ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೮೮
ಚಿರಸ್ಮರಣೆ

ಅಪ್ಪುವಿಗೆ ಇಷ್ಟನ್ನು ಹೇಳಿದಮೇಲೆ ಚಿರುಕಂಡನಿಗೆ ಒಂದು ರೀತಿಯ ಸಮಾಧಾನವೆನಿಸಿತು....ಅಂಗಡಿಗೆ ಹೋಗಿ ಸೀಮೆಎಣ್ಣೆ ತರಲು ತನ್ನನ್ನು ತಾಯಿ ಇದಿರುನೋಡುತ್ತಿರುವಳೆಂಬುದು ಮತ್ತೆ ನೆನಪಾಗಿ, ಆತ ಎದ್ದು ನಿಂತ.

"ನಾನಿನ್ನು ಹೋಗ್ತೇನೆ ಕಣೊ."

ಅಪ್ಪುವೂ ಎದ್ದು, ತನ್ನ ಹಿಂಭಾಗಕ್ಕೆ ಅಂಟಿಕೊಂಡಿದ್ದ ತರಗೆಲೆಗಳನ್ನು ಕ್ಕೆಬೀಸಿ ಸರಿಸಿದ.

"ಹೂಂ.ನಾನೂ ಮನೆಗೆ ಹೋಗ್ತೇನೆ."

ಮೌನವಾಗಿ ಸ್ವಲ್ಪ ದೂರ ನಡೆದ ಮೇಲೆ ಕಾಲುಹಾದಿ ಕವಲೊಡೆಯಿತು. ಅಲ್ಲಿ ಬೇರೆಯಾಗುವುದಕ್ಕೆ ಮುಂಚೆ ಅಪ್ಪು ಕೇಳಿದ:

"ನಾಳೆ ಎಲ್ಲಿ ಸಿಗ್ತೀಯಾ?"

"ಇವತ್ತಿನ ಹಾಗೆ ಹೊಲಕ್ಕೆ ಬರ್ಲೇನು?"

"ಹೂಂ.ಬಾ."

ಆ ಬಳಿಕ ಇಬ್ಬರೂ ಬೇರೆಬೇರೆಯಾಗಿ ನಡೆದರು.

ಅಪ್ಪು ಆ ದಿನವೆಲ್ಲ ಆವರೆಗೂ ಉತ್ಸಾಹಿಯಾಗಿಯೇ ಇದ್ದ. ಆದರೆ ಚಿರುಕಂಡನೊಡನೆ ಮಾತನಾಡಿ ಆತನನ್ನು ಬೀಳ್ಕೊಟ್ಟಮೇಲೆ,ಎಲ್ಲಿಲ್ಲದ ಬೇಸರ ಅವನನ್ನು ಆವರಿಸಿತು.ಶುಭ್ರವಾದೊಂದು ಸಂಜೆ, ಕರಿಯ ಮೋಡಗಳು ಒಮ್ಮೆಲೆ ಕವಿದು ಬಂದು ಹಾಗೆ. ನಡೆಯುತ್ತಿದ್ದಂತೆ ಹಾದಿಗಡ್ಡವಾದ ಪೊದೆಪೊದರುಗಳತ್ತ ಕೈಚಾಚುತ್ತ,ಕೈಗೆ ಸಿಕ್ಕಿದ ಕುಡಿಗಳನ್ನೂ ಎಲೆ ಬಳ್ಳಿಗಳನ್ನೂ ಕಿತ್ತೆಸೆಯುತ್ತ ಆತ ಮುಂದುವರಿದ.

ಕತ್ತಲಾಗಲು ಮತ್ತೂ ಸ್ವಲ್ಪ ಹೊತ್ತಿತ್ತು. ಆಗಲೆ ಗುಡಿಸಿಲಿಗೆ ಹೋಗಿ ಆತ ಮಾಡಬೇಕಾದುದೇನೂ ಇರಲಿಲ್ಲ.ಅಲ್ಲಿ ಅಜ್ಜಿಯೊಡನೆ ಹರಟುತ್ತ ಕುಳಿತಿರಲು ಈಗ ಆತನಿಗೆ ಮನಸ್ಸಿರಲಿಲ್ಲ.ಪುನಃ ಹೊಲಕ್ಕೆ ಹೋಗೋಣವೆ? ಹೋರಿಗಳನ್ನು ನದಿಗೆ ಒಯ್ಯೋಣವೆ?--ಎಂದುಕೊಂಡರೂ, ಕಾಲುಗಳು ಮಾತ್ರ ಗೊತ್ತು ಗುರಿ ಇಲ್ಲದೆ ನಡೆದುವು.

ಚರ್ವತ್ತೂರಿಗೆ ಹೋಗುವ ಹಾದಿಯಲ್ಲಿ ಹಲವಾರು ಹೊಲಗಳನ್ನು ಬಳಸಿ ಬಂದು, ನದೀ ದಡವನ್ನು ಸೇರಿ,ಅದರುದ್ದಕ್ಕೂ ಪೂರ್ವಾಭಿಮುಖವಾಗಿ ಆತ ನಡೆದ.ಎದುರಾಗಿ ಯಾರೋ ಬರುತ್ತಿದ್ದುದು ಕಂಡಿತು.ಅವರನ್ನ ಭೇಟಿಯಾಗಲು ಇಷ್ಟವಾಗದೆ ಅಪ್ಪು,ನದೀ ದಂಡೆಯನ್ನು ಬಿಟ್ಟು ಮತ್ತೆ ಹೊಲದ ಏರಿಯನ್ನೇರಿದ.

ಪಾದಗಳ ಚಲನೆಗೆ ಅನುಗುಣವಾಗಿ ಯೋಚನೆಯೂ ಗೊತ್ತುಗುರಿಯಿಲ್ಲದೆ