ಪುಟ:Chirasmarane-Niranjana.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ನಿಮ್ಮ ಕೊನೇ ಆಸೆಯೇನು? ನಡೆಸಿಕೊಡ್ತೇವೆ." "ಏನಪ್ಪ? ಏನು ಕುಂಞಂಬು?ಅಬೂಬಕರ್–? ಹೇಳಿ. ನಮ್ಮ ಕೊನೆ ಆಸೆ ತಿಳಿಸಿದರೆ ನಡೆಸಿಕೊಡ್ತಾರಂತೆ!" ಅಬೂಬಕರ್ ನ ನಗೆ. ವ್ಯಂಗ್ಯ ಧ್ವನಿ: "ಸಾಮ್ರಾಜ್ಯಶಾಹಿ ನಾಶವಾಗೋದನ್ನ ನೋಡಿ ಸಾಯ್ಬೇಕೂಂತ ನಮ್ಮ ಆಸೆ. ನಡೆಸಿಕೊಡ್ತಾರಾ ಕೇಳು ಚಿರುಕಂಡ!" "ಆಹ್ಹಾ!" ಆದರೂ ಅಪ್ಪೂ ಚಿರುಕಂಡನನ್ನು ಒಂದು ವಿಷಯ ಕಾಡುತ್ತಿತ್ತು:ಮಾಸ್ತರು....ಮಾಸ್ತರನ್ನು ಕಾಣುವುದು ಸಾಧ್ಯವಾದರೆ? "ಇದೊಂದು ಆಸೆಯಿದೆ ಕೇಳೋಣವೇ ಅಬೂಬಕರ್?" "ಕೇಳು ಸಂಗಾತಿ." "ಜೇಲರೆ, ನಮಗೆಲ್ಲ ಇರುವುದೊಂದೇ ಆಸೆ.. ನಮ್ಮ ಮಾಸ್ತರೊಡನೆ ಭೇಟಿ ಏರ್ಪಾಟು ಮಾಡಿ." ಸೆರೆಮನೆಯ ನಿಯಮಗಳು.... "ಆತ ಕೈದಿ. ಅದು ಸಾಧ್ಯವಿದೆಯೋ ಇಲ್ಲವೋ.... ಸೂಪರಿಂಟೆಂಡೆಂಟರನ್ನು ಕೇಳ್ತೇನೆ"

                              ***

ಎರಡು ಜತೆ ಬೂಟುಗಳು ಸದ್ದು, ಮತ್ತೆ ಯಾರು? ಸೂಪರಿಂಟೆಂಡೆಂಟರೆ ಬಂದರೆ? ಅವರು ಬಂದೂಕುಧಾರಿಗಳಾದ ಪಹರೆಯವರು, ನಡುವೆ ಮಾಸ್ತರು ಒಂದೊಂದು ಕೈಗೂ ಒಂದೊಂದು ಸರಪಳಿ. ನಾಲ್ಪರೂ ಎದ್ದು ನಿಂತರು. ತರಗತಿಯ ವಿದಾರ್ಥಿಗಳ ಹಾಗೆ. ಜೇಲರು ಬಂದು ಹೇಳಿದ: "ಭೇಟಿಗೆ ಸಮ್ಮತಿ ಕೊಟ್ಟಿದಾರೆ. ಆದರೆ ಹೆಚ್ಚು ತಡ ಮಾಡ್ಬೇಡಿ!" ಕಂಪಿಸುತ್ತಿದ್ದ ಧ್ವನಿಯಲ್ಲಿ ಚಿರುಕಂಡನೆಂದ: "ನೀವೆಲ್ಲಾ ಸ್ವಲ್ಪ ದೂರ ಹೋಗ್ತೀರಾ?" "Sorry ಭೇಟಿಯ ಸಮಯದಲ್ಲಿ ನಾವಿಲ್ಲೇ ಇರ್ಬೇಕೂಂತ ಆಜ್ಞೆಯಾಗಿದೆ." ಅಬೂಬಕರ್ ಸಿಡಿದು ನುಡಿದ: