ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ
೧೨೫ "ತಪ್ಪೇನೂ ಅಲ್ಲ. ಅದರೂ ಹೆಚ್ಚು ಕಡಿಮೆ ಆಗಿದ್ದರೆ, ಆ ಸಣ್ಣ ಕಾರಣದಿಂದ ನಮಗೆಲ್ಲರಿಗೂ ಗಂಡಾಂತರ ಒದಗ್ತಿತ್ತು." ಕ್ರಾಂತಿಕಾರಿ ಎಂದು ತಾನು ಭಾವಿಸಿದ್ದ ಈ ಚಿರುಕಂಡ ಅಂಜುಗುಳಿಯೇ-- ಎಂಬ ಶಂಕೆ ಅಪ್ಪುವಿನ ಮನಸ್ಸನ್ನು ಹೊಕ್ಕು, ಕಣ್ಣುಗಳ ಕಾವು ಅರಿ, ಅವು ತಣ್ಣಗಾದುವು. ಆತ ಕೇಳಿದ:"ಅಂದರೆ?" "ರಾತ್ರೆ ಶಾಲೆ ನಡೆಸೋದು ನಂಬಿಯಾರಿಗೆ ಏನೇನೂ ಇಷ್ಟವಿಲ್ಲ. ಏನಾದರೂ ನೆಪ ಸಿಕ್ಕಿದ್ಕೂಡ್ಲೆ ಅವರು ಇದನ್ನು ನಿಲ್ಲಿಸ್ಬಹುದೂಂತ ಮಾಸ್ತರು ಹೇಳಿದ್ರು. ರಾತ್ರೆ ಕಣ್ಣನೂ ನೀನೂ ಸಿಕ್ಕಿಬಿದ್ದಿದ್ರೆ ನಂಬಿಯಾರಿಗೆ ಎಷ್ಟು ಸಂತೋಷವಾಗ್ತಿತ್ತೊ! ಹೀಗೆ ಈ ಸಣ್ಣ ವಿಷಯಕ್ಕೇ ದೊಡ್ಡ ಹೊಡೆತ ಬಿದ್ದರೆ, ಬೇರೆ ಕೆಲಸಕ್ಕೆಲ್ಲ ಅಡ್ಡಿಯಾಗ್ತಿತ್ತು. ಹೌದಾ?." ಅಪ್ಪುವಿನ ಕಣ್ಣುಗಳು ಮತ್ತೇ ಚಲಿಸಿದುವು: ಚಿರುಕಂಡ ಅಂಜುಗುಳಿಯಾಗುವುದು ಎಂದಿಗೂ ಸಾಧ್ಯವಿರಲಿಲ್ಲ. ಆತ ವಿಚಾರವಂತ, ದೂರಾಲೋಚನೆಯುಳ್ಳವನು. ಅದೊಂದು ವಿಷಯ ತನಗೆ ಹೊಳೆದೇ ಇರಲಿಲ್ಲ... ಅಪ್ಪು ನುಡಿದ: "ನೀನು ಹೇಳೋದು ನಿಜ. ಆದರೆ ಆತ ಬದುಕಿದ್ದಾನೆ. ಈಗೇನೂ ಆಗಲಾರದು, ಅಲ್ವ? ಅಲ್ಧೆ, ನಾವು ಯಾರು ಅನ್ನೋದೂ ಅವನಿಗೆ ಗೊತ್ತಾಗಿರೋದಿಲ್ಲ." "ಹೂಂ. ಈಗ ಅಪಾಯ ಕಮ್ಮಿ. ಆದರೂ ನಂಬಿಯಾರಿಗೆ ಕಣ್ಣನ ಮೇಲೆ ಸಂಶಯ ಬಂದೇಬರ್ರ್ತದೆ. ಅವರು ಬೇಟೆಯಾಡೋಕೇಂತ ಗುರುತು ಹಾಕಿದ್ದ ಮಿಕ, ದೇವಕಿ. ಈಗ ಆಕೆ ಕೈಗೆ ಸಿಗೋದಿಲ್ಲಾಂತ ಆದ್ಮೇಲೆ, ಸುಮ್ನಿರ್ರ್ತಾರಾ?" ಚಿರುಕಂಡನ ಆ ಎಣಿಕೆಯೂ ಅಪ್ಪುವಿಗೆ ನಿಜವಾಗಿ ತೋರಿತು. ನೆಮ್ಮದಿ ನೀಡುವ ಉತ್ತರ ತೋರದೆ ಅವನ ಮನಸ್ಸು ಕಸಿವಿಸಿಗೊಂಡಿತು. ....ಶಾಲೆ ಸೇರಿ, ಅದರ ಹಿಂಭಾಗದಲ್ಲಿದ್ದ ಮಾಸ್ತರ ಕೊಠಡಿಯತ್ತ ಅವರು ನಡೆದರು. ಆದರೆ ಕಣ್ಣ ಅಲ್ಲಿಗೆ ಬಂದಿದ್ದ. ಹಾಸಿಗೆ ಇನ್ನೂ ಮಡಚಿಯೇ ಇರಲಿಲ್ಲ. ಅದರ ಮೇಲೆಯೇ ಕುಳಿತು ಬೀಡಿ ಸೇದುತ್ತ ಕಣ್ಣನ ಮಾತುಗಳಿಗೆ ಮಾಸ್ತರು ಕಿವಿಗೊಟ್ಟಹಾಗಿತ್ತು. ಹುಡುಗರು ಒಳಕ್ಕೆ ಬಂದಾಗ ಅವರತ್ತ ನೋಡಿ, ಅಪ್ಪುವನ್ನು ದಿಟ್ಟಿಸಿ, ಮಾಸ್ತರು ಮುಗುಳು ನಕ್ಕರು. ಗಾಬರಿ ತಾಂಡವವಾಡದೆ ಮಾಸ್ತರ ತುಟಿಗಳ ಮೇಲೆ ನಗೆ ಕುಣಿದುದನ್ನು ಕಂಡು, ಅಪ್ಪುವಿಗೆ ಸಮಾಧಾನವಾಯಿತು. ಅವರಿಬ್ಬರೂ ಹಾಸಿಗೆಯ ಬಳಿ ನೆಲದ ಮೇಲೆ ಕುಳಿತರು. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ.