ಪುಟ:Chirasmarane-Niranjana.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೧೦೫

ಜನಜಾಗೃತಿಗೆ ಸಹಾಯಕ. ಅಲ್ವ ಸರ್?"
  ಮಾಸ್ತರು 'ಹೌದು' ಎಂದು ತಲೆದೂಗಿದರು. ಅದು ಹೇಗೆ ಎಂಬುದು 
ಅಪ್ಪುವಿಗೆ ಸ್ವಷ್ಟವಾಗಲಿಲ್ಲ. ಮಾಸ್ತರು ವಿವರಿಸಿದರು:
  "ಗ್ರಾಮ ಪಂಚಾಯಿತಿ ಮಾಡಿದ ಮೇಲೂ ಜಮೀನ್ದಾರರದೇ ಅಧಿಕಾರವಾದಾಗ,
ಈ ಪಂಚಾಯಿತಿಯಿಂದೇನೂ ಪ್ರಯೇಜನವಿಲ್ಲಾಂತ ಜನರಿಗೆ ಗೊತ್ತಾಗ್ತದೆ 
ನೋಡು.ಅನುಭವದಿಂದಲೇ ವಿಷಯ ಅವರಿಗೆ ಮನದಟ್ಟಾಗುತ್ತದೆ."
  ಈಗ ಅಪ್ಪುವಿಗೆ ಅರ್ಥವಾಯಿತು.
  ಪಪ್ಪಾಯಿ ಹಣ್ಣುಗಳ ಮೇಲೆ ಅಪ್ಪು ಕೈ ಆಡಿಸುತ್ತಿದ್ದುದನ್ನು ಕಂಡು ಚಿರುಕಂಡ 
ಹೇಳಿದ:
  "ಚೆನ್ನಾಗಿರೋ ಹಣ್ಣೇ ಕೊಟ್ಟಿದ್ದಾರೆ."
  "ಏನು ಚೆನ್ನಾಗಿದೆಯೇ!" ಎಂದು ಅಪ್ಪು ಅವುಗಳನ್ನು ಸ್ವಲ್ಪ ಬದಿಗೆ ತಳ್ಳಿದ.
  "ತಿನ್ನೋಣವೇನು?" ಎಂದು ಹುಡುಗರನ್ನು ನೋಡುತ್ತ ಮಾಸ್ತರೆಂದರು.
ಎಳೆಯರು ಮನಸ್ಸಿನಲ್ಲಿರಬಹುದಾದ ಆಕ್ಷೇಪವನ್ನು ಊಹಿಸುತ್ತ ಅವರು ಹೇಳಿದರು:
"ಜಮೀನ್ದಾರರ ಮನೇದೂಂತ ಯೋಚಿಸ್ಬೇಡಿ. ಯಾವನೋ ರೈತ ಬೆಳೆಸಿದ್ದು.
ನಾವೇ ನ್ಯಾಯವಾದ ಹಕ್ಕುದಾರರು. ಅಲ್ವ ಅಪ್ಪು? ಒಳಗಿನಿಂದ ಚಾಕು ತಂದು 
ಒಂದನ್ನಾದರೂ ಕುಯ್ದುಬಿಡು."
  ಅಪ್ಪುನಗುತ್ತ,ಒಪ್ಪದ. ಹಳೆಯದೊಂದು ಪತ್ರಿಕೆಯನ್ನು ತಂದು ಹಾಸಿ ಒಂದು 
ಹಣ್ಣುನ್ನು ಅದರ ಮೇಲಿಟ್ಟು ಕತ್ತರಿಸಿದ.
  ಹುಡುಗರ ಜತೆಯಲ್ಲಿ ಹಣ್ಣಿನ ತುಂಡುಗಳನ್ನು ತಿನ್ನುತ್ತಿದ್ದಂತೆ, 
ನಂಬಿಯಾರರೊಡನೆ ನಡೆಸಿದ ಮಾತುಕತೆಯ ಒಂದಂಶ ನೆನಪಾಗಿ, ಅದನ್ನು 
ವಿವರಿಸುತ್ತ, ಮಾಸ್ತರೆಂದರು:
  "ನಂಬಿಯಾರರು ಹೇಳಿದ್ದು-ಜಮೀನ್ದಾರ ತಂದೆ ಇದ್ದಹಾಗೆ; ರೈತರು
ಮಕ್ಕಳಿದ್ದ ಹಾಗೆ-ಅಂತ! ಅರ್ಥೆವಾಯಿತೇನ್ರೋ?"
  "ಓಹೋ" ಎಂದು ಅಪ್ಪು ರಾಗವೆಳೆದ.
  ಸ್ವಲ್ಪವೇ ಕಾಲದ ಹಿಂದೆ ತಮ್ಮ ಜಮೀನನ್ನು ಆ ತಂದೆಗೆ ಕಾಣಿಕೆಯಾಗಿ 
ಕೊಟ್ಟಿದ್ದ ಚಿರುಕಂಡ ನೋವಿನ ನಗೆ ನಕ್ಕ.
  ಹಣ್ಣು ತಿಂದಾದಮೇಲೆ ಮೂವರೂ ಶಾಲೆಯ ಅಂಗಳಕ್ಕಿಳಿದು ನಿಂತರು. ಹಿತ್ತಿಲ
ಎಡಬಲಗಳಲ್ಲಿ ನೆಟ್ಟಿದ್ದ ಮಾವಿನ ಗಿಡಗಳೆರಡು ಚಿಗುರಿಕೊಂಡು 
ಮೇಲೇಳುತ್ತಿದ್ದುವು. ಮಾಸ್ತರು ಪ್ರೀತಿಯಿಂದ ಆ ಎಲೆಗಳನ್ನು ಮುಟ್ಟಿ ನೋಡಿದರು.