ಪುಟ:Duurada Nakshhatra.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೇನೋ. ನಂಜುಂಡಯ್ಯನವರು-ಅವರಿಗೆ ಆಸಕ್ತಿಯೇ ಇಲ್ಲವೇನೋ. ಹಾಗಿದ್ದರೆ ತಾನಾದರೂ ಪುಸ್ತಕಭಂಡಾರವನ್ನು ನೋಡಿಕೊಳ್ಳುವ ಕೆಲಸ ಮಾಡಬೇಕು....

ಕಿಟಕಿಯ ಬಳಿ ನಿಂತು ಜಯದೇವ ಹೊರಕ್ಕೆ ನೋಡಿದ. ಸ್ವಲ್ಪದೂರದಲ್ಲೇ ಊರಿನ ಒಂದೇ ಬೀದಿ ಮಲಗಿತ್ತು. ಧೂಳು ಮುಚ್ಚಿತ್ತು ಅದರ ಮೈಯನ್ನು. ಜನಸಂಚಾರವೇ ಇರಲಿಲ್ಲ. ಅಕ್ಕಪಕ್ಕದಲ್ಲಿ ಕೆಲವು ಅಂಗಡಿಗಳಿದ್ದವು. ಬೀದಿಯಲ್ಲಿ ಒಂಟಿಎತ್ತಿನ ಗಾಡಿಯೊಂದು ನಿಧಾನವಾಗಿ ಚಲಿಸುತಿತ್ತು. ಬಿಸಲಿನ ಮೌನವನ್ನು ಮೆಲ್ಲನೆ ಸೀಳಿಕೊಂಡು ಆ ಗಾಡಿಯ 'ಗಡಕ್, ಗಜಲ್ ಗಡಕ್ ಗಜಲ್' ಸಪ್ಪಳ, ಜಯದೇವನ ಕಿವಿಗೂ ಬಂದು ತಟ್ಟುತಿತ್ತು.

ಈ ಶಾಲೆಗೆ ಸ್ವಂತ ಆಟದ ಬಯಲೇ ಇಲ್ಲವೇನೋ. ಸುತ್ತಮುತ್ತಲೂ ಬೇಕಷ್ಟು ಖಾಲಿ ಜಾಗವಿರುವ ಈ ಊರಿನಲ್ಲೂ ಆಟದ ಬಯಲು ಇಲ್ಲವೆಂದರೆ!... ಜಯದೇವನೇನೂ ಪಂದ್ಯಾಟದ ಪಟುವಾಗಿರಲಿಲ್ಲ. ಆಟದ ಉತ್ಸಾಹವನ್ನೆಲ್ಲ ಬಾಲ್ಯದ ಕಡು ಬಡತನ ಅಳಿಸಿ ಬಿಟ್ಟಿತ್ತು. ಆಟದ ಬಯಲಿನಲ್ಲಿ ಮನಸ್ಸನ್ನ ಉಲ್ಲಾಸವಾಗಿಡಲು ಆಸ್ಪದವಿಲ್ಲದೆ ಆತ, ಕತೆ ಕಾದಂಬರಿಗಳ ಪಾತ್ರಗಳೊಡನೆ ಬೆರೆತು ಅವರ ಸುಖದುಃಖಗಳಲ್ಲಿ ಪಾಲುಗಾರನಾಗುತಿದ್ದ. ಹೈಸ್ಕೂಲಿನಲ್ಲಿದ್ದಾಗಲೇ ಪಠ್ಯದ್ದಲ್ಲದ ಬೇರೆ ಪುಸ್ತಕಗಳನ್ನು ಓದುವ ಹುಚ್ಚು ಅವನಿಗೆ ಬಲವಾಗಿ ಅಂಟಿಕೊಂಡಿತ್ತು. ಒಮ್ಮೆ ಓದುವುದರಲ್ಲೇ ತನ್ಮಯನಾದುದರಿಂದ ಅನ್ನ ಸೀದು ಹೋಗಿತ್ತು. ಮತ್ತೊಮ್ಮೆ, ಹುಳಿಗೆ ಎರಡು ಸಾರೆ ಉಪ್ಪುಹಾಕಿದ್ದ. ಆಗ ಮನೆಯೊಡತಿಯೂ ಯಜಮಾನರೂ ಅವನನ್ನು ಹೀನಾಯವಾಗಿ ಬಯ್ದಿದ್ದರು. ಹತ್ತುಘಂಟೆಗೇ ಮನೆಯ ದೀಪಗಳನ್ನೆಲ್ಲ ಆರಿಸುತಿದ್ದುದರಿಂದ ರಾತ್ರೆ ಓದಲಾಗುತಿರಲಿಲ್ಲ... ಆ ಪರಿಸ್ಮಿತಿ ಬದಲಾದುದು ಜಯದೇವ ಕಾಲೇಜು ಸೇರಿದ ಮೇಲೆ ಮಾತ್ರ... ಪರೀಕ್ಷೆಯ ಸಮಯದಲ್ಲೆಲ್ಲ ವೇಣುಗೋಪಾಲನೊಡನೆ ಆತನ ಮನೆಯಲ್ಲೆ ಜತೆ-ಅಭ್ಯಾಸ, ಆಮೇಲೂ ವೇಣುಗೋಪಾಲ ಅಂದಿದ್ದ:

“ನಿನ್ನ ಸಾಹಿತ್ಯ ಪುಸ್ತಕ ಓದೋಕೆ ಈ ಮನೆ ಅನುಕೂಲವಾಗಿದೆ. ಇಲ್ಲಿಗೇ ಬಂದ್ಬಿಡಯ್ಯ."

ಸುನಂದಾ ಧ್ವನಿಗೂಡಿಸಿದ್ದಳು: