ಪುಟ:Duurada Nakshhatra.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಯರು ಸ್ನಾನದ ಮನೆಯ ವ್ಯವಸ್ಥೆ ಮಾಡಿಬರಲೆಂದು ಒಳ ಹೋದರು. ಜಯದೇವ ಸೊಂಟದ ಮೇಲೆ ಕೈ ಇಟ್ಟು ಗೋಡೆಗೆ ತೂಗ ಹಾಕಿದ್ದ ಭಾವಚಿತ್ರಗಳನ್ನು ನೋಡುತ್ತ ನಿಂತ. ಉಪಾಧ್ಯಾಯರ ಶಿಕ್ಷಣ ಕೇಂದ್ರ... ಯಾವುದೋ ಶಾಲೆಯ ವಾರ್ಷಿಕೋತ್ಸವ... ಇನ್ನೊಂದು ವಿದಾಯ ಸತ್ಕಾರಕೂಟ....ರಂಗರಾಯರು ಹೆಂಡತಿಯೊಡನೆ ಕುಳಿತಿದ್ದ ಕುಟುಂಬ ಚಿತ್ರವೊಂದು... ಅದರಲ್ಲಿ ತನ್ನ ಸಮವಯಸ್ಕರಂತಿದ್ದ ಇಬ್ಬರು ಹುಡುಗರೂ ಒಬ್ಬ ಹುಡುಗಿಯೂ ನಿಂತಿದ್ದರು...

ಹಿಂತಿರುಗಿ ಬಂದ ರಂಗರಾಯರು, ಜಯದೇವ ಭಾವಚಿತ್ರಗಳನ್ನು ನೋಡುತ್ತಲಿದ್ದುದನ್ನು ಕಂಡು ನಕ್ಕರು.

“ಆಗಲೇ ನಮ್ಮ ಸಂಸಾರದ ಪರಿಚಯ ಮಾಡ್ಕೋತಾ ಇದೀರಿ ಅಲ್ವೆ?” ಅವರೂ ಜಯದೇವನ ಸಮೀಪಕ್ಕೆ ಬಂದರು.

“ನೋಡಿ ಈ ಚಿತ್ರ. ಇವನು ನಮ್ಮ ದೊಡ್ಡ ಹುಡುಗ ಗೋಪಾಲ ಕೃಷ್ಣ, ಬಿ.ಎಸ್.ಸಿ. ಮಾಡಿದಾನೆ. ಭದ್ರಾವತಿ ಕಾರ್ಖಾನೇಲಿ ಕೆಲಸ ಸಿಕ್ಕಿದೆ. ಇವನು ರಾಮಣ್ಣ, ಎಸ್.ಎಸ್.ಎಲ್.ಸಿ. ಆದ್ಮೇಲೆ ಮೆಡಿಕಲ್ ಸ್ಕೂಲಿಗೆ ಹಾಕಿದೀನಿ. ಬೆಂಗಳೂರಲ್ಲಿ ಓದ್ತಿದಾನೆ. ಇವಳು ನಮ್ಮ ಹುಡುಗಿ ಸರೋಜಾ, ಹೋದ ವರ್ಷ ಮದುವೆಯಾಯ್ತು. ಹುಡುಗ ಬಿ. ಇ.ಮಾಡ್ಕೊಂಡಿದಾನೆ. ಬೆಂಗಳೂರಲ್ಲಿ ಚೀಫ್ ಇಂಜಿನಿಯರ ಆಫೀಸ್ನಲ್ಲಿ ಕೆಲಸ. ಸರೋಜಾನೂ ಅಲ್ಲೇ ಇದಾಳೆ ಮಾವನ್ಮನೇಲಿ.”

ತಾನೂ ಏನಾದರೂ ಅನ್ನಬೇಕೆಂದು ಜಯದೇವನೆಂದ:

“ನಿಮ್ಮ ಎರಡ್ನೇ ಮಗನೂ ಅಳಿಯನ ಮನೇಲೆ ಇದಾರೇನೊ ?

“ಇಲ್ಲವಪ್ಪ, ಅದೆಲ್ಲಾ ಓದೋಕೆ ಅನುಕೂಲವಾಗಿರೊಲ್ಲ ಅಂತ ಹಾಸ್ಟೆಲ್ನಲ್ಲೆ ಇರಿಸಿದೀನಿ."

“ಅದೂ ನಿಜವೆನ್ನಿ. ಮೆಡಿಕಲ್ ಸ್ಕೂಲ್ನಲ್ಲಿ ಓದೋದು ಜಾಸ್ತಿ ಇರತ್ತೆ.”

“ಎಂ.ಬಿ.ಬಿ.ಎಸ್. ಓದಿಸ್ಬೇಕೂಂತಾನೇ ಇದ್ದೆ. ಆದರೆ ಅದಕ್ಕೆ ಇನ್ನೆರಡು ವರ್ಷ ಕಾಲೇಜ್ನಲ್ಲಿ ಓದ್ಬೇಕು. ಆಮೇಲೂ ಕೂಡಾ ಸೀಟು ಸಿಗುತ್ತೆ ಅನ್ನೋ ಭರವಸೆ ಏನು?"