ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಚಿರಸ್ಮರಣೆ
೨೩೩

ಗದೃವೊ ಪದ್ಯವೊ? ಲೆಫ್ಟ್‌ ರೈಟ್‌ ನಿರ್ದೇಶವೊ? ನಾಭಿಯಿಂದ ಹೊರಟು ಗಗನವೇರಿದ ಆಲಾಪನೆಯೊ?

ತನ್ನ ಕೊಠಡಿಯೊಳಗಿಂದಲೆ ಯಾರೊ ಹಾಡಿದಂತಾಗುತ್ತಿದೆ ಅಪ್ಪುವಿಗೆ, ಹೆಣ್ಣು ಧ್ವನಿ. ಮಂಜುಳ ಕಂಠ....

"ಓಮನ ಕಿಡಾವೇ..."

ತಾಯಿ!

"ಅಮ್ಮಾ-ಅಮ್ಮಾ...."

....ಧಣ್‌, ಢಣ್‌, ಢಣ್‌, ಢಣ್‌... ಇನ್ನೆರಡು ಘಂಟಿ ಹೊತ್ತು .

ಎಚ್ಚತ್ತೇ ಇದೆ ಸೆರೆಮನೆ. ಕೋಳಿ ಕೂಗುತ್ತಿದೆ. ಸರಿಯಾದ ಹೊತ್ತು ಹೌದೋ ಅಲ್ಲವೋ--ಆದರೂ ವಾತಾವರಣದ ಪ್ರಭಾವಕ್ಕೊಳಗಾಗಿ ಪ್ರಾಕಾರದಾಚೆಗಿನ. ಮರಗಳಿಂದ ಕಾಗೆಗಳು ಕಾಕಾ ಎನ್ನುತ್ತಿವೆ...

ಮತ್ತೆ ಅದೊಂದೂ ಕೇಳಿಸದ ಹಾಗೆ ಸಹಸ್ರ ಕಂಠಗಳಿಂದ ಹಾಡು, ಎಂದೂ ಮುಗಿಯದ ಹಾಡು.

ತಣ್ಣನೆಯ ಗಾಳಿ. ಉಷೆ ಬರುತ್ತಿದ್ದಾಳೆ, ಅವರ ಪಾಲಿಗೆ, ಕೊನೆಯ ಬಾರಿಗೆ. ಆದರೆ ಅದೇಕೋ ಆಕೆ ಅವಕುಂಠನವತಿ ಈಗ. ಉಟ್ಟಿರುವುದು ಕರಿಯ ಸೀರೆ.

ಚಿರುಕಂಡ ಎದ್ದು ನಿಂತು ಹೇಳಿದ:

"ಸಂಗಾತಿಗಳೇ ! ಏಳಿ! ಬೆಳಗಾಯ್ತು...!"

ಸಶಸ್ತ್ರದಳ ಬೆಂಗಾವಲಿಗೆ. ಜೇಲರು, ಮೇಲಧಿಕಾರಿ; ಜಿಲ್ಲೆಯ ಕಲೆಕ್ಟರು.

"ಮಾರ್ಚ್‌ !”

ಆ ನಾಲ್ವರನ್ನು ಮುಂದಕ್ಕೆ ನಡೆಸಿದರು. ದೃಢವಾಗಿತ್ತು ಅವರೆಲ್ಲರ ನಡಿಗೆ.

“ಹಾಲ್ಟ್”

ಜೇಲಿನ ಅಧಿಕಾರಿ ಕೈಗಡಿಯಾರ ನೋಡಿದ. ಇನ್ನೈದು ನಿಮಿಷ:

ಬೇಡಿಗಳನ್ನು ಬಿಚ್ಚಿದರು. ಕೆಳಗಿನಿಂದ ಅವರನ್ನು ವಧಾಸ್ಥಾನಕ್ಕೆ ಒಯ್ಯಬೇಕಿನ್ನು.

ಆಗ ಚಿರುಕಂಡ ನಿರ್ಭೀತವಾದ ಏಕಪ್ರಕಾರವಾದ ಧೃನಿಯಲ್ಲಿ ಹೇಳಿದ:

"ಮೈ ಮುಟ್ಟಬೇಡಿ. ನಾವೇ ಮೇಲಕ್ಕೆ ಹೋಗ್ತೇವೆ!"

"ಹೋಗಲಿ ಬಿಡಿ” ಎಂದರು ಕಲೆಕ್ಟರು.

ಸಂದರ್ಭ ಬಂದರೆ ಸಿದ್ಧರಾಗುವುದೇ ಮೇಲೆಂದು ಸಶಸ್ತ್ರ ದಳದೊಂದು. ಸಾಲಿನವರು ಬಂದೂಕು ಗುರಿ ಇಟ್ಟು ನಿಂತರು.