ಪುಟ:Duurada Nakshhatra.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೊಳಗಿನಿಂದ ಮೂರು ನಾಲ್ಕು ಪುಸ್ತಕಗಳನೆತ್ತಿಕೊಂಡು ಹೊರಡಲು ಸಿದ್ಧರಾದರು.

ಅದನ್ನು ಗಮನಿಸಿದ ಮುಖ್ಯೋಪಾಧ್ಯಾಯರೆಂದರು:

“ಮಿಸ್ಟರ್ ನಂಜುಂಡಯ್ಯ, ಒಂದ್ನಿಮಿಷ."

ಹೊರಟಿದ್ದ ನಂಜುಂಡಯ್ಯ ತಡೆದು ನಿಂತು ತಿರುಗಿ ನೋಡಿದರು.

“ಇವರು ಮಿಸ್ಟರ್ ಜಯದೇವ್, ನಮ್ಮ ಸ್ಟಾಫಿನ ಹೊಸ ಸದಸ್ಯ... ಇವರು ಮಿಸ್ಟರ್ ನಂಜುಂಡಯ್ಯ. ನಮ್ಮ ಸಹಾಯಕ ಮುಖ್ಯೋಪಾಧ್ಯಾಯರು.”

“ಸಂತೋಷ! " Pleased to meet you !”

–ಎನ್ನುತ್ತ ನಂಜುಂಡಯ್ಯ ಕೈ ಮುಂದಕ್ಕೆ ಚಾಚಿದರು. ಜಯದೇವನೆದ್ದು ಮುಗುಳ್ನಗುತ್ತ ಅವರೊಡನೆ ಕೈಕುಲುಕಿದ.

ನಂಜುಂಡಯ್ಯ ರಂಗರಾಯರತ್ತ ತಿರುಗಿದರು.

"ಅದೇನು, ನನ್ನನ್ನ ಸಹಾಯಕ ಮುಖ್ಯೋಪಾಧ್ಯಾಯ ಮಾಡಿದ್ರಲ್ಲಾ?”

“ತಪ್ಪೆನು ನಂಜುಂಡಯ್ಯ? ಈವರೆಗೆ ಇಬ್ರೆ ಇದ್ವಿ, ನೀವು ಬರೇ ಅಸಿಸ್ಟೆಂಟ್ ಆಗಿದ್ರಿ. ಇನ್ನು ನಾವು ಮೂವರು. ಅಂದಮೇಲೆ ನೀವು ಅಸಿಸ್ಟೆಂಟ್ ಎಚ್. ಎಮ್. ಅಲ್ವೆ?"

“ಸರಿ! ಸರಿ!"

ಅವರಿಬ್ಬರನ್ನೂ ಜಯದೇವ ನೆಟ್ಟ ದೃಷ್ಟಿಯಿಂದ ನೋಡಿದ; ಆ ಸಂಭಾಷಣೆಯನ್ನು ಪೃಥಕ್ಕರಿಸಿದ. ರಂಗರಾಯರ ಮಾತಿನಲ್ಲಿ ಸೂಕ್ಷ್ಮ ವ್ಯಂಗ್ಯವಿದ್ದರೆ, ಅದನ್ನು ತಿಳಿದುಕೊಳ್ಳಲಾರದೆ ಹುಟ್ಟಿದ ಸಮಾಧಾನ ನಂಜುಂಡಯ್ಯನವರ ಮಾತಿನಲ್ಲಿತ್ತು.

ನಂಜುಂಡಯ್ಯ ಆತ್ಮಸಂತೋಷದಿಂದ ನಗುತ್ತಲೇ ಇದ್ದು, ಜಯದೇವನನ್ನು ಮೇಲಿನಿಂದ ಕೆಳಗಿನವರೆಗೂ ದೃಷ್ಟಿ ಹಾಯಿಸಿ ನೋಡಿದರು... ಬಸ್ ಪ್ರಯಾಣದಿಂದ ಮಲಿನವಾದ ಬಟ್ಟೆ... ಶಾಲೆಗೆ ಬರುವಾಗ ಬದಲಾಯಿಸಬೇಕೆಂದು ಕೂಡಾ ತೋರಲಿಲ್ಲವೇನೋ ಆತನಿಗೆ! ... ಕಡುಬಡವನೋ ಏನೋ...

“ನಿತ್ಯಾನಂದ ಸರ್ವೀಸಿನಲ್ಲಿ ಬಂದಿರಾ?"