೧೩
ಜಯರಾಮಶೆಟ್ಟರ ಮನೆಯಲ್ಲಿ ಎಲ್ಲ ಅನುಕೂಲತೆಗಳೂ ಇದ್ದುವು. 'ಏನೋಪ್ಪ' ಎಂದು ಶಂಕಿಸುವ ಅವಶ್ಯಕತೆಯೇ ಇರಲಿಲ್ಲ. ನಾಗರಾಜನ ಅಕ್ಕ ಶಾಮಲಾ ಮನೆಗೆ ಬಂದ ಮೇಲೆ ಉಪಾಧ್ಯಾಯರ ಬಗೆಗೆ ಮನೆಯವರು ಆದರ ತೋರಿಸುವುದೂ ಹೆಚ್ಚಿತು
ಹುಡುಗ ಬಂದು ಅಕ್ಕನಿಗಾಗಿ ಕತೆ ಪುಸ್ತಕಗಳನ್ನು ಕೇಳಿ ಒಯ್ಯುತಿದ್ದ. ತನ್ನ ಅಚ್ಚುಮೆಚ್ಚಿನ ಸಾಹಿತಿಗಳ ಹಲವಾರು ಕೃತಿಗಳನ್ನು ಬೆಂಗಳೂರಿನಿಂದ ಹೊತ್ತು ತಂದಿದ್ದ ಜಯದೇವನಿಗೆ ಪುಸ್ತಕ ಎರವಲು ನೀಡುವುದೇನೂ ಕಷ್ಟ ವಾಗಲಿಲ್ಲ, ಆದರೆ ಆ ಪುಸ್ತಕಗಳೆಲ್ಲ, ಹಾಳೆ ಕಿವಿ ಮಡಚಿಕೊಂಡೋ ನೀಳವಾದ ಸುವಾಸನೆಯ ತಲೆಗೂದಲಿನೊಡನೆಯೋ ಕು೦ಕುಮ ಪೌಡರುಗಳನ್ನು ಬಳೆದುಕೊಂಡೋ ವಾಪಸ್ಸು ಬರುತಿದುವು. ಪುಸ್ತಕಗಳಿಗೆ ಆ ರೀತಿ ಆಗುತಿದ್ದ ಹಿಂಸೆಯನ್ನು ಜಯದೇವ ಕಷ್ಟಪಟ್ಟು ಸಹಿಸಿದ.
ಆದರೆ, ಹಿಂಸೆ ಅವನನ್ನೂ ಬಲಿ ತೆಗೆದುಕೊಳ್ಳತೊಡಗಿದಾಗ ಜಯದೇವನಿಗೆ ಗಾಬರಿಯಾಯಿತು. ಸುಂದರಿಯಾಗಿದ್ದಳು ನಾಗರಾಜನ ಅಕ್ಕ ಶಾಮಲಾ, ಹೃಷ್ಟಪುಷ್ಟವುದ ಮೈ, ಗೌರಾಂಗಿಯಲ್ಲದೇ ಹೋದರೂ ತಾನು ಶಕ್ಷೆ ಸಮರ್ಥೆ ಎಂಬುದನ್ನು ಸಾರಿಹೇಳುವ ಗುಣ ವಿಶೇಷಗಳಿದುವು ಆಕೆಯ ರೂಪಕ್ಕೆ. ಗಂಡನೊಡನೆ ಯಾತಕ್ಕೊಸ್ಕರ ಜಗಳವಾಡಿ ಬಂದಳೋ ಎಂದು ಜಯದೇವ ಚಿಂತಿಸಿದ.
ನಾಗರಾಜ ದಿನವೂ ಅಕ್ಕನ ವಿಷಯ ಏನಾದರೊಂದು ಮಾತನಾಡದಿರುತ್ತಿರಲಿಲ್ಲ,
“ಬೆಂಗಳೂರಲ್ಲಿ ಎಷ್ಟು ಸಿನಿಮಾ ಥಿಯೇಟರುಗಳಿದಾವೆ ಹೇಳಿ ಸಾರ್.”
*ಗೊತ್ತಿಲ್ವಲ್ಲಾ...”
“ಅರವತ್ಮೂರು. ನಂಗೊತ್ತಿದೆ. ಅಕ್ಕ ಹೇಳಿದ್ದು, ಮದುವೆ ಆದ್ಮೇಲೆ ಅಲ್ಲಿ ನಮ್ಮ ಸಂಬಂಧಿಕರ ಮನೇಲಿ ಒಂದು ತಿಂಗಳು ಇದ್ಲಂತೆ,”
ಮತ್ತೊಮ್ಮೆ ಬೇರೆ ರೀತಿಯ ಪ್ರಶ್ನೆ.
“ನಿಮ್ಮೂರು ಖುದ್ದು ಬೆಂಗಳೂರೇ ಸಾರ್?”
“ಹೌದು, ಯಾಕಪ್ಪಾ?"