ಜಯದೇವ ಮೌನವಾಗಿಯೆ ಇದು ಹೌದೆಂದು ತಲೆದೂಗಿದ.
ಶಂಕರಪ್ಪನ ಮನೆಯಲ್ಲೂ ಉಪಾಧ್ಯಾಯರಿಗೆ ಕಾಫಿಯಾಯಿತು, ಅದು ಮುಗಿಯುತ್ತ ಆ ಅಧ್ಯಕ್ಷರು ಕೇಳಿದರು :
“ಹೊಸ ಮೇಷ್ಟ್ರ, ಊಟ-ವಸತಿ–..?
“ಹೋಟ್ಲಲ್ಲಿ ಊಟ ಮಾಡ್ತಾರಂತೆ. ಸದ್ಯ ಶಾಲೆಯಲ್ಲೇ ವಸತಿ ಮಾಡ್ಕೊಳ್ಲಿಂತ'
ಹಾಗೆ ಹೇಳಿದವರು ನಂಜುಂಡಯ್ಯ. ಹೇಳಿದ ಮೇಲೆ ಅವರು ರಂಗರಾಯರತ್ತ ನೋಡಿ ಕೇಳಿದರು :
“ಆಗದೆ ಸಾರ್?”
ನಂಜುಂಡಯ್ಯನೇ ಮುಖ್ಯೋಪಾಧ್ಯಾಯರ ಪಾತ್ರವಹಿಸಿ ಮಾತನಾಡಿದ ಹಾಗಿತ್ತು.
“ಓಹೋ.. ಆಗದೇನು?
"ಬರ್ತಾ ಇರಿ ಆಗಾಗ್ಗೆ. ನಮ್ಮನೆಗೆ ಎಲ್ಲಾ ಪೇಪರುಗ್ಳೂ ಬರ್ತವೆ...”
ಎಂದರು ಶಂಕರಪ್ಪ, ಉಪಾಧ್ಯಾಯತ್ರಯರನ್ನು ಬೀಳ್ಕೋಡುತ್ತಾ.
ರಂಗರಾಯರ ಮನೆಯಲ್ಲಿ ರಾತ್ರೆ ಮಲಗಲೆಂದು ಜಯದೇವ ಸಿದ್ಧತೆ ಮಾಡಿಕೊಳ್ಳುತಿದ್ದಾಗ, ಮುಖ ಬಾಡಿಸಿಕೊಂಡು ಬೀಸಣಿಕೆಯಿಂದ ಗಾಳಿ ಹಾಕಿಕೊಳ್ಳುತಿದ್ದ ಆ ಮುಖ್ಯೋಪಾಧ್ಯಾಯರೆಂದರು :
“ನೀವು ನಂಜುಂಡಯ್ಯನ ವಿಶ್ವಾಸಗಳಿಸ್ಕೊಂಡ್ರಿ, ನಿಮ್ಮನ್ನ ಅಭಿನಂದಿಸ್ಬೇಕು ಜಯದೇವ.”
“ಯಾಕೆ ಹೇಳ್ತೀರಿ ಸಾರ್, ಹಾಗೆ?
“ಅಲ್ವೆ! ಅದೇನು ಸಾಮಾನ್ಯ ವಿಷಯವೆ? ಸದ್ಯ ಶಾಲೆಯಲ್ಲೆ ಮಲಕೊಳ್ಳೀಂತ ನಾನೇ ಹೇಳೋಣಾಂತಿದ್ದೆ. ಆದರೆ ನಂಜುಂಡಯ್ಯನಿಗೆ ಹೆದರಿ ಹೇಳ್ಲಿಲ್ಲ, ಈಗ ನೋಡಿ...!”
ಜಯದೇವನಿಗೆ ವ್ಯಥೆಯಾಯಿತು. ರಂಗರಾಯರೇ ಮಾತು ಮುಂದುವರಿಸಿದರು :
“ನಂಜುಂಡಯ್ಯ ನಿಮಗೆ ಹೇಳಿದ್ರೂ ಹೇಳಿರ್ಬಹುದು. ನನಗೆ