ಪುಟ:Chirasmarane-Niranjana.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೧೪೯

   ನಮ್ಮ ರೈತರು ಕೂಡ ಅಲ್ಲಿಗೆ ಹೋಗಿದ್ದರಲ್ಲ?"
   ಪರಿಸ್ಥಿತಿ ವಿಷಮಿಸುವುದಕ್ಕೆ ಇನ್ನು ಬಹಳ ಕಾಲವಿಲ್ಲವೆಂದು ಗೊತ್ತಿದ್ದರೂ ತಾವಾಗಿಯೇ ದುಡುಕಬಾರದೆಂದು ಮಾಸ್ತರೆಂದರು:
   "ಇದ್ದರೂ ಇರಬಹುದು. ನನಗಂತೂ ಯಾರೂ ಹೇಳಿಲ್ಲ.
   " ಆಹಾ!ಆಹಾ!" 
   ಅದರ ಮಾರನೆಯ ದಿನವೂ ನಂಬಿಯಾರರು ಬುಸುಗುಟ್ಟುತ್ತ ಬಂದರು. 
   "ಮಾಸ್ತರೆ! ಒಂದು ಸುದ್ದಿ ಕೇಳಿದಿರೋ?'ಮಾತೃಭೂಮಿ' ಪತ್ರಿಕೆಗೆ ಕಳಿಸಿದರೂ ಕಳಿಸ್ಬಹುದು."
   ಶಾಂತವಾಗಿರಲು ಯತ್ನಿಸುತ್ತ ಮಾಸ್ತರೆಂದರು:
   "ಏನಾಯ್ತು?"
   "ಕಯ್ಯೂರಿನಲ್ಲಿ ಇನ್ನೆರಡು ದಿವಸದಲ್ಲಿ ರೈತಸಂಘ ಸ್ಥಾಪನೆಯಾಗ್ತದಂತೆ! ಹಹ್ಹಾ!" 
   "ಹಾಗೇನು? ಯಾರಂದರು?"
    ನಂಬಿಯಾರರು ಕೆಂಗಣ್ಣಿನಿಂದ ಮಾಸ್ತರರನ್ನೆ ನೋಡಿ, "ಥೂ!" ಎಂದು ಉಗುಳಿದರು. ಒಮ್ಮೆಲೆ ಸಂಬೋಧನೆ ಏಕವಚನಕ್ಕಿಳಿಯಿತು; ಕಂಠ ಮತ್ತಷ್ಟು ನಿಷ್ಠುರವಾಯಿತು.
   "ಒಳ್ಳೆ ಕನ್ನಡಿ ಹಾವು ಕಣಯ್ಯ ನೀನು! ಎಂಥವ್ನನ್ನ ಇಷ್ಟು ಕಾಲ ಸಾಕ್ದೆ! ಅಬ್ಬ!"
   ಇನ್ನು ಸ್ವಾಭಿಮಾನದ ರಕ್ಷಣೆ ತಪ್ಪಾಗದೆಂದು ಮಾಸ್ತರು ನಂಬಿಯಾರರನ್ನು ನೇರವಾಗಿ ನೋಡಿ ನುಡಿದರು:
   "ನೀವು ವಿಶ್ವಸ್ಥ ಸಮಿತಿಯ ಪ್ರಮುಖರು, ನಾನು ಶಾಲೆಯ ಉಪಾಧ್ಯಾಯ. ಕೆಲಸ ಎಷ್ಟಿದೆಯೋ ಅಷ್ಟು ಮಾತಾಡಿ!"
   ನಂಬಿಯಾರರು ಹಾವಿನ ಹೆಡೆ ಮುಟ್ಟಿದ ಹಾಗಾಗಿ,ಒಮ್ಮೆ ಅಳುಕಿ, ಮತ್ತೆ ರೌದ್ರದ ಮುಖವಾಡ ಧರಿಸಿ, ದರ್ಪದಿಂದ ಅಂದರು:
    "ನಮ್ಮ ಶಾಲೆಯ ವಾರ್ಷಿಕ ಪರೀಕ್ಷೆಗೆ ಇನ್ನೆಷ್ಟು ದಿವಸ ಇದೆ?" 
    "ಒಂದು ತಿಂಗಳು."
   “ಅಷ್ಟು ದಿವಸ ತೆಪ್ಪಗಿದು ಕೆಲಸ ಮಾಡಿ. ಪರೀಕ್ಷೆ ಮುಗಿದ್ಮೇಲೆ ಚಾರ್ಜು ನನಗೆ ವಹಿಸ್ಕೊಟ್ಟು ಇಲ್ಲಿಂದ ಗಾಡಿ ಬಿಡಿ!"