ತುಂಟ ಹುಡುಗಿ ಪ್ರಭಾಕೇಳಿದಳು :
“ಎಷ್ಟು ರೂಪಾಯಿ ಪರೀಕ್ಷೆ ಸಾರ್?”
“ಎಷ್ಟು ರೂಪಾಯಿದ್ದೂಂತ ಹೇಳೋ ಹಾಗೇ ಇಲ್ಲ ಪ್ರಭಾ!”
ಹೆಚ್ಚು ತಡವಿಲ್ಲದೆ ವೆಂಕಟರಾಯರ ವಿಶೇಷ ತರಗತಿಗಳು ಆರಂಭ ವಾದುವು. ಜಯದೇವ ಮಾತ್ರ ಸುಮ್ಮನಿದ್ದ.
ನಂಜುಂಡಯ್ಯ ಕೆದಕಿ ಕೇಳಿದರು:
“ನಿಮ್ಮದು ಬರೇ ಆದರ್ಶವಾದ ಜಯದೇವ.”
“ಇದ್ದೀತು.”
“ಈ ರೀತಿಯ ಮನೆಪಾಠಗಳಿಂದ ವಿದ್ಯಾಭ್ಯಾಸ ಪದ್ಧತಿ ಸುಧಾರಿಸೋದಿಲ್ಲ ಅನ್ನೋದು ನಿಮ್ಮ ಅಭಿಪ್ರಾಯ, ಅಲ್ವೇ?”
"ಹೌದು ಸಾರ್."
“ಹಾಗಾದ್ರೆ ಇಂಥ ಪರಿಸ್ಮಿತೀಲಿ ನೀವು ಯಾಕೆ ಉಪಾಧ್ಯಾಯರಾದಿರಿ ಹೇಳಿ?"
“ಈ ಪ್ರಶ್ನೆಗೆ ಉತ್ತರ ಸುಲಭವಲ್ಲ.”
ನಂಜುಂಡಯ್ಯ ಸಿಗರೇಟು ಹಚ್ಚಿ ಹೊಗೆಯನ್ನೆ ದಿಟ್ಟಿಸುತ್ತಾ ಯೋಚಿಸಿ ಹೇಳಿದರು:
“ನಿಮ್ಮ ಮನಸ್ನಲ್ಲಿ ಏನಿದೆ ಅನ್ನೋದನ್ನ ನಾನು ಬಲ್ಲೆ. ನನ್ನ ಅಭಿಪ್ರಾಯವೂ ನಿಮ್ಮ ಅಭಿಪ್ರಾಯವೂ ಒಂದೇ ಎಂದರೆ ನಿಮಗೆ ಆಶ್ಚರ್ಯವಾದರೂ ಆದೀತು.”
ಜಯದೇವನಿಗೆ ಆಶ್ಚರ್ಯವಾಗದೆ ಇರಲಿಲ್ಲ. ಅವನ ಮುಖ ಮುದ್ರೆಯನ್ನು ಗಮನಿಸಿ ನಂಜುಂಡಯ್ಯ ಮಾತು ಮುಂದುವರಿಸಿದರು.
“ಆದರೆ ಇದೆಲ್ಲಾ ಸುಧಾರಣೆಯಾಗೋದು ಸಾಧ್ಯವೇ ಇಲ್ಲಾಂತ ನನ್ನ ಅಭಿಪ್ರಾಯ. ಉಪಾಧ್ಯಾಯ ಸಂತೃಪ್ತ ಜೀವಿಯಾಗಿ ಇರ್ಬೇಕಾದ್ದು ಮೊದಲನೇದು, ಈಗ ಸಿಗೋ ಅಲ್ಪ ವೇತನದಲ್ಲಿ ಅದು ಹೇಗೆ ಸಾಧ್ಯ? ದುಡ್ಡಿಲ್ಲ-ಅನ್ನುತ್ತೆ ಸರಕಾರ, ಹಾಗಾದರೆ ಉಪಾಧ್ಯಾಯನಾದ ಮನುಷ್ಯ ಉಪವೃತ್ತಿ ಇಟ್ಟುಕೊಳ್ಲೇಬೇಕು. ಪರಿಣಾಮ ಗೊತ್ತೇ ಇದೆ.ಈಗ ನಿಮ್ಮ ವಿಷಯಾನೇ ತಗೊಳ್ಳಿ. ನೀವು ಒಬ್ಬಂಟಿಗ. ಸಾಯೋವರೆಗೂ ಹೀಗೇ