ಪುಟ:Duurada Nakshhatra.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಿಂದ ನೋಡಿದ ಅವನಿಗೆ, ಇದ್ದ ಜಾಗದ ಮೂರರಷ್ಟು ಜನ ಸೇರಿಕೊಂಡು ಬೇಗೆಯಲ್ಲಿ ನರಳುತಿದ್ದ ದೃಶ್ಯ ಕಾಣುತಿತ್ತು.

ಸ್ವಲ್ಪ ಹೊತ್ತಿನಲ್ಲೆ ಗಾಡಿ ಚಲಿಸಿ ತಣ್ಣನೆ ಗಾಳಿ ಬೀಸಿತು. ಬೇರೆ ಹಾದಿಯಿಲ್ಲದೆ ಒಂದು ರಾತ್ರಿಯನ್ನು ಹಾಗೆಯೇ ಕಳೆಯಲು ಸಿದ್ಧರಾದವರಂತೆ ಜನರು ಸುಮ್ಮನಾದರು.

ಎಲ್ಲ ಮಾನವ ಪ್ರಾಣಿಗಳಂತೆಯೇ ತಾನೂ ಕೂಡಾ ಎಂದು ಭಾವಿಸಿದ್ದ ಜಯದೇವ. ತಾನು ಪರೋಪಕಾರಿಯಾಗಿ ಬಾಳಬೇಕೆಂದು ಆತನ ಬಯಕೆ. ಆದರೆ ಮನಸ್ಸಿನಲ್ಲಿದ್ದುದಕ್ಕೂ ಕೃತಿಯಲ್ಲಿ ನಡೆದುದಕ್ಕೂ ವ್ಯತ್ಯಾಸವಿತ್ತಲ್ಲವೆ? ತಾನು ಸ್ವಾರ್ಥಿ ಎಂದು ತೋರಿಸಿಕೊಂಡ ಹಾಗಾಯಿತಲ್ಲವೆ?

ಮನಸು ಕದಡುವುದಕ್ಕೆ ಮುಂಚೆಯೆ ರಾತ್ರಿಯ ತಂಗಾಳಿ ಜಯದೇವನ ನೆರವಿಗೆ ಬಂತು. ಡಬ್ಬಿಯಲ್ಲಿ ನಡೆಯುತಿದ್ದ ಮಾತುಕತೆಗಳೂ ಕ್ರಮೇಣ ಕಡಮೆ-ಬಲು ಕಡಮೆ-ಯಾದುವು. ಗಾಡಿಯ ಚಲನೆಯ ಗುಸು ಗುಸು ಧ್ವನಿಯೇ ಜಯದೇವನ ಪಾಲಿಗೆ ಜೋಗುಳವಾಯಿತು. ಡಬ್ಬಿಯ ಮಾಡದಿಂದ ಬೆಳಕು ಬಿರುತ್ತಿದ್ದ ವಿದ್ಯುದ್ದೀಪವನ್ನೂ ಗಮನಿಸದೆ, ನಿದ್ದೆ ಆತನ ಮೇಲೆ ತನ್ನ ಹೊದಿಕೆಯನ್ನೆಳೆಯಿತು.

..............

ಆದರೆ ಈಗ ಬಸ್ಸಿನಲ್ಲಿ ಕುಳಿತ ಜಯದೇವನಿಗೆ ಆಂತಹ ಅನುಕೂಲತೆಗಳಿರಲಿಲ್ಲ. ಆತನಿದ್ದುದು ಎಚ್ಚರಗೊಂಡಿದ್ದ ಜಗತ್ತಿನಲ್ಲಿ. ಇಲ್ಲಿ ನಿದ್ದೆ ಹೋದವರ ಹಾಗೆ ಕಣ್ಣು ಮುಚ್ಚಿಕೊಂಡು ಯಾರಿಂದಲೂ ಏನನ್ನೂ ಆತ ಮರೆಮಾಚುವ ಹಾಗಿರಲಿಲ್ಲ.

ಆ ಕಾರಣದಿಂದಲೆ, ತನ್ನ ಮನಸಿನ ಹೊಯ್ದಾಟ ಕಂಡು ಆತನಿಗೆ ನಗು ಬಂತು.

ಬಸ್ಸು ಹೊರಡುವ ಲಕ್ಷಣವೇ ಕಾಣಿಸಲಿಲ್ಲ, ಅದರ ಸಾರಥಿಯಾಗಲೀ ಸಹಾಯಕನಾಗಲೀ ಅಲ್ಲಿ ಇರಲಿಲ್ಲ. ಅಂತೂ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗ ದೊರೆಯಿತು.

ಕಂಡಕ್ಟರ್ ಟಿಕೆಟು ಕೊಡಲು ಬಂದಾಗ ಜಯದೇವ ಕೇಳಿದ:

"ಬಸ್ಸು ಹೊರಡೋದು ಎಷ್ಟು ಹೊತ್ತಿಗೆ ಇವರೇ?"

"ಇನ್ನೇನು ಟೇಮು ಆಗೋಯ್ತು ಸಾರ್.”