ಯಾರು ಎಂದು ಕೇಳಬೇಕಾದ ಅಗತ್ಯವಿರಲಿಲ್ಲ, ಜಯದೇವ ಹೊರ ಬರುತ್ತಲೆ ಬಂದವನೆಂದ:
“ಮೇಷ್ಟ್ರು ಕಳಿಸವ್ರೆ.”
ಆಫೀಸು ಕೊಠಡಿಯನ್ನು ತೆರೆದು ವೆಂಕಟರಾಯರ ಸಾಮಾನುಗಳನ್ನು ಹೊರತಂದು ಅಷ್ಟನ್ನು ಆಳು ತಲೆಯ ಮೇಲಿರಿಸಿಕೊಳ್ಳಲು ಜಯದೇವ ನೆರವಾದ.
ಆ ಬಳಿಕ ಕೆಲವು ನಿಮಿಷಗಳಾದ ಮೇಲೆ ತನ್ನ ಹಾಸಿಗೆಯನ್ನು ಹಾಸಿಟ್ಟು, ದೀಪವನ್ನು ಚಿಕ್ಕದಾಗಿ ಉರಿಯಗೊಟ್ಟು, ಬಾಗಿಲಿಗೆ ಬೀಗ ತಗಲಿಸಿ ಜಯದೇವ ಬೇಗ ಬೇಗನೆ ರಂಗರಾಯರ ಮನೆಗೆ ನಡೆದ.
Χ X X
ರಾತ್ರೆ ಅಷ್ಟು ಹೊತ್ತಾದಾಗ, ಇನ್ನು ಜಯದೇವ ಬರುವುದಿಲ್ಲವೆಂದೇ ರಂಗರಾಯರು ಭಾವಿಸಿದ್ದರು.
“ಬರ್ತಾನೇಂತ ಅಡುಗೆ ಮಾಡಿದ್ದು ವ್ಯರ್ಥವಾಯ್ತು” ಎಂದು ಸಾವಿತ್ರಮ್ಮ ಗೊಣಗಿದರು.
ಆ ನಷ್ಟದ ಯೋಚನೆಗಿಂತಲೂ ತಮ್ಮನ್ನು ಕಾಣಲು ಜಯದೇವ ಹಿಂದೇಟು ಹಾಕುತ್ತಿರಬಹುದೆಂಬ ವಿಚಾರ ರಂಗರಾಯರನ್ನು ಸಂಕಟಕ್ಕೆ ಗುರಿಮಾಡಿತು.
ಆದರೆ ಅಂಗಳದಲ್ಲಿ ನಿಂತು ಜಯದೇವ “ಸಾರ್” ಎಂದಾಗ, ರಂಗರಾಯರು ಉತ್ಸಾಹದಿಂದೆದ್ದು ಬಾಗಿಲು ತೆರೆದರು.
“ಬನ್ನಿ ಜಯದೇವ, ನೀವು ಬರೋದೇ ಇಲ್ವೇನೋಂತಿದ್ದೆ.”
“ಯಾಕ್ಸಾರ್ ? ಬರ್ತೀನೀಂತ ಆಗ್ಲೇ ಹೇಳ್ಲಿಲ್ವೆ? ಅವರಿಬ್ಬರನ್ನೂ ಕಳಿಸ್ಕೊಡೋದು ತಡವಾಯ್ತು”
ಮನೆಯ ಗೋಡೆಯಿಂದ ಪಟಗಳು ಮಾಯವಾಗಿದ್ದುವು; ಕಿತ್ತು ಬಂದಿದ್ದುವು ಮೊಳೆಗಳು....
“ಇದೇನ್ಸಾರ್ ? ಯಾವತ್ತು ಹೊರಡ್ತೀರಾ?”
“ನಾಳೆ ಬೆಳಗ್ಗೆ ಜಯದೇವ.”
"ನಾಳೇನೆ! ”