ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೫೨ ಚಿರಸ್ಮರಣೆ ನೆಮ್ಮದಿಯಿಂದ ಇರಬೇಕೂಂತ ಬಯಸಿದರೆ, ಸೂರ್ಯ ಮುಳುಗದ ಸಾಮ್ರಾಜ್ಯವನ್ನೇ ಆಳುವ ಸರಕಾರ ಅದರ ಮೇಲೆ ಪ್ರಯೋಗಿಸಿದ್ದು ಬ್ರಹ್ಮಾಸ್ತ್ರ.....!"
ಅಲೆಯಲೆಯಾಗಿ ಹೊರಟ ಆ ಮಾತುಗಳೆಲ್ಲ ನ್ಯಾಯಸ್ಥಾನವನ್ನು
ವ್ಯಾಪಿಸಿದುವು. ಅಲ್ಲಿ ಸ್ಥಳ ಸಾಲದೆ ಬಾಗಿಲು ಕಿಟಕಿಗಳಿಂದ ಹೊರಕ್ಕೆ ಹರಿದುವು.
ಮಾತು ತುಂಬಿದ ವಾತಾವರಣದಿಂದ ಉಸಿರು ಕಟ್ಟಿದ ನಾಯಾಧೀಶರು ತಾವು ಕುಗ್ಗಿದೆವೆಂದು ಭ್ರಮೆಗೊಂಡು, ಮತ್ತೂ ನೇರವಾಗಿ ಕುಳಿತರು.
... ಆ ದಿನ ಕಳೆದು ಮತ್ತೊಂದು ದಿನ.
ಪಿಳ್ಳೆ ಮತ್ತು ರಾಜಾರಾವ್ ಕೈದಿಗಳತ್ರ ಬಂದು ಮಾತನಾಡಿದರು: "ನಮ್ಮಿಂದ ಸಾಧ್ಯವಿರೋದೆಲ್ಲ ನಾವು ಮಾಡಿದ್ದೇವೆ." ಚಿರುಕಂಡ ಕೇಳಿದ:"ತೀರ್ಪು ಯಾವತ್ತು?ಇನ್ನೇನಿದೆ?" "ಯಾವತ್ತೂಂತ ನಾಳೆ ತಿಳಿಸ್ಬಹುದು. ವ್ಯವಹರಣೆಯನ್ನೆಲ್ಲ ಜ್ಯುರಿಗಳಿ ಗೋಸ್ಕರ ಇವತ್ತು ನಾಯಾಧೀಶರು ಸೂಕ್ಷ್ಮಾವಲೋಕನ ಮಾಡ್ತಾರೆ" ಎಂದರು ಪಿಳ್ಳೆ. ಮಾಸ್ತರು ಮಾತನಾಡಿದರು: "ಜ್ಯೂರಿ ಅಭಿಪ್ರಾಯ ಹ್ಯಾಗಿದ್ದೀತು?" "ಅದರಿಂದೇನೂ ಪ್ರಯೋಜನವಿಲ್ಲ ಮಾಸ್ತರೆ. ಅವರ ಅಭಿಪ್ರಾಯದ ಮೇಲೆ ನಾಯಾಧೀಶರು ತೀರ್ಪು ಕೊಡ್ತಾರೇಂತ ತಿಳಿದಿರಾ?" "ಹಾಗಲ್ಲ ಆದರೂ-" "ಅವರಲ್ಲಿ ಒಬ್ಬಿಬ್ಬರನ್ನು ಬಿಟ್ಟು ಉಳಿದವರೆಲ್ಲಾ 'ದೋಷಿಗಳು' ಅಂತಲೇ
ಅಂದಾರು."
ರಾಜಾರಾವ್ ಹೇಳಿದರು: "ತೀರ್ಪಿನ ದಿವಸ ಕಯ್ಯೂರಿನ ನಿಮ್ಮವರಿಗೆಲ್ಲ ಬರೋದಕ್ಕೆ
ಹೇಳೋಣವೇನು?" 'ಹೊಂ' ಎನ್ನಬೇಕೆಂದು ತೋರಿತು ಅಪ್ಪು ಮತ್ತಿತರ ಹಲವರಿಗೆ.
ಬಿಡುಗಡೆಯಾದರೆ ಆ ಕ್ಷಣವೆ ಬಾಂಧವರ ತೋಳತೆಕ್ಕೆಗೆ ಬೀಳುವುದು ಎಷ್ಟು ಸುಖಕರ! ಮಾಸ್ತರು, ಸುಮ್ಮನಿದ್ದ ಚಿರುಕಂಡನ ಅಭಿಪ್ರಾಯವನ್ನೂ ಕೇಳಿದರು; ಅಪ್ಪುವನ್ನೂ ವಿಚಾರಿಸಿದರು. ಬಳಿಕ ಇಳಿದನಿಯಲ್ಲಿ ಅವರೆಂದರು: "ಬೇಡ. ಅವರಿಗೆ ದಿನ ತಿಳಿಯಬಾರದು. ತೀರ್ಪು ಹ್ಯಾಗಿರುತ್ತೊ ಯಾರು ಬಲ್ಲರು?"