“ಯಾಕ್ಸಾರ್ – ಜನರಾಜರನ್ನೋ ಕೃಷ್ಣರಾಜರನ್ನೋ ಕರಿಸಿದ್ರಾಗ್ದೆ?”
“ಅವರು ಯಾರು ?"-ಎಂದು ವೆಂಕಟರಾಯರು ಬೇಕುಬೇಕೆಂಬುದೇ ಕೇಳಿದರು. ಅದು ವ್ಯಂಗ್ಯಮಿಶ್ರಿತ ಪ್ರಶ್ನೆ ಎಂಬುದು ಜಯದೇವನಿಗೆ ಹೊಳೆಯದಿರಲಿಲ್ಲ, ಮಾತನಾಡಿ ಪ್ರಯೋಜನವಿಲ್ಲವೆಂದು ಆತ ಸುಮ್ಮ ನಾದ. ಅದನ್ನು ಗಮನಿಸಿ ನಂಜುಂಡಯ್ಯನೆಂದರು.
“ಸಾಹಿತಿಗಳು ಯಾರೂ ಬೇಡಿ. ನಮ್ಮ ಅಧಿಕಾರಿಗಳನ್ನೇ ಕರೆಸೋಣ..?
“ಯಾರನ್ನು--ರೇಂಜ್ ಇನ್ಸ್ಪೆಕ್ಟರ್ ರಾಧಾಕೃಷ್ಣಯ್ಯನವರ್ನ ಕರಿಸ್ತಿರೇನು ?'–ಎಂದು ಜಯದೇವ, ಅದಾದರೂ ಆಗಲಿ ಎಂಬ ಆಸೆಯಿಂದ ಹೇಳಿದ.
ವೆಂಕಟರಾಯರೂ ನಂಜುಂಡಯ್ಯನೂ ಪರಸ್ಪರ ಮುಖ ನೋಡಿಕೊಂಡರು.
“ರೇಂಜ್ ಇನ್ಸ್ಪೆಕ್ಟರು ಯಾತಕ್ರಿ ? ಜಿಲ್ಲಾ ಕೇಂದ್ರಕ್ಕೆ ಹೋಗಿ ಜಿಲ್ಲಾಧಿಕಾರಿಗಳನ್ನೇ ಕರಕೊಂಡು ಬರ್ತೀನಿ."
ಹಾಗೆ ಹೇಳಿದ ವೆಂಕಟರಾಯರು ಅದನ್ನು ಮಾಡಿಯೇ ತೀರುವರೆಂಬ ವಿಷಯದಲ್ಲಿ ಸಂದೇಹವಿರಲಿಲ್ಲ. ಆ ರೀತಿ ಜಯದೇವನ ಮನಸ್ಸನ್ನು ನೋಯಿಸಿದ ಮೇಲೆ, ಆ 'ಉತ್ಸಾಹಿ ಉಪಾಧ್ಯಾಯ'ರ ಸಾಮಾರ್ಥ್ಯಕ್ಕೆ ಆಹ್ವಾನ ನೀಡುವ ಬೇರೆ ಕೆಲಸವನ್ನು ಮುಖ್ಯೋಪಾಧ್ಯಾಯರು ಆತನಿಗೆ ಒಪ್ಪಿಸಿದರು.
“ಹುಡುಗರ್ದೊಂದು ನಾಟಕ, ಹುಡುಗೀರ್ದೊಂದು ನಾಟಕ-ಇಷ್ಟು ಜವಾಬ್ದಾರಿ ನಿಮ್ಮ ಮೇಲೆ.. ಏನು ಜಯದೇವ್ ?”
ಹೈಸ್ಕೂಲಿನಲ್ಲೆರಡು ಬಾರಿ, ಕಾಲೇಜಿನಲ್ಲೂ ಒಮ್ಮೆ, ನಾಟಕಗಳಲ್ಲಿ ಜಯದೇವ ಅಭಿನಯಿಸಿದ್ದ, ಆದರೆ, ಹುಡುಗ-ಹುಡುಗಿಯರನ್ನು ಕಲೆ ಹಾಕಿ ನಟನಟಿಯರನ್ನು ಸಿದ್ಧಗೊಳಿಸಿದುವುದು ಸುಲಭದ ಕೆಲಸವಾಗಿರಲಿಲ್ಲ.
“ಪ್ರಯತ್ನಪಟ್ಟು ನೋಡ್ತೀನಿ ಸಾರ್.”
ಜಯದೇವನ ಈ ಅಳಕು ಕಂಡು ವೆಂಕಟರಾಯರಿಗೆ ಸಂತೋಷವಾಯಿತು.