ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೨೨ ಚಿರಸ್ಮರಣೆ
ಆದರೆ... ಎಷ್ಟು ಜಂಬ ನಿನಗೆ! ಹಿಕ್... ಅದ್ಹ್ಯಾಗೆ ಯಾರೂ ಇಲ್ದೆ ಒಬ್ಳೇ ಇರ್ರ್ತಿಯೆ?" "ಇಂಥ ಮಾತಾಡಿ ನೀನು ನರಕಕ್ಕೆ ಹೋಗ್ತಿ ನೋಡು!" "ಹಿಕ್-ಒಮ್ಮೆ ಕರಕೋ ಆಗ ಗೊತ್ತಾಗ್ತದೆ ಸ್ವರ್ಗವೋ ನರಕವೋ ಅಂತ." "ದುರಾತ್ಮ!" "ಎಷ್ಟು ಹೊತ್ತೇ? ತೆಗೀ ಕದ!" "ನಾನು ತೆಗೆಯೋದಿಲ್ಲ" ಮಾತನಾಡುತ್ತಿದ್ದ ಮನುಷ್ಯ ಗಟ್ಟಿಯಾಗಿ, ಗುಡಿಸಲೇ ಮುರಿದು ಬೀಳುವಂತೆ, ಬಾಗಿಲಿಗೆ ಬಡಿಯತೊಡಗಿದೆ. ಹೆಂಗಸು ಒಳಗಿನಿಂದ, “ಅಯ್ಯೋ ದೇವರೆ! ಅಯ್ಯೋ!"ಎಂದಳು. ಮುಂದಕ್ಕೆ ನೆಗೆದ, ಕಣ್ಣ. ಮಾತಿಲ್ಲದೆ ಹಿತ್ತಿಲ ಬೇಲಿಯಲ್ಲಿದ್ದ ಬೊಂಬನ್ನೆಳೆದು ಅಪ್ಪುವಿನ ಕೈಗೆ ಕೊಟ್ಟ. ಅರೆಕ್ಷಣದಲ್ಲೇ ಜಮೀನ್ದಾರರ ಚಾಕರನ ಬೆನ್ನಿನ ಮೇಲೆ ಗುದ್ದು ಬಿತ್ತು; ನಡು ಮುರಿಯುವ ಹಾಗೆ ಒದೆ ಬಿತ್ತು. ಆತ ಹಿಂತಿರುಗಿ ನೋಡಿದಾಗ, ಚೇತರಿಸಿಕೊಳ್ಳುವುದಕ್ಕೂ ಅವಕಾಶವಿಲ್ಲದ ಹಾಗೆ, ಮುಸುಡಿನ ಮೇಲೆ ಮುಷ್ಟಿ ಪ್ರಹಾರ ನಡೆಯಿತು."ಸತ್ತೆನೋ ಸತ್ತೆ" ಎನ್ನುತ್ತ ಆ ಮನುಷ್ಯ ಉರುಳಿದ. ಆಪ್ಪುವಿನ ಬೊಂಬು ಆತ ಉರುಳಿದುದೆಲ್ಲೆಂದು ಹುಡುಕಿ ನೋಡಿತು. ಅಷ್ಟರಲ್ಲೆ ದೇವಕಿ ಬಾಗಿಲು ತೆರೆದಳು. ರಕ್ಷಣೆಗೆ ಬಂದವನು ಯಾರೆಂದು ಗುರುತಿಸುವುದು ಆ ಕತ್ತಲಲ್ಲೂ ಅವಳಿಗೆ ಕಷ್ಟವಾಗಲಿಲ್ಲ, ಅಳುತ್ತ ಕೃತಜ್ಞತೆ ತುಂಬಿದ ಧ್ವನಿಯಲ್ಲಿ ಅವಳೆಂದಳು: "ನನ್ನಿಂದ ಎಷ್ಟೊಂದು ತೊಂದರೆ ನಿಮಗೆಲ್ಲಾ...." ಅಪ್ಪುವಿನ ಬೊಂಬು ಬಿದ್ದಿದ್ದವನ ಬೆನ್ನನ್ನು ಮತ್ತೊಮ್ಮೆ ಮುಟ್ಟಿತು. ಆಗ ದೇವಕಿಯೆಂದಳು: "ಆತನನ್ನು ಕೊಲ್ಬೇಡೀಪ್ಪ. ನಾಳೆ ನಮಗೆಲ್ಲಾ ಗಲ್ಲಾದೀತು!" "ಥೂ!" ಎಂದು ಉಗಿದು ಕಣ್ಣ ಹೇಳಿದ: “ಆತನನ್ನು ಯಾರು ಕೊಲ್ತಾರೆ? ಅದೊಂದು ಕೀಟ." ಅದರೆ ಆ ಕೀಟ ಅಲುಗುವ ಚಿನ್ಹೆ ತೋರಲಿಲ್ಲ. ಕಣ್ಣ ಬಗ್ಗಿ ನೋಡಿದ. “ನಾಯಿಗೆ ಪ್ರಜ್ಞೆ ತಪ್ಪಿದೆ. ಒಳ್ಳೇದೇ ಆಯ್ತು. ಅಪ್ಪು, ಇವನನ್ನು ಹೊತ್ಕೊಂಡು ಸ್ವಲ್ಪ ದೂರ ಹೋಗಿ ಬಿಟ್ಬಿಡೋಣ." "ಹೂಂ" ಎಂದ ಅಪ್ಪು.