ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ ೧೪೯
ನಮ್ಮ ರೈತರು ಕೂಡ ಅಲ್ಲಿಗೆ ಹೋಗಿದ್ದರಲ್ಲ?" ಪರಿಸ್ಥಿತಿ ವಿಷಮಿಸುವುದಕ್ಕೆ ಇನ್ನು ಬಹಳ ಕಾಲವಿಲ್ಲವೆಂದು ಗೊತ್ತಿದ್ದರೂ ತಾವಾಗಿಯೇ ದುಡುಕಬಾರದೆಂದು ಮಾಸ್ತರೆಂದರು: "ಇದ್ದರೂ ಇರಬಹುದು. ನನಗಂತೂ ಯಾರೂ ಹೇಳಿಲ್ಲ. " ಆಹಾ!ಆಹಾ!" ಅದರ ಮಾರನೆಯ ದಿನವೂ ನಂಬಿಯಾರರು ಬುಸುಗುಟ್ಟುತ್ತ ಬಂದರು. "ಮಾಸ್ತರೆ! ಒಂದು ಸುದ್ದಿ ಕೇಳಿದಿರೋ?'ಮಾತೃಭೂಮಿ' ಪತ್ರಿಕೆಗೆ ಕಳಿಸಿದರೂ ಕಳಿಸ್ಬಹುದು." ಶಾಂತವಾಗಿರಲು ಯತ್ನಿಸುತ್ತ ಮಾಸ್ತರೆಂದರು: "ಏನಾಯ್ತು?" "ಕಯ್ಯೂರಿನಲ್ಲಿ ಇನ್ನೆರಡು ದಿವಸದಲ್ಲಿ ರೈತಸಂಘ ಸ್ಥಾಪನೆಯಾಗ್ತದಂತೆ! ಹಹ್ಹಾ!" "ಹಾಗೇನು? ಯಾರಂದರು?" ನಂಬಿಯಾರರು ಕೆಂಗಣ್ಣಿನಿಂದ ಮಾಸ್ತರರನ್ನೆ ನೋಡಿ, "ಥೂ!" ಎಂದು ಉಗುಳಿದರು. ಒಮ್ಮೆಲೆ ಸಂಬೋಧನೆ ಏಕವಚನಕ್ಕಿಳಿಯಿತು; ಕಂಠ ಮತ್ತಷ್ಟು ನಿಷ್ಠುರವಾಯಿತು. "ಒಳ್ಳೆ ಕನ್ನಡಿ ಹಾವು ಕಣಯ್ಯ ನೀನು! ಎಂಥವ್ನನ್ನ ಇಷ್ಟು ಕಾಲ ಸಾಕ್ದೆ! ಅಬ್ಬ!" ಇನ್ನು ಸ್ವಾಭಿಮಾನದ ರಕ್ಷಣೆ ತಪ್ಪಾಗದೆಂದು ಮಾಸ್ತರು ನಂಬಿಯಾರರನ್ನು ನೇರವಾಗಿ ನೋಡಿ ನುಡಿದರು: "ನೀವು ವಿಶ್ವಸ್ಥ ಸಮಿತಿಯ ಪ್ರಮುಖರು, ನಾನು ಶಾಲೆಯ ಉಪಾಧ್ಯಾಯ. ಕೆಲಸ ಎಷ್ಟಿದೆಯೋ ಅಷ್ಟು ಮಾತಾಡಿ!" ನಂಬಿಯಾರರು ಹಾವಿನ ಹೆಡೆ ಮುಟ್ಟಿದ ಹಾಗಾಗಿ,ಒಮ್ಮೆ ಅಳುಕಿ, ಮತ್ತೆ ರೌದ್ರದ ಮುಖವಾಡ ಧರಿಸಿ, ದರ್ಪದಿಂದ ಅಂದರು: "ನಮ್ಮ ಶಾಲೆಯ ವಾರ್ಷಿಕ ಪರೀಕ್ಷೆಗೆ ಇನ್ನೆಷ್ಟು ದಿವಸ ಇದೆ?" "ಒಂದು ತಿಂಗಳು." “ಅಷ್ಟು ದಿವಸ ತೆಪ್ಪಗಿದು ಕೆಲಸ ಮಾಡಿ. ಪರೀಕ್ಷೆ ಮುಗಿದ್ಮೇಲೆ ಚಾರ್ಜು ನನಗೆ ವಹಿಸ್ಕೊಟ್ಟು ಇಲ್ಲಿಂದ ಗಾಡಿ ಬಿಡಿ!"