ಈ ಪುಟವನ್ನು ಪರಿಶೀಲಿಸಲಾಗಿಲ್ಲ.
'ಚಿರಸ್ಮರಣೆ ೪೫
ಕೆಮ್ಮಿದ ವ್ಯಕ್ತಿ ನಡು ವಯಸ್ಸಿನ ಒಬ್ಬ ಬಡಕಲು ಜೀವಿ, ಆತ ಸಂಶಯದ ದೃಷ್ಟಿಯಿಂದಲೆ ಕುಳಿತಿದ್ದವರನ್ನೆಲ್ಲ ನೋಡುತ್ತ, ಅತ್ತ ಬಂದು ಮೆಲ್ಲನೆ ಹೇಳಿದ: "ಬಹಳ ಜನ ಸ್ನೇಹಿತರು ಬಂದಹಾಗಿದೆಯಲ್ಲ ಕೇಳಪ್ಪ." ಎಳನೀರು ತಂದ ರೈತ ಎದ್ದು, ಹೊಸಬನತ್ತ ಸರಿದು, ಸುಳ್ಳಿನ ಸರಮಾಲೆ ನೇಯಲು ಸಿದ್ಧನಾಗುತ್ತ, ಉತ್ತರವಿತ್ತ: "ಯಾರೂ ಇಲ್ಲಪ್ಪೋ ನೀಲೇಶ್ವರದಿಂದ ನಮ್ಮ ಹುಡುಗನ ಮಾಸ್ಟ್ರುಗಳು ಹಳ್ಳಿ ನೋಡೋದಕ್ಕೇಂತ ಬಂದಿದ್ರು. ಇವತ್ತು ಅವರಿಗೆಲ್ಲ ರಜಾ ನೋಡು." "ಹಾಗೋ? ಯಾರು ಮಲಕೊಂಡಿರೋದು?" "ಅವರೊ ಒಬ್ರು ಮಾಸ್ಟ್ರೇ." "ನಿಮ್ಮ ಹುಡುಗ ಎಲ್ಲೋದ?" "ಇಷ್ಟೊತ್ತಿನವರೆಗೂ ಇಲ್ಲೇ ಇದ್ದ, ಈಗ ಯಾವ ಕಡೆ ಹೋದ್ನೋ ಕಾಣೆ." ಆ ಮನುಷ್ಯ ಮತ್ತೂ ಸಂಶಯದಿಂದಲೆ ಕುಳಿತವರನ್ನು ನೋಡುತ್ತ ಧಾಂಡಿಗನನ್ನು ಗುರುತಿಸಿ ಹೇಳಿದ: "ಓಹೋ, ನೀನೂ ಇದ್ದೀಯೋ?" "ನಾನಿಲ್ಲದ ಜಾಗವಿಲ್ಲ; ನಾನಿಲ್ಲದ ದೇಶವಿಲ್ಲ!" ಮಹತ್ವದ ತತ್ವವನ್ನು ಬೋಧಿಸುವವನಂತೆ ಧಾಂಡಿಗ ಉತ್ತರವಿತ್ತ, "ಸರಿ,ಸರಿ. ಒಂದು ಬೀಡಿ ಕೊಡಿ ಯಾರಾದರೂ." ಬಂದವನು ಮುಂದಕ್ಕೆ ಕೈ ಚಾಚಿದ. ರೈತ ಕೇಳಪ್ಪನ್ ಒಂದು ಬೀಡಿಯನ್ನೊಯ್ದು ಕೊಟ್ಟ, ಉರಿಯುತ್ತಿದ್ದ ತನ್ನ ಬೀಡಿಯ ಬೆಂಕಿಯಿಂದಲೇ ಅದನ್ನು ಹಚ್ಚಿದ. ಆತ ಹೊಗೆ ಬಿಡುತ್ತ ಮತ್ತಷ್ಟು ಕೆಮ್ಮಿ ಮುಂದೆ ನಡೆಯತೊಡಗಿದ. "ಜಮೀನ್ದಾರರು ಊರಲ್ಲಿದ್ದಾರೋ?" ಕೇಳಪ್ಪ ಆತನನ್ನು ಕೇಳಿದ. "ಹೂನಪ್ಪ, ಹೊಸದುರ್ಗದಿಂದ ನಿನ್ನೆ ಬಂದ್ರು, ಈಗ ಅವರಲ್ಲಿಗೆ ಹೋಗ್ತಾ ಇದ್ದೇನೆ." ಆತ ದೂರ ಹೋದಮೇಲೆ, ಧಾಂಡಿಗ ಮತ್ತೊಮ್ಮೆ ಕಾಲಿಗೆ ಬೆರಳು ಸೋಂಕಿಸಿ ಸಂಜ್ಞೆ ಮಾಡಿದ ಬಳಿಕ, ಪಂಡಿತರು ಮಗ್ಗುಲು ಹೊರಳಿ ಎದ್ದರು. ಪರಿಸ್ಥಿತಿಯ ಗಂಭಿರತೆಯನ್ನು ಆಗಲೇ ಊಹಿಸಿಕೊಂಡಿದ್ದ ಅಪ್ಪು ಮತ್ತು ಚಿರುಕಂಡ ಉಸಿರು ಬಿಗಿಹಿಡಿದೇ ಕುಳಿತಿದ್ದರು. ಕೆಮ್ಮುತ ಬಂದವನು ತಮ್ಮ