ಮಹಾಜನರ ಮುಂದಿಡಬೇಕೆಂದು ಸಂಘ ಆಗ್ರಹಪಡಿಸುತ್ತದೆ.ಸಮಿತಿಯ ಮುಖ್ಯಸ್ಥರು ಮತ್ತೆ ಶಾಲೆಯನ್ನು ತೆರೆಯುವುದಿಲ್ಲವೆಂದಾದರೆ,ಶಾಲೆ ನಡೆಸುವ ಜವಾಬ್ಧಾರಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸಂಘ ಅಪೇಕ್ಷಿಸುತ್ತದೆ.ಇದ್ದಕೆ ಅಡ್ಡಿಯೊದಗಿದರೆ, ಸ್ವಂತದ ಶಾಲೆಯನ್ನೇ ತೆರೆಯುವ ಉದ್ದೇಶವೂ ಸಂಘಕ್ಕಿದೆ.ಆ ಪರಿಸ್ಥಿತಿಯಲ್ಲಿ ಒಬ್ಬರು ಇಲ್ಲವೆ ಇಬ್ಬರು ನುರಿತ ಉಪಾದ್ಯಾಯರನ್ನು ಸಂಘವೇ ಹೊರಗಿನಿಂದ ತರಿಸುವುದೆಂಬುದು ಸ್ಪಷ್ಟ..."
ನಂಬಿಯಾರರು ಕಾಗದವನ್ನೋದಿ ಕನಲಿದರು.ಅದನ್ನು ಚೂರುಚೂರಾಗಿ ಹರಿದೆಸೆದರು.ಅಲ್ಲಿಗೆ ಅದನ್ನೊಯ್ದಿದ್ದ ಕೋರನನ್ನು,"ಹೋಗು ಮೂರ್ಖ!" ಎಂದು ಬಯ್ದರು.
ಉತ್ತರ ಕೊಡುವುದಕ್ಕೋಸ್ಕರ ಬಲು ಒಳ್ಳೊಳ್ಳೆಯ ಪದಗಳು ಕೋರನ ನಾಲಿಗೆಯ ತುದಿಯ ಮೇಲೆ ನರ್ತಿಸಿದುವು.ನಂಬಿಯಾರರು ಏನೇ ಮಾಡಿದರೂ ಸಮ್ಮನಿರಬೇಕೆಂದು ಚಿರುಕಂಡ ಕಟ್ಟಾಜ़್ನೆ ಇತ್ತಿದ್ದುದರಿಂದ ಕೋರ ಹಾಗೆಯೇ ಹಿಂತಿರುಗಬೇಕಾಯಿತು.
ಆದರೂ ಸಂಘದ ಕಾಗದದಿಂದ ಪರಿಣಾಮ ಆಗಿಯೇಬಿಟ್ಟಿತು.
ಆದಾದ ಒಂದು ವಾರದಲ್ಲೇ ವಯಸ್ಸಾದವರೊಬ್ಬರು ಉಪಾದ್ಯಾಯರಾಗಿ ಅಲ್ಲಿಗೆ ಬಂದರು.ಕೂದಲು ಪೂರ್ತಿ ನರೆತಿತ್ತು.ಕೆಲ ಹಲ್ಲುಗಳು ಉದುರಿದ್ದುವು. ಮೂಗಿನ ಮೇಲೆ ಕನ್ನಡಕವಿತ್ತು.
ಕಣ್ಣ ಆವರನ್ನು ನೋಡಲು ಹೋಗಿ ಕೇಳಿದ:
"ಒಬ್ಬರೇ ಬಂದಿದ್ದೀರಲ್ಲ.ಮಕ್ಕಳು ಮೊಮ್ಮಕ್ಕಳು ಯಾವಾಗ ಬರ್ತಾರೆ?"
ಮೊದಲು,ಆ ರೈತ ತನ್ನನ್ನು ಲೇವಡಿ ಮಾಡುತ್ತಿರಬೇಕೆಂದು ಉಪಾಧ್ಯಾಯರಿಗೆ ಸಂದೇಹ ಬಂತು.ಅವರು ದುರದುರನೆ ಆತನನ್ನು ನೋಡಿದರು.ಆದರೆ ನಿಷ್ಕಾಪಟ್ಯದ ಕನ್ನಡಿಯಾಗಿತ್ತು ಕಣ್ಣನ ಮುಖಭಾವ.ಆತ ಒಳ್ಳೆಯವನೇ ಇರಬೇಕೆಂದು ಉಪಾಧ್ಯಾಯರು ತೀರ್ಮಾನಿಸಿ,ಹೇಳಿದರು:
"ಇಲ್ಲವಪ್ಪ ಇಲ್ಲ. ನಿವೃತ್ತಿಯಾದೋನು ಕೆಲಸ ಇಲ್ದೆ ಮನೇಲಿದ್ದೆ.ಊಟ ಖರ್ಚು ಹೋಗಿ ಒಂದೈದು ರೂಪಾಯಿ ತಿಂಗಳಿಗೆ ಸಂಪಾದನೆಯಾದರೂ ಆಗಲೀಂತ ಬಂದೆ. ಹೆಚ್ಚೆಂದರೆ ಒಂದು ವರ್ಷ ಇರ್ತೇನೆ.ನನ್ನ ಸಂಸಾರವೆಲ್ಲ ನೀಲೇಶ್ವರದಲ್ಲೇ ಇದೆ..."-ಹಾಗೆ ಹೇಳಿ ಅವರು ಕಣ್ಣನೊಡನೆ,ಸ್ವರ ತಗ್ಗಿಸಿ ಒಂದು ರಹಸ್ಯದ ವಿಷಯ ಪ್ರಸ್ತಾಪಿಸಿದರು:
"ಇಲ್ಲಿ ಸಂಘದವರದ್ದು ಭಾರೀ ಗಲಾಟೆಯಂತೆ,ಹೌದಾ?"