳಿನ್ನೂ ಉರಿಯುತ್ತಿದ್ದುವು. ಅಲ್ಲೊಂದು ಇಲ್ಲೊಂದು ಸೊಡರು ಕಣ್ಣು ಮುಚ್ಚಿತು. ಅಷ್ಟೆ, ಪಿಸುಮಾತಿನ ಸ್ವರ ಬಾಗಿಲ ಬಳಿಯಿಂದ ಬರುತ್ತಿತ್ತು.

ಅತ್ತೆ ಹೇಳುತ್ತಿದ್ದರು: " ನೋಡಿ ಈಗ ಸ್ಪಷ್ಟವಾಗಿ ಕಾಣ್ತಿದೆ ಕಂದೀಲು, ಅಲ್ಲ ? "

"ಹೂಂ...ಹೌದು...ಬೇಗ ಬೇಗನೆ ಬರ್ತಿರೋ ಹಾಗಿದೆ,"

ಅಮ್ಮಿ ತಟ್ಟನೆ ಎದ್ದು ಕುಳಿತಳು. ತಾನೂ ಬಾಗಿಲ ಬಳಿಗೆ ಓಡಬೇಕೆಂದು ಅವಳಿಗೆ ಆಸೆಯಾಯಿತು. ಆದರೂ ಒಳಮನಸ್ಸು ಹೇಳುತ್ತಿತ್ತು: ' ಇಲ್ಲೇ ಕುಳಿತಿರು. ಈ ನಿರೀಕ್ಷೆ ಎಷ್ಟೊಂದು ಸುಂದರ.! ಇಲ್ಲೇ ಕೂತಿರು...' ಆ ಸುಖಕ್ಕೆ ಭಂಗ ಬರಬಾರದೆಂದು ಅಮ್ಮಿ ಅಲ್ಲಿಯೇ ಚಾಪೆಯ ಮೇಲೆ ಕುಳಿತಳು.