ಪುಟ:Duurada Nakshhatra.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

'ಲೋಯರ್ ಸೆಕೆಂಡರಿ' ಪರೀಕ್ಷೆ ಮುಗಿಸಿಕೊಂಡು ಜಯದೇವ ಬೆಂಗಳೂರಿಗೆ ಬಂದು ಬಿಟ್ಟ. ಬಲುದೂರದ ಸಂಬಂಧಿಕರೊಬ್ಬರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತ ಊಟ ಸಂಪಾದಿಸುತ್ತ ಆತ ಓದು ಕಲಿತ. ಹೈಸ್ಕೂಲು ಮುಗಿದ ಮೇಲೆ ಒಂದು ವರ್ಷ ಉಚ್ಚಶಿಕ್ಷಣದ ಆಸೆ ಇಲ್ಲದೆ ಜಯದೇವ ದಿನ ಕಳೆಯಬೇಕಾಯಿತು. ಕೊನೆಗೆ ಒಂದು ವಿದಾರ್ಥಿ ವೇತನ ಆತನ ನೆರವಿಗೆ ಬ೦ತು. ಬಡ ಹಾಸ್ಟಲೊಂದರಲ್ಲಿ ಪುಕ್ಕಟಿಯಾಗಿ ತುತ್ತು ಆನ್ನ ದೊರೆಯಿತು. ಸಣ್ಣ ಹುಡುಗರಿಗೆ ಪಾಠ ಹೇಳಿಕೊಟ್ಟು, ಬಟ್ಟೆಬರೆಗಾಗಿ ಕಾಫಿ ತಿಂಡಿಗಾಗಿ ಒಂದಿಷ್ಟು ಸಂಪಾದಿಸುತ್ತ, ಇಂಟರ್ ಮೀಡಿಯೆಟ್ ಓದಿ ಮುಗಿಸಿದ. ಅದಕ್ಕೂ ಹೆಚ್ಚಿನ ಓದು ಬಲು ಪ್ರಯಾಸದ್ದಾಗಿ ತೋರಿತು.

ಒಂದು ವರ್ಷ ತಾನು ಬಯಸಿದ್ದ ಉದ್ಯೋಗ ದೊರಕಿಸಲು ಶತ ಪ್ರಯತ್ನ ಮಾಡುತ್ತಾ ಕಾಲ ಕಳೆದ ಮೇಲೆ ಈಗ ಈ ವೃತ್ತಿ......

ಮನೆಯಲ್ಲಿ ತನಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ಚಿಕ್ಕವನಾದ ತಮ್ಮ, ಆರು ವರ್ಷ ಚಿಕ್ಕವಳಾದ ತಂಗಿ... ಒಬ್ಬನೇ ತಂದೆಯ ಮಕ್ಕಳು ತಾವು ಮೂವರೂ.

ತಂದೆ ಕೇಳಿದ :

"ಅಂತೂ ಬಿ. ಎ. ಮುಗಿಸೋಕೆ ಆಗಿಲ್ಲ, ಅಲ್ವೇನೋ!"

“ಅದರ ಯೋಚನೆಯೇ ಇಲ್ಲ ಆಪ್ಪಾ...”

ಜಯದೇವನ ತಮ್ಮನನ್ನು ಆ ವರ್ಷ ಕಾಲೇಜು ಸೇರಿಸಬೇಕೆಂಬ ಮಾತು ಬಂತು. ತಂಗಿಯ ಮದುವೆಯ ಪ್ರಸ್ತಾಪವೂ ಕೂಡಾ.

"ಮದುವೆಗೇನು ಅವಸರ?"

“ಹಾಗಂದ್ರೇನೋ ಜಯಣ್ಣ. ಹೆಚ್ಚೆಂದರೆ ಇನ್ನು ಒಂದೆರಡು ವರ್ಷ ಕಾಯಬಹುದು. ಆದರೂ ಈಗ್ಲೇ ನೋಡೋದು ಬೇಡ್ವೆ?"

ಜಯದೇವ ಅಲ್ಲವೆನ್ನಲೂ ಇಲ್ಲ, ಹೌದೆನ್ನಲೂ ಇಲ್ಲ.

“ನಾನು ಇವತ್ತೇ ಹೊರಡ್ಬೇಕು ಅಪ್ಪ.”

"ಒಂದೆರಡು ದಿನ ಇದ್ದು ಹೋಗು. ನಿಮ್ಮಮ್ಮನ್ನ ಕೇಳಿನೋಡು– ಏನಂತಾಳೊ?”