ಪುಟ:Banashankari.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 18 ಬನಶಂಕರಿ ರಾಮಚಂದ್ರನೇ ಸಂತೋಷದ ಭರದಲ್ಲಿ ನಡುಗುತ್ತಿದ್ದ ಧ್ವನಿಯಿಂದ ಹೇಳಿದ: "ನಾವಿಬ್ಬರೇ ಮಾತಾಡ್ಬೇಕೂಂತ ಆಸೆಯಾಗ್ತಾ ಇರುತ್ತೆ, ಅಲ್ಲವಾ?" ತಲೆಯ ಚಲನೆಯಿಂದಷ್ಟೆ ಅಮ್ಮಿ ಹೌದೆಂದಳು.

  • ಮಾತಾಡು ! "

" ಊಂ...." " ಸಾಕು ವಯ್ಯಾರ!" ಅಮ್ಮಿಯ ಮೋಹಕ ನಗೆ. ರಾಮಚಂದ್ರನ ಎಡಗೈ ಅಮ್ಮಿಯ ನಡುವನ್ನು ಬಳಸಿತು, ಬಲಗೈ ಆಕೆಯ ಮುಂಗುರುಳನ್ನು ನೇವರಿಸಿತು. ಅವನ ತುಟಿಗಳು ಆಕೆಯ ತುಟಿಗಳನ್ನು ಹುಡುಕಿದುವು. ಆ ಶೋಧೆ ಮುಗಿದಾಗ-

  ಹೊಲದ ಅಂಚನ್ನು ಹಾದು ಎತ್ತರದ ಆಂಗಳಕ್ಕೆ ಏರಿ ಬರುತ್ತಿದ್ದ ಸದ್ದು. ಜತೆಯಲ್ಲೆ  ತೇಲಿಬರುತ್ತಿದ್ದ ಮಾತು:"ದೀಪನಾದರೂ ಹಚ್ಚಿದಾಳೋ ಇಲ್ಲವೋ...."
  ಅಮ್ಮಿ ಗಾಬರಿಗೊಂಡು ದೇವರ ಮನೆಗೆ ಓಡಿದಳು. ರಾಮಚಂದ್ರ, ಸಿಕ್ಕಿಬಿದ್ದ ಕಳ್ಳನಂತಿದ್ದರೂ ಸುಧಾರಿಸಿಕೊಂಡ.
 ಅಮ್ಮಿಯ ಮಾವನ ಸ್ವರ ಕೇಳಿಸಿತು.
   "ಆಗಲೇ ಬಂದೆಯೇನೋ ರಾಮು?"
    "ಇಲ್ಲಪ್ಪಯ್ಯ, ಈಗ ತಾನೇ ಬಂದೆ."

ಅಮ್ಮಿಯ ಅತ್ತೆ ಸ್ವರವೆತ್ತಿದರು: "ಪಾಪ ಇಷ್ಟರ ತನಕ ಅಮ್ಮಿ ಒಬ್ಬಳೇ ಇದ್ದಳಲ್ಲಾ?"

   ಯಾರಿಗೂ ತಿಳಿಯದ ಹಾಗೆ ತಾನು ಪಡೆದಿದ್ದ ಗಂಡನ ಸ್ಪರ್ಶ ಸುಖದಿಂದ  ಪುಲಕಗೊಂಡಿದ್ದ ಅಮ್ಮಿ ಅತ್ತೆಯ ಮಾತು ಕೇಳುತ್ತಾ ಮನಸ್ಸಿನೊಳಗೆ ಮುಗುಳುನಕ್ಕಳು.
 ಆ ಅನುಭವವೊ? ಅದೇ ಮೊದಲಿನದು-ಅದೇ ಕೊನೆಯದು.. ಗಂಡನಿಗೆ ಚಿಕ್ಕಮಗಳೂರಿನ ವ್ಯಾಪಾರಸ್ಥರೊಬ್ಬರಲ್ಲಿ ಲೆಕ್ಕ ಬರೆಯವ ಕೆಲಸ ದೊರೆಯಿತು. ಬೆಳೆಯದ ಹುಡುಗಿ ಅಮ್ಮಿಗೆ ರಾಮಚಂದ್ರನನ್ನು ಬಿಟ್ಟಿರುವುದು ಆಭ್ಯಾಸವಾಯಿತು.

...ಹಾಗೆ ಕಳೆದು ಹೋದ ದಿನಗಳು. ಆ ಬಳಿಕ ಮಾಂಗಲ್ಯ ಹರಣ. ...ಈಗ ಉಳಿದುದು ನೆನಪಿನ ಬುತ್ತಿಯೊಂದೇ–ಕತ್ತಲಾದ ಮೇಲೊಮ್ಮೆ ಒಂದು ಕ್ಷಣಕಾಲ ಮಾತ್ರ ಕೈಹಿಡಿದು ಗಂಡನ ಮುಖಕ್ಕೆ ಮುಖವಿಟ್ಟ ನೆನಪಿನ ಬುತ್ತಿ ಆದೊಂದೇ... ೦೦೦ "ಪಲ್ಯ ಗಿಲ್ಯ ಏನಾದರೂ ಮಾಡ್ತೀರೇನಮ್ಮ?" ಮಾವನ ಮಾತು. ಅದೇ ಶಾಂತ ಸ್ವರ -ಹಿಂದಿನದೇ. ಆದರೆ ಅದರಲ್ಲೀಗ ನಡುಕವಿದೆ -ನೋವಿನ ನಡುಕ. ಅಮ್ಮಿ ಅಡುಗೆಮನೆಯ ಕಡೆ ನಡೆದಳು. ಸಾಮಾನ್ಯವಾಗಿ ಎಳೆಯ ವಧುವಿಗೆ ಇರದ ಅಧಿಕಾರ ಅವಳಿಗಿತ್ತು. ಹಬ್ಬದ ದಿನ ಗಂಡನಿಗೆ ನೀರೆರೆಯುವ ಹಕ್ಕು-ಉಣಬಡಿಸುವ ಹಕ್ಕು, ಆದರೆ ಕಳೆದ ದೀಪಾವಳಿಯ ರಾತ್ರೆ