ಪುಟ:Duurada Nakshhatra.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

.ಶಂಕರಪ್ಪನವರ ಆತಿಥ್ಯ, ತಾನು ಬಂದ ಆರಂಭದಲ್ಲಿ ಅಲ್ಲಿ ಕೊಠಡಿ ದೊರೆಯುವ ನುಾತು ಬಂದಿರಲಿಲ್ಲ, ಆದರೆ ಈ ಮುಖ್ಯೋಪಾಧ್ಯಾಯರಿಗೆ ಉಚಿತ ಕೊಠಡಿ, ಪಕ್ಕದ ಬಾಹ್ಮಣರ ಮನೆಯಲ್ಲಿ ಊಟ... ತನಗೆ ಜಾತಿಯಲ್ಲಿ ನಂಬಿಕೆಯಿಲ್ಲವೆಂದುದು ಪ್ರಾಯಶ: ಅವರಿಗೆ ರುಚಿಸಲಿಲ್ಲವೇನೊ! ಹೀಗಾಗಿ ತಾನು ಯಾರಿಗೂ ಬೇಡದವನು !...

... ಇನ್ನು ಈ ಶಾಲೆಯಲ್ಲೂ ವಸತಿ ಇರುವಂತಿಲ್ಲ. ತಾನೂ ಬೇರೆ ಕೊಠಡಿ ಹುಡುಕಬೇಕು...

ಶಾಲೆ ಸೇರಿದ ಜಯದೇವ ಬಾವಿಯಿಂದ ಒಂದು ಕೊಡನೀರು ತಂದು, ಉರಿಯುತಿದ್ದ ಕಣ್ಣಗಳಿಗೆ ತಣ್ಣೀರು ಹನಿಸಿದ. ಹೃದಯ ತಣ್ಣಗಾಗುವುದೇನೋ ನೋಡೋಣವೆಂದು ಒಂದು ಲೋಟ ನೀರು ಕುಡಿದ. ಆನಂದ ವಿಲಾಸದ ದೋಸೆ ತಿಂದು ಹೊಟ್ಟೆ ತುಂಬಿದ್ದ ಹಾಗೆ ತೋರಿತು. 'ಹಸಿವೆಯೇ ಇಲ್ಲ, ಊಟ ಮಾಡದೆ ಇರೋದೇ ಮೇಲು' ಎಂದುಕೊಂಡ. ಬೆಂಗಳೂರಲ್ಲಾಗಿದ್ದರೆ ಹಲವು ಸಾರಿ ವೇಣು-ಸುನಂದೆಯರ ತಾಯಿ ಕೇಳುತ್ತಿದ್ದರು: 'ಊಟ ಆಯ್ತೇ ಜಯಣ್ಣ? ಎಂದು. 'ಹಸಿವಿಲ್ಲ' ಎನ್ನುತಿದ್ದ ಜಯದೇವ, ಆದರೆ ಅವರು, ಬೆಳೆಯೋ ಹುಡುಗ, ಊಟ ಮಾಡೊಲ್ಲ. -ಹಸಿವಿಲ್ಲ ಅಂದ್ರೇನೊ ?' ಎಂದು ಭೀಮಾರಿ ಹಾಕಿ ಸಾರನ್ನ ಮೊಸರನ್ನು ಕಲಸಿಕೊಡುತಿದ್ದಳು... ಇಲ್ಲಿ ಅಂತಹ ಯಾವ 'ತೊಂದರೆ'ಯೂ ಇರಲಿಲ್ಲ

ಕತ್ತಲಾಯಿತೆಂದು ಜಯದೇವ ಬೆಡ್ ಲ್ಯಾಂಪು ಉರಿಸಿದ. 'ಈ ಹೊಗೆ ಕಣ್ಣಿಗೆ ಕೆಟ್ಟದ್ದು', ಬೇರೊಂದು ಕಂದೀಲು ಕೊಳ್ಳಬೇಕು'-ಎಂದು ತೀರ್ಮಾನಿಸಿದ.

ಶಂಕರಪ್ಪನ ಮನೆಯಿಂದ ಆಳು ಬರಲೇ ಇಲ್ಲ. ಬೇಕು ಬೇಕೆಂದೇ, ತಾನು ಎಲ್ಲಿಗೂ- ಅಂದರೆ ರಂಗರಾಯರಲ್ಲಿಗೆ-ಹೋಗಬಾರದೆಂದೇ, ಆಳನ್ನು ಕಳಿಸಲು ತಡಮಾಡುತ್ತಿರುವರೇನೋ ಎಂದು ಜಯದೇವ ಶಂಕಿಸಿದ. ಮರು ಕ್ಷಣವೆ, ಇಷ್ಟೆಲ್ಲಾ, ಆಳವಾಗಿ ಯೋಚಿಸಿ ಊಹಾಪೋಹದ ಸಹಸ್ರ ಮುಳ್ಳುಗಳನ್ನು ತಾನೆ ನಿರ್ಮಿಸಿಕೊಳ್ಳಬಾರದು-ಎಂದು ತನ್ನನ್ನು ತಾನೇ ಟೀಕಿಸಿಕೊಂಡ.

ಅಷ್ಟರಲ್ಲೆ ಹೊರಗೆ ಕರೆದ ಸದ್ದಾಯಿತು:

“ಬುದ್ದೀ. ...”