ಆ ಸಂಜೆ ವೆಂಕಟರಾಯರು ಮತ್ತು ನಂಜುಂಡಯ್ಯ! ಆಡಿಕೊಂಡಿದ್ದ ಮಾತುಗಳೆಲ್ಲ ಜಯದೇವನ ನೆನಪಿಗೆ ಬಂದುವು. ಅಷ್ಟನ್ನೂ ರಂಗರಾಯರಿಗೆ ಹೇಳಿ ಬಿಡೋಣವೇ–ಎನ್ನಿಸಿತು. ಅದರಿಂದೇನೂ ಪ್ರಯೋಜನವಿಲ್ಲ-ಆಗಿರುವ ನೋವನ್ನು ಮತ್ತೂ ಯಾಕೆ ಕೆದಕಬೇಕು-ಎಂದು ಅತ ಸುಮ್ಮನಾದ.
ಸಾವಿತ್ರಮ್ಮ ಬಂದು ಹೇಳಿದರು :
“ಎಷ್ಟೋ ದಿವಸ ಆದ್ಮೇಲೆ ಬಂದಿದೀರಪ್ಪ ಏಳಿ, ಊಟಕ್ಕೇಳಿ. ಆ ಮೇಲೆ ಮಾತಾಡೀರಂತೆ.” .
ಊಟವಾಯಿತೆಂದು ಸುಳ್ಳಾಡಲು ಬಯಸಿದರೂ ಅದು ಸಾಧ್ಯವಾಗದೆ ಜಯದೇವನೆಂದ:
“ನಂಗೆ ಹಸಿವಿಲ್ಲ ಅಮ್ಮ”
“ಯಾರಾದರೂ ನಗ್ತಾರೆ, ನಿಮ್ಮ ವಯಸ್ನಲ್ಲಿ ಹಾಗಂದ್ರೆ.... ಏಳಿ--ಏಳಿ.... ”
ರಂಗರಾಯರೂ ಹೆಂಡತಿಯ ಮಾತನ್ನ ಹಿತವಚನದೊಡನೆ ಪುಷ್ಟೀಕರಿಸಿದರು:
“ಊಟ ತಿಂಡಿ ಯಾವಾಗಲೂ ಕ್ರಮಬದ್ಧವಾಗಿರ್ಬೇಕು ಜಯದೇವ. ಕಾಹಿಲೆ ಬೀಳ್ಬೇಡೀಪ್ಪಾ"
ಊಟವಾಯಿತು......
ಅನಂತರದ ವಿರಾಮದಲ್ಲಿ ರಂಗರಾಯರೆಂದರು.
“ಉಪಾಧ್ಯಾಯ ವೃತ್ತಿ ಅತ್ಯಂತ ಗೌರವದ್ದು, ಆದರೆ ಇನ್ನೊಮ್ಮೆ ಯುವಕನಾಗಿ ಜೀವನ ಷುರು ಮಾಡೋಕೆ ನನಗೆ ಅವಕಾಶ ಸಿಗ್ತೂಂದ್ರೆ ಖಂಡಿತವಾಗ್ಲೂ ನಾನು ಉಪಾಧ್ಯಾಯನಾಗೋದಿಲ್ಲ.”
ಜಯದೇವನಿಗೆ ಹೃದಯ ಹಿಂಡಿದ ಹಾಗಾಯಿತು:
“ನೀವು ಹಾಗನ್ಬಾರದು. ಈ ರೀತಿ ನೀವಂದ್ರೆ ನನ್ನಂಥ ಯುವಕರು ಯಾಕೆ ವೃತ್ತಿಗೆ ಬಂದಾರು?"
“ಬರದೆ ಏನ್ಮಾಡ್ತಾರೆ? ಯಾವ ಉದ್ಯೋಗವೂ ಸಿಗ್ದೇ ಇದ್ದಾಗ ಈ ಉದ್ಯೋಗಕ್ಕೆ ಬರ್ತಾರೆ. ದೊಡ್ಡ ಆದರ್ಶ ಇಟ್ಕೊಂಡು ಬರೋ ಜನರೂ ಕೆಲವರು ಇರ್ಬಹುದು. ಇಲ್ಲಾಂತ ನಾನು ಅನ್ನೋದಿಲ್ಲ, ಆದರೆ ಅವರೆಲ್ಲ ಯಾವ ಭ್ರಮೇನೂ ಇಟ್ಕೊಳ್ಳದೇನೇ ಬರೋದು ಮೇಲು."