ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚಿರಸ್ಮರಣೆ
೧೨೧

ಕಣ್ಣನ ಮೇಲೆ ಅದು ಅಪೇಕ್ಷಿಸಿದಷ್ಟು ಪರಿಣಾಮ ಬೀರಿದಂತೆ ತೋರಲಿಲ್ಲ. ಒಡನೆಯೆ ಮಾಸ್ತರ ನೆನಪಾಗಿ ಆತ ಕೇಳಿದ:

"ಮಾಸ್ತರಿಗೆ ಹೇಳಿದ್ಯಾ?"

“ಇಲ್ಲ."

"ಮತ್ತೆ? ಹೇಳೋದು ಬೇಡವಾ?"

"ಹೇಳೋದಕ್ಕೆ ಒಂದು ರೀತಿಯ ಸಂಕೋಚ ಅಪ್ಪು, ಅವರು ಏನು ಅಂದ್ಕೋಲ್ತಾರೋ ?" -

"ಛೆ! ಛೆ! ಒಳ್ಳೆ ಹೇಳ್ದೆವೆ! ಇಂಥಾದ್ದೆಲ್ಲ ಅವರಿಗೆ ತಿಳಿಸದೆ ಇರೋದಕಾಗ್ರದಾ?" ಎರಡು ನಿಮಿಷ ಸುಮ್ಮನಿದ್ದು ಶಾಂತಸ್ವರದಲ್ಲಿ ಕಣ್ಣ ಹೇಳಿದ:

"ಮಾಸ್ತರ ಎದುರು ಕೂತಾಗ ನನಗೆ ಮಾತೇ ಬರೋದಿಲ್ಲ, ನೀನೊಂದು ಕೆಲಸ ಮಾಡ್ತೀಯಾ ಅಪ್ಪು...?ನನ್ನ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಮಾಸ್ತರಿಗೆ ಹೇಳ್ತೀಯಾ?"

"ಹೂಂ" ಎಂದ ಅಪ್ಪು... ತನ್ನಲ್ಲಿ ವಿಶಾಸವಿಟ್ಟು ಕಣ್ಣ ಅಂತಹ ಕೆಲಸ ಒಪ್ಪಿಸಿದನೆಂದು ಆತನಿಗೆ ಸಂತೋಷವಾಯಿತು....

.... ಮಾಸ್ತರಿಗೆ ಆಶ್ಚರ್ಯವಾಗಲಿಲ್ಲ, ಕಣ್ಣ ದೇವಕಿಯನ್ನು ಮದುವೆಯಾದರೆ ಒಳಿತಾಗುವುದೆಂದು ಅವರು ಆ ಮೊದಲೇ ಯೋಚಿಸಿದ್ದರು. ಆದರೆ ಕಣ್ಣ ಮತ್ತು ದೇವಕಿಯ ಮನಸ್ಸನ್ನು ತಿಳಿಯದೆ ಏನನ್ನೂ ಹೇಳುವುದು ಸರಿಯಲ್ಲವೆಂಬುದು ಅವರ ಅಭಿಪ್ರಾಯವಾಗಿತ್ತು, ಮದುವೆಗೆ ಕರುಣೆ ಸಹಾನುಭೂತಿ ಮಾತ್ರ ಸಾಲದು. ಗಂಡು ಹೆಣ್ಣು ಪರಸ್ಪರ ನೀಡುವ ಒಲವೂ ಬೇಕು-ಎಂದು ನಂಬಿದ್ದ ಮಾಸ್ತರು, ಕಣ್ಣನಿಂದಲೇ ಈ ಪ್ರಸ್ತಾಪ ಬರುವವರೆಗೂ ತಾವು ಸುಮ್ಮನಿರಬೇಕು ಎಂದು ಕೊಂಡಿದ್ದರು. ಈಗ ವಿಷಯ ಸ್ಪಷ್ಟವಾದುದಕ್ಕಾಗಿ ಅವರಿಗೆ ಸಮಾಧಾನವಾಯಿತು.

ತನ್ನ ಪಾಲಿಗೆ ವ್ಯಾಕುಲಕ್ಕೆ ಕಾರಣವಾಗಿದ್ದೊಂದು ಮಾತನ್ನು ಅಪ್ಪು... ಹೇಳಿದ:

"ಮದುವೆ ಆದ್ಮಲೆ ಊರುಬಿಟ್ಟು ಹೋಗ್ತೇನೇಂತ ಕಣ್ಣ ಮಾತಾಡ್ತಿದ್ದ." ಮಾಸ್ತರಿಗೆ ಸೋಜಿಗವೆನಿಸಲಿಲ್ಲ.

“ವ್ಯಥೆಯಾದಾಗ ಹಾಗೆ ಮಾತಾಡೋದು ಸ್ವಾಭಾವಿಕ. ನಾನು ಅವನಿಗೆ ಹೇಳ್ತೇನೆ.

" ...ಆ ರಾತ್ರಿಯೆ ಮಾಸ್ತರು ಕಣ್ಣನನ್ನು ಕರೆದು ಪ್ರತ್ಯೇಕವಾಗಿ ಮಾತನಾಡಿದರು. ಪರಿಣಾಮವಾಗಿ, ಬಹಳ ದಿನಗಳ ಬಳಿಕ ಕಣ್ಣ ಮತ್ತೊಮ್ಮೆ ಹಸನ್ಮುಖಿಯಾದ. ತೊಯ್ದ ಕಣ್ಣುಗಳು ಮಿನುಗಿದುವು. ತುಟಿಗಳ ಮೇಲೆ ನಗೆ ಮತ್ತೆ ಕಾಣಿಸಿಕೊಂಡಿತು.

ರಾತ್ರಿ ಶಾಲೆಯ ತರಗತಿ ಮುಗಿಯುವ ಹೊತ್ತಿಗೆ ಅಲ್ಲಿದ್ದವರನ್ನು ಉದ್ದೇಶಿಸಿ