೨೮ ಏಕಾಂಗಿನಿ
ಹಿಂದೆ ಸುನಂದಾ ಗಂಡನ ಮನೆಗೆ ಹೋದಾಗ ಬೀಳ್ಕೊಡಲು ಬಂದಿದ್ದಳು ಆ ತಂಗಿ...
ತಂದೆಯ ಜತೆಯಲ್ಲಿ ರೈಲು ನಿಲ್ದಾಣದ ತನಕ ಸುನಂದೆಯೂ ಬರುವಳೆಂದೇ ಗೊತ್ತಾಗಿತ್ತು. ಮೂವರು ಪ್ರಯಾಣ ಹೊರಡಬಾರದೆನ್ನುವುದೂ ಅದಕ್ಕೊಂದು ಕಾರಣ. ಆದರೆ ಆ ಕುದುರೆ ಗಾಡಿಯಲ್ಲಿ ಜಾಗವಿರಲಿಲ್ಲ.
"ಈ ಸಾಮಾನುಗಳ ಜತೇಲಿ ನಾಲ್ಕು ಜನ ಕೂತ್ಕೊಳ್ಳೊಕಾಗೋಲ್ಲ," ಎಂದು ಅಸಹಾಯತೆಯ ಧ್ವನಿಯಲ್ಲಿ ಸುನಂದೆ ತಂದೆ ನುಡಿದರು.
ವೆಂಕಟರಾಮಯ್ಯ ಬೀದಿಯುದ್ದಕ್ಕೂ ಅತ್ತಿತ್ತ ನೋಡುತ್ತ ಕೇಳಿದ:
"ಇನ್ನೊಂದು ಜಟಕಾ ತರಿಸೋಣ. ಆಗದೆ?"
"ಜಟಕಾ ಬೇಕಾದರೆ ಮಾರ್ಕಟು ಚೌಕಕ್ಕೇ ಹೋಗ್ಬೇಕು.ಇಲ್ಲೆಲ್ಲಿ ಸಿಗುತ್ತೆ? ಟೈಮೂ ಆಘೋಯ್ತು."
ನಿಲ್ದಾಣದವರೆಗೆ ತಾನೂ ಹೋಗಬಹುದೆಂದು ಕೊನರಿದ ಆಸೆಯನ್ನು ಅಷ್ಟರಲ್ಲೆ ಹಿಂದಕ್ಕೆ ತಳ್ಳಿ ಸುನಂದಾ ಅಂದಳು.
"ಏನೂ ಬೇಡ ಅಪ್ಪಾ. ತಡವಾಗುತ್ತೆ. ಆಮೇಲೆ ರೈಲಲ್ಲಿ ಕೂತಿರೋಕೆ ಸರಿಯಾಗಿ ಸೀಟಂ ಸಿಗೋಲ್ಲ ಸರಸ್ವತೀನ ಎತ್ಕೊಂಡು ನೀವು ಹೊರಡಿ."
ವೆಂಕಟರಾಮಯ್ಯ ಮೊದಲು ಗಾಡಿಯನ್ನೇರಿದ. ಬೀದಿ ದೀಪದ ಬೆಳಕಿನಲ್ಲಿ ಕೈ ಗಡಿಯಾರವನ್ನು ನೋಡಿದ.
ವಿಜಯಾ ತುಟ ಬಿಗಿದುಕೊಂಡು ತಾಯಿಗೆ ಪ್ರಣಾಮ ಮಾಡಿದಳು ಅಕ್ಕನ ಎದೆಯಲ್ಲಿ ಮುಖವಿಟ್ಟಳು. ಸರಸರನೆ ಹೊರಕ್ಕಿಳಿದು, ಅಕ್ಕಪಕ್ಕದ ಮನೆಗಳೆದುರು ನಸು ಬೆಳಕಿನಲ್ಲಿ ನಿಂತಿದ್ದ ಪರಿಚಿತ ಹೆಂಗಸರನ್ನೊಮ್ಮೆ ನೋಡಿದಳು. ಗಂಡ ನೀಡಿದ ಕೈಯನ್ನು ಹಿಡಿದು ಗಾಡಿಯನ್ನೇರಿದಳು.
ಸಾಬಿಯ ಕುದುರೆಗಾಡಿ 'ಟೇಸನಿ'ಗೆ ಹೊರಟಿತು.
ಬಹಳ ಹೊತ್ತು ಅಂಗಳದಲ್ಲೆ ನಿಂತ ಆನಂತರ, ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ, ಬರಿದಾಗಿದ್ದ ಮನೆಯನ್ನು ಸುನಂದೆಯ ತಾಯಿ ಹೊಕ್ಕರು.
ಸುನಂದೆಯೂ ಒಳಬಂದಳು. ಒಂಟಿಯಾಗಿದ್ದ ಕೊಠಡಿ ಆಕೆಯನ್ನು ಕರೆಯಿತು. ಅಲ್ಲಿ ದೀಪ ಆರಿಸಿ, ಹೊರಗಿನ ಕತ್ತಲೆಯನ್ನು ಕಿಟಕಿಯ ಮೂಲಕ ದಿಟ್ಟಿಸುತ್ತ, ಆಕೆ ನಿಂತಳು ಕಣ್ಣೀರ ಧಾರೆಗಳೆರಡು ಕಪೋಲಗಳನ್ನು ತೋಯಿಸುತ್ತ ಸದ್ದಿಲ್ಲದೆ ಕೆಳಕ್ಕೆ ಹರಿದುವು.