ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ
ಮನೆಯೊಳಕ್ಕೆ ಇಣಿಕಿ ನೋಡಿ, ಆಶ್ಚರ್ಯಪಟ್ಟರೂ ಅದನ್ನು ತೋರ್ಪಡಿಸದೆ, ಹಾಗೆಯೇ ಹೊರಟುಬಂದ. ಮನೆ ತಲಪಿ ಆತನೆಂದ: "ಆ ಹುಡುಗರು! ಮೂರು ಮಾವಿನ ಕಾಯಿಯಷ್ಟು ಎತ್ತರವಿಲ್ಲ---ಪತ್ರಿಕೆ ಓದ್ತಾವಂತೆ. ಹುಂ!" ಆಗ ಬಾಯಲ್ಲಿ ಹಾಗೆಂದುರೂ, ಮಗನಿಗೆ ಏನನ್ನೂ ಹೇಳಲಿಲ್ಲ. ಆತನಿಗೊಂದು ರೀತಿಯಲ್ಲಿ ಅದು ಮೆಚ್ಚುಗೆಯೇ ಆಗಿತ್ತು. ಒಂದು ದಿನ ಆತ ಮಗನನ್ನು ಕೇಳಿದ: "ನಿನಗೆ ಓದೋಕೆ ಬರೋದಿಲ್ವೇನೂ?" "ಬರ್ತದೆ" ಎಂದ ಅಪ್ಪು, "ಮತ್ತೆ ಚಿರುಕಂಡ ಒಬ್ನೇ ಓದ್ತಾನೆ--" "ಯಾರು ಓದಿದ್ರೇನು?" ಎಂದು ಹೇಳಿ ಅಪ್ಪು,"ನನಗಿಂತ ಅವನೇ ಚೆನ್ನಾಗಿ ಓದ್ತಾನೆ" ಎಂದೂ ಮಾತು ಸೇರಿಸಿದ. ತಂದೆ ಅದಕ್ಕೆ "ಹುಂ" ಎಂದ ಅಷ್ಟೆ. "ನೀನೂ ಬಾ" ಎಂದು ತಂದೆಯನ್ನು ಕರೆಯಬೇಕೆಂದು ಅಪ್ಪುವಿಗೆ ಮನಸ್ಸಿದ್ದರೂ ಮಾತುಗಳು ಹೂರಬೀಳಲಿಲ್ಲ. ಅಲ್ಲದೆ, ಅಂಥ ಆಮಂತ್ರಣಕ್ಕೆ ಅರ್ಥವೂ ಇಲ್ಲ ವೆನ್ನುವಂತೆ,ಅಭ್ಯಾಸ ಕೂಟಕ್ಕೆ ಬರುತ್ತಿದ್ದವರ ಸಂಖ್ಯೆ ಕಡಮೆಯಾಗುತ್ತ ಆಗುತ್ತ ಕೂಟ ನಿಂತೇಹೋಯಿತು. ಆಗ "ನಮ್ಮ ಜನ ಯಾವಾಗಲೂ ಇಷ್ಟೇ" ಎಂದ, ಚಿರುಕಂಡನ ತಂದೆ ನೋವಿನಿಂದ. ಅಪ್ಪುವಿನ ತಂದೆ, "ತಮಾಷೆ ಮುಗಿದೇಹೋಯ್ತು" ಎಂದು ರಾಗವೆಳೆದ. ಆ ಮಾತಿನ ಹಿಂದಿನ ಭಾವನೆ ಯಾವುದೆಂಬುದು ಅವನಿಗೇ ತಿಳಿದಿರಲಿಲ್ಲ. ಎಲ್ಲರಿಗಿಂತ ಹೆಚ್ಚಿನ ದುಃಖ ತನ್ನದೆಂದು ತೋರಿಸಿಕೊಂಡವನು ಕೋರ. ಆತ ಬಂದು ಮಾಸ್ತರಿಗೆಂದ: "ಹುಡುಗರಿಗೆ ಯಾರು ಗೌರವ ಕೊಡ್ತಾರೆ ಹೇಳಿ? ನೀವಾದರೂ ಇದ್ದಿದ್ರೆ ನಾಲ್ಕು ಜನ ಬರ್ತಿದ್ರು." "ಹೋಗಲಿ ಬಿಡು. ಸ್ವಲ್ಪ ದಿವಸ ಹೀಗೇ ಇರ್ಲಿ" ಎಂದು, ತಮ್ಮನ್ನು ತಾವೇ ಸಮಾಧಾನಗೊಳಿಸುವವರಂತೆ, ಮಾಸ್ತರೆಂದರು. ಆ ಅವಧಿಯಲ್ಲಿ ಮಾಸ್ತರು ಜಮೀನ್ದಾರರ ಮಗ ಕರುಣಾಕರನಿಗೆ ಪಾಠ ಹೇಳಿಕೊಟ್ಟರು. ಸ್ವಲ್ಪ ದಿನ ಮನೆಯಲ್ಲೇ ಪಾಠ ನಡೆಯಿತು. ಆದರೆ ಸಾಮಾನ್ಯವಾಗಿ ಮಾಸ್ತರು ಹೋದಾಗ ಹುಡುಗ ಸಿದ್ಧನಾಗಿಯೇ ಇರುತ್ತಿರಲಿಲ್ಲ. ಸ್ನಾನದ ಮನೆಯಲ್ಲಿರುತ್ತಿದ್ದ. ಇಲ್ಲವೆ ಅಡುಗೆಮನೆಯಲ್ಲಿ. ಆದರೂ ಮಾಸ್ತರು ಆಕ್ಷೇಪಿಸಲಿಲ್ಲ. ಅವರಿಗೆ ಒಂದು ರೀತಿಯಲ್ಲಿ ಅನುಕೂಲವೇ ಆಯಿತು. ಒಂದು ದಿನ ಸಂದರ್ಭ ನೋಡಿಕೂಂಡು ಮಾಸ್ತರು ನಂಬಿಯಾರರಿಗೆ ಹೇಳಿದರು: