“ಬಂದು ಷುರೂನಲ್ಲಿ ಸ್ವಲ್ಪ ದಿವಸ ಆಯ್ತು, ಈಗ ಅಭ್ಯಾಸವಾಗಿದೆ. ಸಾರ್"
“ನನಗೆ ಇದೆಲ್ಲಾ ಗಮನಕ್ಕೆ ಬರೋದಿಲ್ಲ, ಶಾಲೆಯ ಅಭಿವೃದ್ಧಿ ಚೆನ್ನಾಗಿ ಆಗ್ತಿದ್ರೆ ಅಷ್ಟರಿಂದ್ಲೇ ನಾನು ಸುಖಿಯಾಗಿರ್ತೀನಿ."
ಆ ಮಾತಿನಲ್ಲಿ ಕಾಪಟ್ಯವಿತ್ತು, ಅಲ್ಲದೆ, ನಂಜುಂಡಯ್ಯನಿಗಿಂತ ತಾನು ಮೇಲು ಎಂಬ ಒಣ ಜಂಭವಿತ್ತು.
ಒಮ್ಮೊಮ್ಮೆ ವಿದ್ಯಾಭ್ಯಾಸದ ವಿಷಯವಾಗಿಯೇ ಸಂಭಾಷಣೆಯಾಗುತ್ತಿದ್ದಾಗ ವೆಂಕಟರಾಯರು ಹೇಳುತಿದ್ದರು :
“ಈಗ ಕಾಲೇಜುಗಳೆಲ್ಲ ಕಾರ್ಖಾನೆಗಳಾಗಿವೆ. ಡಿಗ್ರಿಯವರ್ನ ಯಾರು. ಕೇಳ್ತಾರೆ? ಕಾಸಿಗೊಂದು ಕೊಸರಿಗೊಂದು. ಈಗಿನ ಪದವೀಧರರಿಗಿಂತ ಹಳೇ ಮೆಟ್ರಿಕುಲೇಟುಗಳೇ ಮೇಲು.”
ಆದರೆ ಈ ಸರಣಿಯಲ್ಲಿ ಅವರು ಮಾತನಾಡುತಿದ್ದುದು ನಂಜುಂಡಯ್ಯ ಇಲ್ಲದಿದ್ದಾಗ ಮಾತ್ರ.
ಸದಾ ಕಾಲವೂ ವೆಂಕಟರಾಯರು ಮತ್ತು ಜಯದೇವನ ನಡುವೆ, ಸೌಹಾರ್ದದ ವಾತಾವರಣವಿರುವುದು ಸಾಧ್ಯವಿರಲಿಲ್ಲ, ಸವೆದು ಹೋಗಿದ್ದೊಂದು ವಿದ್ಯಾಯಂತ್ರದ ಸವಕಲು ಕೀಲಿಯಾಗಿ ಬಾಳಲು ಜಯದೇವ ಬಂದಿದ್ದನೆ? ದಿನಕಳೆದಂತೆ, ವಿದ್ಯಾಭಾಸದ ಸಮಸ್ಯೆಗಳು ಸ್ಪಷ್ಟವಾದಂತೆ, ತನ್ನ ಆತ್ಮವಿಶ್ವಾಸವೂ ಬೆಳೆದಂತೆ ಜಯದೇವ ಮಾತನಾಡತೊಡಗಿದ.
ವಾಚನಾಲಯಕ್ಕೇಂತ ಅಂದಾಜು ಪಟ್ಟಿಲಿ ಹಣ ಮೀಸಲಿದೆಯಲ್ಲಾ ಸಾರ್?” -
“ಇದೆ ಏನ್ಮಾಡೋಣ ಅಂತೀರಿ?”
"ಅದರಿಂದ ಒಂದಿಷ್ಟು ಒಳ್ಳೆ ಪುಸ್ತಕ ಕೊಂಡುಕೊಳ್ಳೋಣ.”
“ಹೊಸ ಪುಸ್ತಕ!” -
ಅದರಲ್ಲಿ ಆಶ್ಚರ್ಯಪಡಬೇಕಾದುದು ಏನಿತ್ತೊ! ಆದರೆ ವೆಂಕಟ ರಾಯರು ತಲೆಯಾಡಿಸಿದರು.
“ಛೆ! ಛೆ! ಜಯದೇವ್.. ಹಾಗೆ ಮಾಡೋದು ದುಡ್ಡು ದಂಡ