ಪೋಲೀಸರೊಡನೆ ಬಂದರು. ಆ ಆಗಮನ ಎಷ್ಟೋ ಜನ ರೈತರನ್ನು ಕಳವಳಕ್ಕೆ ಈಡುಮಾಡಿತು. ಸಂಘದ ಜನವನ್ನು ಸಂದೇಹದಿಂದಲೇ ಕಂಡಿದ್ದ ಸಾಕಷ್ಟು ಹೊಲವಿದ್ದ ಶ್ರೀಮಂತ ರೈತರು ಕೆಲವರು, "ಹೀಗಾಗ್ತದೆ ಅಂತ ನಮಗೆ ಗೊತ್ತೇ ಇತ್ತು" ಎಂದರು. ಯಾವ ಪಕ್ಷವನ್ನೂ ವಹಿಸದೆ ತಟಸ್ಥರಾಗಿದ್ದ ಬೇರೆ ಕೆಲವರು ಮುಂದೇನಾಗುವುದೋ ಎಂದು ಕುತೂಹಲದಿಂದ ಕಾದು ನೋಡಿದರು.
ಬಂದ ಪೋಲೀಸರ ಸ್ನಾನ, ಊಟ, ವಿಶ್ರಾಂತಿ ಮುಗಿದು, ಮಧ್ಯಾಹ್ನ ದಾಟಿದ ಮೇಲೆ, ಅಪ್ಪುವಿಗೆ ಕರೆ ಬಂತು. ಜಮೀನ್ದಾರರ ಒಬ್ಬ ಆಳೂ ಕೆಂಪು ಟೋಪಿಯ ಒಬ್ಬ ಪೋಲೀಸನೂ ಅಂಗಳದಲ್ಲಿ ನಿಂತು, "ತಕ್ಷಣ ಬರಬೇಕಂತೆ" ಎಂದರು.
"ಎಲ್ಲಿಗೆ?" ಎಂದ ಅಪ್ಪು.
"ಜಮೀನ್ದಾರರ ಮನೆಗೆ."
"ನಾವು ಅವರ ಒಕ್ಕಲಲ್ಲ. ಏನಾದರೂ ಕೆಲಸವಿದ್ದರೆ ಇಲ್ಲಿಗೆ ಬರ್ಲಿ. ಅವರ ಬದಲು ಪಟೇಲರೇನಾದರೂ ನನ್ನನ್ನು ಕರೆದರೆ ಖಂಡಿತ ಬರ್ರ್ತೇನೆ."
ಆಳು ಸಿಡಿಮಿಡಿಗುಟ್ಟುತ್ತ ಪೋಲೀಸರೊಡನೆ ಹಿಂತಿರುಗಿದ. ಅಪ್ಪುವಿನ ತಂದೆ ಮನೆಯಲ್ಲಿರಲಿಲ್ಲ. ಮಗ ಹೀಗೆ ಉತ್ತರಕೊಟ್ಟುದು ಸರಿಯಾಯಿತೊ ಇಲ್ಲವೊ ಎಂಬ ಸಂಶಯ ತಾಯಿಗಿದ್ದರೂ, ಮಗನ ಧೈರ್ಯವನ್ನು ಕಂಡು ಮೂಕಸಂತೋಷ ಆಕೆಯನ್ನು ಆವರಿಸಿತು. ಅಜ್ಜಿ ಗಾಬರಿಯಾಗಬಹುದು ಎಂದಿದ್ದ ಅಪ್ಪು. ಆದರೆ ಆ ವೃದ್ಢೆಯೂ ಮೌನವಾಗಿ ಗಂಭೀರವಾಗಿಯೇ ಇದ್ದಳು.
ಅಷ್ಟರಲ್ಲೇ ಚಿರುಕಂಡ ಬಂದ.
ಸ್ವಲ್ಪ ಹೊತ್ತಿನಲ್ಲಿ ಜಮೀನ್ದಾರರ ಮನೆಯಲ್ಲಿದ್ದ ಪಟೇಲರಿಂದ ಕರೆಬಂತು. ಅಲ್ಲೇ ಪೋಲೀಸರೂ ಇದ್ದರೆಂಬುದು ಸ್ಪಷ್ಟವಾಗಿತ್ತು. ಆಳುವ ಶಕ್ತಿಯ ಬಾಡಿಗೆಯ ಭಟರೊಡನೆ ಮೊದಲ ಪ್ರತ್ಯಕ್ಷ ಭೇಟಿಗಾಗಿ ಜನಶಕ್ತಿಯ ಪ್ರತಿನಿಧಿಗಳಾಗಿದ್ದ ಅಪ್ಪು ಮತ್ತು ಚಿರುಕಂಡ ಅಲ್ಲಿಗೆ ಹೊರಟರು.
ದೂರದಲ್ಲಿ ಪ್ರೇಕ್ಷಕನಾಗಿ ನಿಂತಿದ್ದ ಕೋರ ಒಬ್ಬನ ಹೊರತಾಗಿ, ರೈತ ಸಂಘದ ಕಡೆಯವರು ಯಾರೂ ಅಲ್ಲಿರಲಿಲ್ಲ. ನಂಬಿಯಾರರೂ ನಂಬೂದಿರಿಯೂ ಫೌಜದಾರರೂ ಮೊಗಸಾಲೆಯಲ್ಲಿ ಕುಳಿತಿದ್ದರು. ಪಕ್ಕದಲ್ಲೆ ಬೆಂಚಿನ ಮೇಲೆ ಪಟೇಲರಿದ್ದರು. ಅವರ ಹಿಂದೆ ಜವಾನ. ಬಳಿಯಲ್ಲೇ ಖಾಕಿ ಪೋಷಾಕು ಧರಿಸಿ ನಿಂತಿದ್ದ ಪೊಲೀಸರು. ಜಮೀನ್ದಾರರ ಅನಧಿಕೃತ ಕಾಲಾಳುಗಳಾದ ಹಲವರು.
ಫೌಜದಾರರು ಮತ್ತು ನಂಬಿಯಾರರು ಸಿಗರೇಟು ಸೇದುತ್ತಲೇ ಇದ್ದರು. ನಂಬೂದಿರಿಗಿಂತ ತಾನು ಹೆಚ್ಚು ವಿದ್ಯಾವಂತನೆಂಬುದನ್ನು ತೋರಿಸುವ ಆ